ವರ್ಷಕ್ಕೂ ಮೊದಲು ಅಭ್ಯರ್ಥಿಗಳ ಪಟ್ಟಿ; ಏನಿದು ಎಚ್‌ಡಿಕೆ ಲೆಕ್ಕಾಚಾರ!

ಬೆಂಗಳೂರು, ಫೆಬ್ರವರಿ 15; ಮುಂದಿನ ವಿಧಾನಸಭಾ ಚುನಾವಣೆಗೆ ಕೆಲವು ಲೆಕ್ಕಾಚಾರ, ಹಲವು ತಂತ್ರದೊಂದಿಗೆ ಜೆಡಿಎಸ್ ಪಕ್ಷವನ್ನು ಸಿದ್ಧಗೊಳಿಸುತ್ತಿರುವ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಶೀಘ್ರವೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲು ತೀರ್ಮಾನಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ರಾಜ್ಯ ಜೆಡಿಎಸ್‌ನಲ್ಲಿ ಕೆಲವು ನಾಯಕರು ಪಕ್ಷವನ್ನು ತೊರೆದಿದ್ದಾರೆ, ಇನ್ನು ಕೆಲವು ನಾಯಕರು ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಮತ್ತೆ ಕೆಲವರು ಮೌನಕ್ಕೆ ಶರಣಾಗಿದ್ದಾರೆ. ಹೀಗಿದ್ದರೂ ಆತ್ಮವಿಶ್ವಾಸ ಕಳೆದುಕೊಳ್ಳದ ಜೆಡಿಎಸ್ ನಾಯಕ, ಎಚ್. ಡಿ. ಕುಮಾರಸ್ವಾಮಿ ಪಕ್ಷವನ್ನು ಸಂಘಟಿಸಿ 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುವ ಬರುವ ಪಣತೊಟ್ಟಿದ್ದಾರೆ.

ಎಚ್. ಡಿ. ಕುಮಾರಸ್ವಾಮಿ ಇದುವರೆಗೆ ಹಾಸನದ ರಾಜಕೀಯದಲ್ಲಿ ಮೂಗು ತೂರಿಸಿದ್ದು ಕಡಿಮೆಯೇ. ಆ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದು ಕೂಡ ಕಡಿಮೆಯೇ. ಅಲ್ಲಿ ಆಗೊಮ್ಮೆ ಈಗೊಮ್ಮೆ ದೇವೇಗೌಡರು ರಾಜಕೀಯವಾಗಿ ಮಾತನಾಡುತ್ತಾರೆ. ಉಳಿದಂತೆ ಏನೇ ಮಾತನಾಡುವುದು, ರಾಜಕೀಯ ಮಾಡುವುದು ಇದ್ದರೆ ಮಾಜಿ ಸಚಿವ ಎಚ್. ಡಿ. ರೇವಣ್ಣ ಮಾತ್ರ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಆದರೂ ಹಾಸನಕ್ಷೇತ್ರದ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಎಚ್. ಡಿ. ಕುಮಾರಸ್ವಾಮಿ, "ನಾನು ಹಾಸನ ಜಿಲ್ಲೆಯ ರಾಜಕೀಯ ಬಗ್ಗೆ ಮೂಗು ತೂರಿಸಿಲ್ಲ. ಈ ಬಾರಿ ಹಾಸನ ವಿಧಾನಸಭಾ ಕ್ಷೇತ್ರವೊಂದನ್ನು ಸೂಕ್ಷ್ಮವಾಗಿ ತೆಗೆದುಕೊಳ್ಳುತ್ತೇನೆ. ನಾನು ಸಿಎಂ ಆಗಿದ್ದ ವೇಳೆ ಹಾಸನ ಜಿಲ್ಲೆಗೆ ದೊಡ್ಡಮಟ್ಟದಲ್ಲಿ ಕೆಲಸ ಮಾಡಿದ್ದೇನೆ. ಹಾಸನ ವಿಧಾನಸಭಾ ಕ್ಷೇತ್ರದ ಬಗ್ಗೆ ನಾನೇ ಸಲಹೆ ನೀಡುತ್ತೇನೆ. ನಮ್ಮ ಕುಟುಂಬದವರು ಸ್ಪರ್ಧಿಸುತ್ತಾರೆ ಎನ್ನುವುದು ಊಹಾಪೋಹ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ನಿಷ್ಠಾವಂತ ಮುಖಂಡರಿದ್ದಾರೆ. ಅವರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ಒಂದೂವರೆ ತಿಂಗಳಿನಲ್ಲಿ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸುತ್ತೇನೆ" ಎಂದು ಹೇಳಿದ್ದಾರೆ.

