ದೇವೇಗೌಡ್ರು ಸಿದ್ದರಾಮಯ್ಯಗೆ ಹಿಡಿಶಾಪ ಹಾಕಿದ್ದೇಕೆ?
Recommended Video
ಮಂಡ್ಯ, ಮಾರ್ಚ್ 31 : ಜೆಡಿಎಸ್ನಿಂದ ಬಂಡಾಯ ಎದ್ದು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರದಿಂದ ಕಾಂಗ್ರೆಸ್ ಸೇರ್ಪಡೆಯಾಗಿರುವ ಪ್ರಭಾವಿ ನಾಯಕ ಚೆಲುವರಾಯಸ್ವಾಮಿ ಅವರಿಗೆ ಅವರ ಸ್ವಕ್ಷೇತ್ರ ನಾಗಮಂಗಲದಲ್ಲೇ ಜೆಡಿಎಸ್ನಿಂದ ಕುಮಾರಪರ್ವ ಬೃಹತ್ ಸಮಾವೇಶವನ್ನು ಮಾಡುವ ಮೂಲಕ ದೇವೇಗೌಡರು ಮತ್ತು ಕುಮಾರಸ್ವಾಮಿ ತಮ್ಮ ತಾಕತ್ ತೋರಿಸಿದ್ದಾರೆ.
ಸಮಾವೇಶಕ್ಕೆ ಬೃಹತ್ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಮೂಲಕ ಜೆಡಿಎಸ್ನ ಭದ್ರಕೋಟೆಯನ್ನು ಯಾರಿಂದಲೂ ಛಿದ್ರ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಬಂಡಾಯ ಶಾಸಕರಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನೇರವಾಗಿ ರವಾನಿಸಿದ್ದಾರೆ.
ಚೆಲುವರಾಯಸ್ವಾಮಿಗೆ ಈ ಚುನಾವಣೆ ಪ್ರತಿಷ್ಠೆಯ ಕಣ
ಇನ್ನೊಂದೆಡೆ 'ಜಾತ್ಯತೀತ ಜನತಾದಳ ನಿನ್ನ ರಾಜಕೀಯ ತಾಯಿ. ಅಂತಹ ತಾಯಿಯನ್ನೇ ಒದ್ದು ಹೋದ ನಿನಗೆ ಈ ಚುನಾವಣೆಯಲ್ಲೇ ರಾಜಕೀಯ ಅಂತ್ಯವಾಗಲಿದೆ' ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಿಡಿಶಾಪ ಹಾಕಿದ್ದಾರೆ.
'ಜೆಡಿಎಸ್ ನಿನಗೆ ಉಪಮುಖ್ಯಮಂತ್ರಿ, ಹಣಕಾಸು ಸಚಿವ ಸ್ಥಾನ ಸೇರಿದಂತೆ ಉನ್ನತವಾದ ಹುದ್ದೆಗಳನ್ನು ಕೊಟ್ಟಿದೆ. ಆದರೂ ನೀನು ಮಾಡಿದ್ದು ಏನು? ಹೆತ್ತ ತಾಯಿಗೇ ದ್ರೋಹ ಬಗೆದಿದ್ದಲ್ಲದೆ, ಅದನ್ನೇ ಮುಗಿಸುತ್ತೇನೆ ಎಂದು ಹೇಳುತ್ತಿದ್ದೀಯಲ್ಲ?' ಎಂದು ದೇವೇಗೌಡರು ವಾಗ್ದಾಳಿ ನಡೆಸಿದರು.
ಪೈಪೋಟಿ ಅಖಾಡದಲ್ಲಿ ಚೆಲುವರಾಯಸ್ವಾಮಿ ಆಟಕ್ಕೆ ಚಿತ್ತಾದ ಜೆಡಿಎಸ್
'ನಾನು ಮತ್ತು ಈ ರಾಜ್ಯದ ಜನತೆ ಬದುಕಿರುವವರೆಗೂ ಅದು ಸಾಧ್ಯವಿಲ್ಲ. ಜೆಡಿಎಸ್ ಎಂದರೆ ಒಂದು ಕಾರ್ಖಾನೆ ಇದ್ದಹಾಗೆ. ಎಷ್ಟು ಜನರನ್ನು ಬೇಕಾದರೂ ಸೃಷ್ಟಿ ಮಾಡುತ್ತದೆ. ಅದು ನಿನ್ನಿಂದ ಸಾಧ್ಯವೇ?' ಎಂದು ದೇವೇಗೌಡರು ಸವಾಲು ಹಾಕಿದ್ದಾರೆ.
