'ಶಾಸಕರು ನನ್ನ ಜೊತೆ ಬಂದು ಸಾಲಗಾರರಾಗುವುದು ಬೇಡ'
ರಾಮನಗರ, ಆಗಸ್ಟ್ 17 : 'ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ 8 ಶಾಸಕರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಭಿನ್ನಮತೀಯ ಶಾಸಕರ ವಿಚಾರದಲ್ಲಿ ರಾಜಿಯಾಗುವುದಿಲ್ಲ' ಎಂದು ಪಕ್ಷ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ರಾಮನಗರದಲ್ಲಿ ಬುಧವಾರ ಮಾತನಾಡಿದ ಕುಮಾರಸ್ವಾಮಿ ಅವರು, 'ಪಕ್ಷದಿಂದ ಅಮಾನತುಗೊಂಡಿರುವ ಶಾಸಕರು ಶ್ರೀಮಂತರಾಗಿಯೇ ಉಳಿಯಲಿ. ನನ್ನ ಬಳಿ ಬಂದು ಸಾಲಗಾರರಾಗುವುದು ಬೇಡ. ಕೇವಲ ಹಣದ ವ್ಯಾಮೋಹವಿರುವವರು ನನ್ನ ಬಳಿ ಬರುವ ಅಗತ್ಯವಿಲ್ಲ' ಎಂದು ತಿಳಿಸಿದರು.[ಗೋಲ್ಡ್ ಫಿಂಚ್ ಹೋಟೆಲಲ್ಲಿ ಗೌಡರಿಗೆ ಪಂಚ್ ಕೊಟ್ಟ ಸ್ವಾಮಿ!]
2015ರ ಜೂನ್ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಬಿ.ಎಂ.ಫಾರೂಕ್ ಅವರಿಗೆ ಮತ ನೀಡಬೇಕು ಎಂದು ಜೆಡಿಎಸ್ ಎಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಿತ್ತು. ಆದರೆ, 8 ಶಾಸಕರು ವಿಪ್ ಉಲ್ಲಂಘನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು.[ಜೆಡಿಯುನತ್ತ ಹೊರಟ ಜೆಡಿಎಸ್ ನ 8 ಶಾಸಕರು?]
ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಕಾರಣಕ್ಕೆ 8 ಶಾಸಕರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಿತ್ತು. ಅಮಾನತುಗೊಂಡ ಶಾಸಕರನ್ನು ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದು ಎಚ್.ಡಿ.ದೇವೇಗೌಡರು ಈಗಾಗಲೇ ಹೇಳಿದ್ದಾರೆ. ಈಗ ಕುಮಾರಸ್ವಾಮಿ ಅವರೂ ಅದನ್ನೇ ಹೇಳಿದ್ದಾರೆ....

ಅಮಾನತುಗೊಂಡ ಶಾಸಕರು
ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಕೆ.ಗೋಪಾಲಯ್ಯ (ಮಹಾಲಕ್ಷ್ಮೀ ಪುರ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ), ಚೆಲುವರಾಯ ಸ್ವಾಮಿ (ನಾಗಮಂಗಲ), ಎಚ್.ಸಿ.ಬಾಲಕೃಷ್ಣ (ಮಾಗಡಿ) ಇಕ್ಬಾಲ್ ಅನ್ಸಾರಿ (ಗಂಗಾವತಿ), ರಮೇಶ್ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ).

ನನ್ನ ಜೊತೆ ಬರುವುದು ಬೇಡ
'ಪಕ್ಷದಿಂದ ಅಮಾನತುಗೊಂಡಿರುವ ಶಾಸಕರು ನನ್ನ ಬಳಿ ಬಂದು ಸಾಲಗಾರರಾಗುವುದು ಬೇಡ. ಅವರು ಶ್ರೀಮಂತರಾಗಿಯೇ ಉಳಿಯಲಿ. ಎಂಟು ಶಾಸಕರು ಮಾಡಿರುವ ತಪ್ಪು ಬೇರೆ. ಜೆ.ಟಿ.ದೇವೇಗೌಡರು ಮಾಡಿರುವ ತಪ್ಪು ಬೇರೆಯಾಗಿದೆ' ಎಂದು ಕುಮಾರಸ್ವಾಮಿ ಹೇಳಿದರು.

ನಾನು ಮಾಡಿರುವ ಅನ್ಯಾಯವೇನು?
'ಕಳೆದ 50 ವರ್ಷಗಳಿಂದ ರಾಜ್ಯಕ್ಕೆ ಕೊಡುಗೆ ನೀಡಿರುವ ಪಕ್ಷದ ವರಿಷ್ಠರ ಬಗ್ಗೆ ಲಘುವಾಗಿ ಮಾತನಾಡುವವರನ್ನು ಇಟ್ಟುಕೊಂಡು ಏನು ಮಾಡಲು ಸಾಧ್ಯ?. ನನಗೆ ಅವರಿಗೆ ಮಾಡಿದ ಅನ್ಯಾಯವೇನು?. ಅವರು ನನಗೆ ಮಾಡಿರುವ ಲಾಭವೇನು? ಎಂದು ಅವರು ಆತ್ಮವಿಮರ್ಶೆ ಮಾಡಿಕೊಳ್ಳಲಿ' ಎಂದು ಕುಮಾರಸ್ವಾಮಿ ಹೇಳಿದರು.

ಪಕ್ಷದಲ್ಲಿರಲು ಬಿಡುವುದಿಲ್ಲ
'ಕಾರ್ಯಕರ್ತರು ಇರುವವರೆಗೂ ಜೆಡಿಎಸ್ ಪಕ್ಷಕ್ಕೆ ಏನೂ ಆಗುವುದಿಲ್ಲ. ಪಕ್ಷಕ್ಕೆ ದ್ರೋಹ ಮಾಡಿದವರನ್ನು ಒಂದು ಕ್ಷಣವೂ ಪಕ್ಷದಲ್ಲಿರಲು ಬಿಡುವುದಿಲ್ಲ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದರು.

ಭಿನ್ನಮತೀಯರು ಜೆಡಿಯು ಸೇರುವ ಸಾಧ್ಯತೆ?
8 ಮಂದಿ ಜೆಡಿಎಸ್ ಶಾಸಕರು ಜೆಡಿಯು ಸೇರುವ ಸಾಧ್ಯತೆ ಇದೆ. 'ಜೆಡಿಯು ಜೊತೆ ಗುರುತಿಸಿಕೊಳ್ಳುವ ಇಷ್ಟವಿದ್ದರೆ ಮಾತುಕತೆ ನಡೆಸೋಣ ಎಂದು ಆ ಪಕ್ಷದ ನಾಯಕರು ಸಂದೇಶ ಕಳುಹಿಸಿದ್ದರು. ಎರಡು ಮತ್ತು ಮೂರನೇ ಹಂತದ ನಾಯಕರ ಜೊತೆ ಚರ್ಚೆ ನಡೆಯುತ್ತಿದೆ. ಜೆಡಿಯು ಸೇರುವ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ' ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಕೆಲವು ದಿನಗಳ ಹಿಂದೆ ಹೇಳಿದ್ದರು.











Click it and Unblock the Notifications