ಗಣಿಧಣಿ ಕೇಸ್ ಕೈ ಬಿಡಲು ಬಿಜೆಪಿ ಜತೆ 500 ಕೋಟಿ ಡೀಲ್- ಹೆಚ್ಡಿಕೆ
ಬೆಂಗಳೂರು, ಮಾರ್ಚ್ 23: "ಗಣಿಧಣಿ ಒಬ್ಬರ ಮೇಲಿನ ಪ್ರಕರಣವನ್ನು ಕೈ ಬಿಡಲು ಬಿಜೆಪಿ ಜತೆ 500 ಕೋಟಿ ಒಪ್ಪಂದ ನಡೆದಿದೆ," ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ. ಆದರೆ ಅವರು ಎಲ್ಲೂ ಗಣಿಧಣಿ ಜನಾರ್ಧನ್ ರೆಡ್ಡಿ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ!
ರೆಡ್ಡಿ ಹೆಸರನ್ನು ಉಲ್ಲೇಖಿಸದೆ ಪರೋಕ್ಷ ದಾಳಿ ನಡೆಸಿದ ಕುಮಾರಸ್ವಾಮಿ, "ಬೇಲಕೇರಿ ಬಂದರಿನ ಮೂಲಕ ಅಕ್ರಮ ಅದಿರು ಸಾಗಣೆ ಮಾಡಿದ್ದರ ಬಗ್ಗೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವರದಿ ನೀಡಿದ್ದರು. ಈ ವರದಿಗೆ ಬಿಜೆಪಿ ಸರಕಾರ ಎಳ್ಳು ನೀರು ಬಿಟ್ಟಿದೆ ಮುಂದಿನ ವಿಧಾನಸಭಾ ಚುನಾವಣೆ ವೇಳೆ ಅವರು ಪಾರ್ಟಿ ಫಂಡಿಗೆ 500 ಕೋಟಿ ನೀಡಲಿದ್ದಾರೆ. ಈ ಸಂಬಂಧ ರಾಜ್ಯ ಮತ್ತು ರಾಷ್ಟ್ರ ನಾಯಕರ ಜೊತೆ ಒಪ್ಪಂದ ಕೂಡಾ ಆಗಿದೆ," ಅಂತ ಹೇಳಿದರು.[ಜೆಡಿಎಸ್ ಸಮಾವೇಶದಲ್ಲಿ ಜೆಡಿಎಸ್ ಮುಖಂಡನ ಜೇಬಿಗೆ ಕತ್ತರಿ!]
"ಈ ನಾಯಕರು ನನ್ನ ವಿರುದ್ಧ ಸದನದಲ್ಲಿ ಆರೋಪಗಳನ್ನು ಮಾಡಿದ್ದರು. ನನ್ನನ್ನು ಜೈಲುಗಟ್ಟುವುದಾಗಿಯೂ ಹೇಳಿದ್ದರು," ಎಂದು ಮತ್ತೆ ಜನಾರ್ಧನ್ ರೆಡ್ಡಿ ಹೆಸರನ್ನು ಉಲ್ಲೇಖಿಸದೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಕಚೇರಿಗೆ ಜೆ.ಪಿ ಭವನ ಹೆಸರು ನಾಮಕರಣ ಮತ್ತು ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯ ಗಾಲಿ ಜನಾರ್ಧನ್ ರೆಡ್ಡಿಯಿಂದ ಜಪ್ತಿ ಮಾಡಿದ್ದ 900 ಕೋಟಿಯನ್ನು ವಾಪಸ್ ನೀಡಿತ್ತು. ಈ ಆದೇಶ ಸಾರ್ವಜನಿಕವಾಗಿ ಚರ್ಚಗೆ ಗ್ರಾಸವಾಗಿರುವ ಹೊತ್ತಲ್ಲೇ ಕುಮಾರಸ್ವಾಮಿ ಇಂಥಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ.