ಹುಣಸೂರಿಗೆ ಅಭ್ಯರ್ಥಿ ಆಯ್ಕೆ; ದೇವೇಗೌಡರ ಮಾನದಂಡವೇನು?
ಬೆಂಗಳೂರು, ಸೆಪ್ಟೆಂಬರ್ 12 : ಹುಣಸೂರು ಕ್ಷೇತ್ರದ ಉಪ ಚುನಾವಣೆಯನ್ನು ಜೆಡಿಎಸ್ ಗಂಭೀರವಾಗಿ ಪರಿಗಣಿಸಿದೆ. ಕ್ಷೇತ್ರದ ಶಾಸಕರಾಗಿದ್ದ ಎಚ್. ವಿಶ್ವನಾಥ್ರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಹುಣಸೂರು ಚುನಾವಣೆ ಬಗ್ಗೆ ಮಾತನಾಡಿದರು. ಈಗಾಗಲೇ ಒಂದು ಬಾರಿ ಹುಣಸೂರಿನಲ್ಲಿ ಅವರು ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಉಪ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ದೇವೇಗೌಡರು, "ನಾನು ಇಂದು ಹುಣಸೂರಿಗೆ ಭೇಟಿ ನೀಡಲಿದ್ದೇನೆ. ಈಗಾಗಲೇ ನನ್ನ ಮನೆಯಲ್ಲಿ ಹುಣಸೂರಿನ ಹಳೆ ಸ್ನೇಹಿತರ ಜೊತೆ ಸಭೆ ಮಾಡಿದ್ದೇನೆ. ಅವರನ್ನು ಕರೆಸಿಕೊಂಡು ಚುನಾವಣೆ ಕುರಿತು ಮಾತನಾಡಿದ್ದೇನೆ" ಎಂದು ದೇವೇಗೌಡರು ಹೇಳಿದರು.
"ಹುಣಸೂರು ಕ್ಷೇತ್ರದಲ್ಲಿ ಉಪ ಚುನಾವಣೆ ಅಥವಾ ಸಾರ್ವತ್ರಿಕ ಚುನಾವಣೆ ಯಾವುದೇ ನಡೆಯಲಿ. ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಹೊರಗಿನ ಅಭ್ಯರ್ಥಿಗೆ ಟಿಕೆಟ್ ನೀಡುವುದಿಲ್ಲ" ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

ಹೊರಗಿನ ಅಭ್ಯರ್ಥಿ ಬೇಡ
"ಹುಣಸೂರು ಕ್ಷೇತ್ರದ ನಾಯಕರು ಪ್ರತಿ ಬಾರಿ ಒಂದೊಂದು ಅಭ್ಯರ್ಥಿಗಳನ್ನು ಹೊರಗಿನಿಂದ ಕರೆದುಕೊಂಡು ಬರುತ್ತೀರಿ. ಆಮೇಲೆ ಅವರನ್ನು ಗೆಲ್ಲಿಸುತ್ತೇವೆ. ಆದರೆ, ಕೊನೆಗೆ ಅವರು ಪಕ್ಷಕ್ಕೆ ದ್ರೋಹ ಮಾಡಿ ಹೋಗುತ್ತಾರೆ ಎಂದು ಹೇಳಿದರು" ಎಂದು ದೇವೇಗೌಡರು ತಿಳಿಸಿದರು.

ಪ್ರಜ್ವಲ್ ರೇವಣ್ಣ ನಿಲ್ಲಿಸಿ
"ಹುಣಸೂರು ಕ್ಷೇತ್ರದ ನಾಯಕರು ಪ್ರಜ್ವಲ್ ರೇವಣ್ಣ ಅವರನ್ನು ನಿಲ್ಲಿಸಿ, ಲೋಕಸಭೆಗೆ ನಾನು ಕಣಕ್ಕಿಳಿಯುವಂತೆ ಮನವಿ ಮಾಡಿದೆ. ಒಬ್ಬ ಯಂಗ್ ಮ್ಯಾನ್ ಪಾರ್ಲಿಮೆಂಟ್ಗೆ ಹೋಗಿದ್ದಾನೆ ಹೀಗಾಗಿ ನಾನು ಮನೆಯಲ್ಲೇ ಕುಳಿತು ಪಕ್ಷ ಕಟ್ಟುವೆ ಎಂದು ಹೇಳಿದ್ದೇನೆ" ಎಂದು ದೇವೇಗೌಡರು ತಿಳಿಸಿದರು.

ಅಭ್ಯರ್ಥಿ ಆಯ್ಕೆ ಮಾಡಿ ಕೊಡುವರು
"ಕ್ಷೇತ್ರದ ನಾಯಕರು ಒಂದು ಸಭೆ ಮಾಡಿ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಉಪ ಚುನಾವಣೆ ಅಥವಾ ಸಾರ್ವತ್ರಿಕ ಚುನಾವಣೆ ಯಾವುದೇ ನಡೆಯಲಿ. ಸ್ಥಳೀಯ ನಾಯಕರಿಗೆ ಟಿಕೆಟ್ ನೀಡುತ್ತೇವೆ" ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

ನಮ್ಮ ಕುಟುಂಬದಿಂದ ಸ್ಪರ್ಧೆ ಇಲ್ಲ
"ಎಚ್. ಡಿ. ಕುಮಾರಸ್ವಾಮಿ ಕೆ. ಆರ್. ಪೇಟೆಗೆ ಹೋಗಿದ್ದಾರೆ. ಅಲ್ಲಿನ ಕಾರ್ಯಕರ್ತರ ಒತ್ತಾಯದ ಮೇರೆಗೆ ನಾನು ಅಲ್ಲಿಗೆ ಹೋಗಲಿದ್ದೇನೆ. ಕಾರ್ಯಕರ್ತರು ಯಾರು ಗುರುತು ಮಾಡುತ್ತಾರೋ ಅವರನ್ನೇ ಅಲ್ಲಿ ಅಭ್ಯರ್ಥಿಯನ್ನಾಗಿ ಮಾಡುತ್ತೇವೆ. ನಮ್ಮ ಕುಟುಂಬದಿಂದ ಯಾರೂ ಉಪ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ" ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಜೊತೆ ಮೈತ್ರಿ
"17 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಿಲ್ಲಬೇಕು ಎಂದು ಏನಿಲ್ಲ.
ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಗುಂಡ್ಲುಪೇಟೆ, ನಂಜನಗೂಡನ್ನು ನಾನೇ ಬಿಟ್ಟು ಕೊಟ್ಟಿದೆ. ಈಗ ಮೈತ್ರಿ ಮುಂದುವರೆಸುವ ಬಗ್ಗೆ ಸೋನಿಯಾ ಗಾಂಧಿ ಏನು ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ನಮಗೆ ತಿಳಿದಿಲ್ಲ" ಎಂದು ದೇವೇಗೌಡರು ಹೇಳಿದರು.












Click it and Unblock the Notifications