ಭವಾನಿರೇವಣ್ಣ ಕಣಕ್ಕಿಳಿಯುತ್ತಾರಾ?

ಭವಾನಿರೇವಣ್ಣ ಕಣಕ್ಕಿಳಿಯುತ್ತಾರಾ?

ಎಲ್ಲರ ದೃಷ್ಠಿಯೂ ಹಾಸನದ ದೇವೇಗೌಡರ ಕುಟುಂಬದ ಮೇಲೆ ಅದರಲ್ಲೂ ಎಚ್. ಡಿ. ರೇವಣ್ಣರವರ ಮೇಲೆ ನೆಟ್ಟಿದೆ. ಈಗಾಗಲೇ ಪುತ್ರರಿಬ್ಬರನ್ನು ರಾಜಕೀಯಕ್ಕೆ ತಂದಿರುವ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಪತ್ನಿ ಭವಾನಿರೇವಣ್ಣರನ್ನು ಕಣಕ್ಕಿಳಿಸುತ್ತಾರಾ? ಎಂಬ ಕುತೂಹಲ ಕಾಡಲಾರಂಭಿಸಿದೆ. ಭವಾನಿ ರೇವಣ್ಣ ಹಾಸನದ ಯಾವುದಾದರೂ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರಾ? ಅಥವಾ ಮೈಸೂರು ಜಿಲ್ಲೆಯತ್ತ ಮುಖ ಮಾಡುತ್ತಾರಾ? ಎಂಬುದು ಸದ್ಯ ರಹಸ್ಯವಾಗಿ ಉಳಿದಿದೆ.

ನಿಖಿಲ್ ಕುಮಾರಸ್ವಾಮಿ ಕಣಕ್ಕೆ?

ನಿಖಿಲ್ ಕುಮಾರಸ್ವಾಮಿ ಕಣಕ್ಕೆ?

ಎಚ್. ಡಿ. ಕುಮಾರಸ್ವಾಮಿ ಮಟ್ಟಿಗೆ ರಾಮನಗರವೇ ಅವರ ಕಾರ್ಯಕ್ಷೇತ್ರವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತೇ ಬೇರೆಯಾಗಿದೆ. ಅನಿತಾ ಕುಮಾರಸ್ವಾಮಿ ಬದಲಿಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಎಚ್. ಡಿ. ಕುಮಾರಸ್ವಾಮಿ ಕಣಕ್ಕಿಳಿಸುತ್ತಾರೆ ಎಂಬುದು ಈಗ ಹರಡಿರುವ ಸುದ್ದಿಯಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ರಾಮನಗರದ ಹಲವು ಕಾರ್ಯಕ್ರಮಗಳಲ್ಲಿ ನಿಖಿಲ್ ಕುಮಾರಸ್ವಾಮಿ ಪಾಲ್ಗೊಂಡು ಜನರ ಜೊತೆ ಬೆರಯುತ್ತಿದ್ದಾರೆ.