'ಜೆಡಿಎಸ್ನ ಎಂಟು ಮಂದಿ ಶಾಸಕರನ್ನು ತಮ್ಮ ಪಕ್ಷಕ್ಕೆ ಕರೆದುಕೊಂಡು ಹೋಗಿ ನಮಗೆ ನೋವು ಕೊಟ್ಟಿದ್ದೀರಿ, ಆ ನೋವಿನ ಸಂಕಷ್ಟದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಧೂಳೀಪಟ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ' ಗೌಡರು ಗುಡುಗಿದರು.
ಮಂಡ್ಯ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ
'ನನಗೀಗ 85 ವರ್ಷ ವಯಸ್ಸಾಗಿದೆ. ರಾಜಕೀಯದಿಂದ ನನಗೇನು ಆಗಬೇಕಿಲ್ಲ. ನನ್ನ ಮಗ ಕುಮಾರಸ್ವಾಮಿಯನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಮಾಡುವ ಉದ್ದೇಶವೂ ನನ್ನದಲ್ಲ' ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
'ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಡಿ.ಕೆ. ಶಿವಕುಮಾರ್ ಅವರು ಚೀಟಿ ಬರೆದುಕೊಟ್ಟು ಜೆಡಿಎಸ್ ಜಾತ್ಯತೀತ ಜನತಾದಳ ಅಲ್ಲ, ಜನತಾದಳ ಸಂಘ ಪರಿವಾರ ಎಂದು ಹೇಳಿಸುತ್ತಾರೆ. ಆದರೆ, ಇದಕ್ಕೆಲ್ಲ ಅಂತ್ಯ ಹಾಡುವ ಸಮಯ ಬಂದಿದೆ' ಎಂದರು.
ಸಮಾವೇಶದುದ್ದಕ್ಕೂ ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಆಕ್ರೋಶಭರಿತರಾಗಿ ಮಾತನಾಡಿದ್ದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವುದರಲ್ಲಿ ಬಿಜೆಪಿ ಮಾತ್ರವಲ್ಲ ಜೆಡಿಎಸ್ ಕೂಡ ಮುಂದಾಗಲಿದೆ ಎಂಬುದು ಗೊತ್ತಾಗುತ್ತಿದೆ.
ಇನ್ನು ಚೆಲುವರಾಯಸ್ವಾಮಿ ವಿರುದ್ಧವೂ ಹರಿಹಾಯ್ದ ದೇವೇಗೌಡರು, 'ಹಣದಾಸೆಗಾಗಿ ತಮ್ಮನ್ನು ಮಾರಿಕೊಂಡು, ಜೆಡಿಎಸ್ಗೆ ಮೋಸ ಮಾಡಿ ಹೋಗಿರುವ ಮುಂದಿನ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಈ ಕ್ಷೇತ್ರದ ಜನತೆಗೆ ವಂಚನೆ ಹಾಗೂ ದ್ರೋಹ ಎಸಗಿದ್ದಾರೆ ಅವರಿಗೆ ತಕ್ಕಪಾಠ ಕಲಿಸುವಂತೆ' ಕರೆ ನೀಡಿದರು.
ಈಗಾಗಲೇ ಮಂಡ್ಯ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕುಮಾರ ಪರ್ವ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದ್ದು, ಇದುವರೆಗಿನ ಸಮಾವೇಶಗಳು ಯಶಸ್ವಿಯಾಗಿದ್ದು, ಸಮಾವೇಶದಲ್ಲಿ ಬಂಡಾಯ ಶಾಸಕರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನಷ್ಟೆ ಟಾರ್ಗೆಟ್ ಮಾಡುತ್ತಿರುವುದು ಕಂಡು ಬರುತ್ತಿದೆ.
ಮೊದಲಿನಿಂದಲೂ ಮಂಡ್ಯ ಜೆಡಿಎಸ್ನ ಭದ್ರಕೋಟೆಯಾಗಿದ್ದು, ಇದೀಗ ನಡೆಯುತ್ತಿರುವ ಸಮಾವೇಶಗಳಿಗೆ ಜನರು ಬರುತ್ತಿರುವುದನ್ನು ನೋಡಿದರೆ ಮುಂದಿನ ಚುನಾವಣೆಯಲ್ಲಿಯೂ ಜನ ಜೆಡಿಎಸ್ನತ್ತ ಒಲವು ತೋರುವ ಲಕ್ಷಣಗಳು ಕಂಡು ಬರುತ್ತಿದೆ.
ಈ ನಡುವೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ರೀತಿಯಲ್ಲಿ ಟಾಂಗ್ ನೀಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಗುರುಶಿಷ್ಯರ ರಾಜಕೀಯ ಕುರುಕ್ಷೇತ್ರದಲ್ಲಿ ಗೆಲುವು ಯಾರಿಗಾಗಬಹುದು? ಎಂಬುದನ್ನು ಕಾದು ನೋಡುವುದು ಅನಿವಾರ್ಯವಾಗಿದೆ.