ಶೀಘ್ರವೇ ಅಭ್ಯರ್ಥಿಗಳ ಪಟ್ಟಿ

ಶೀಘ್ರವೇ ಅಭ್ಯರ್ಥಿಗಳ ಪಟ್ಟಿ

ಇದೆಲ್ಲದರ ನಡುವೆಯೂ ಹೊಸ ತಂತ್ರಗಳನ್ನು ಮಾಡುತ್ತಿರುವ ಕುಮಾರಸ್ವಾಮಿ ಮುಂದಿನ ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಈಗಿನಿಂದಲೇ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳೊಳಗೆ ಅದನ್ನು ಬಿಡುಗಡೆ ಮಾಡುವ ಬಗ್ಗೆಯೂ ಹೇಳಿಕೆ ನೀಡಿದ್ದಾರೆ. ಚುನಾವಣೆಗೆ ದಿನಗಳು ಹತ್ತಿರವಾಗುವಾಗ ಕೊನೆಗಳಿಗೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರೆ ಒಂದಷ್ಟು ಗೊಂದಲ, ಭಿನ್ನಾಭಿಪ್ರಾಯಗಳು ಭುಗಿಲೇಳಬಹುದು. ಅದು ಪಕ್ಷಕ್ಕೆ ಹೊಡೆತ ನೀಡಬಹುದು. ಆದರೆ ಈಗಲೇ ಅಭ್ಯರ್ಥಿಗಳ ಘೋಷಣೆ ಮಾಡಿದರೆ ಅದರ ಸಾಧಕ- ಬಾಧಕಗಳನ್ನು ಅರಿಯಲು ಅವಕಾಶವಿರುತ್ತದೆ. ಜತೆಗೆ ಭಿನ್ನಾಭಿಪ್ರಾಯ ಎದ್ದರೂ ಅದನ್ನು ಶಮನಗೊಳಿಸಲು ಸಮಯಾವಕಾಶ ಇರುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿದೆ.

ಪಕ್ಷಕ್ಕೆ ಬಲಕೊಡುತ್ತಾ ಕನ್ನಡ ತಂತ್ರ?

ಪಕ್ಷಕ್ಕೆ ಬಲಕೊಡುತ್ತಾ ಕನ್ನಡ ತಂತ್ರ?

ಒಂದು ಕಾಲದಲ್ಲಿ ಹಳೇ ಮೈಸೂರು ಜೆಡಿಎಸ್‌ನ ಕೈಹಿಡಿದಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಜೆಡಿಎಸ್ ಪ್ರಾಬಲ್ಯ ಕುಗ್ಗುತ್ತಿದೆ. ಕಾಂಗ್ರೆಸ್‍ ಹಿಡಿತ ಸಾಧಿಸುತ್ತಿದ್ದರೆ, ಬಿಜೆಪಿ ಲಗ್ಗೆಯಿಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಡೀ ಮಂಡ್ಯ ಜಿಲ್ಲೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದ ಜೆಡಿಎಸ್ ಅಲ್ಲಿ ಈಗ ಮಂಕಾಗುತ್ತಿದೆ. ಜತೆಗೆ ಒಂದಷ್ಟು ನಾಯಕರು ಪಕ್ಷದಿಂದ ವಿಮುಖರಾಗಿದ್ದಾರೆ. ಹೀಗಿದ್ದರೂ ಕುಮಾರಸ್ವಾಮಿ ಕುಗ್ಗಿದಂತೆ ಕಾಣುತ್ತಿಲ್ಲ. ಪಕ್ಷ ಸಂಘಟನೆಯತ್ತ ನಿಗಾವಹಿಸುತ್ತಿದ್ದಾರೆ.

ಇದೀಗ ಕನ್ನಡಪರ ಸಂಘಟನೆಗಳ ಜತೆಗೆ ಮಾತುಕತೆ ನಡೆಸಿರುವ ಅವರು ಸಣ್ಣಪುಟ್ಟದಾಗಿ ಹರಡಿ ಹೋಗಿರುವ ಸಂಘಟನೆಗಳ ಮುಖಂಡರನ್ನು ಒಂದುಗೂಡಿಸಿ ಪ್ರಾದೇಶಿಕವಾಗಿ ಪಕ್ಷವನ್ನು ಗಟ್ಟಿಗೊಳಿಸುವ ತಂತ್ರ ರಚಿಸಿದ್ದಾರೆ. ಇದು ಯಶಸ್ವಿಯಾಗುತ್ತಾ ಎಂಬುದನ್ನು ಕಾಲವೇ ಹೇಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+