ಎಸಿಬಿಗೆ ಮತ್ತೆ ಬೆಂಡೆತ್ತಿದ ನ್ಯಾ.ಸಂದೇಶ್: ಪೂರ್ಣ ಮಾಹಿತಿ ಒದಗಿಸದ್ದಕ್ಕೆ ಅತೃಪ್ತಿ
ಬೆಂಗಳೂರು, ಜು.7. ಬೆಂಗಳೂರು ನಗರ ಜಿಲ್ಲಾಧಿಕಾರಿಯಿಂದ ಲಂಚಕ್ಕೆ ಬೇಡಿಕೆ ಪ್ರಕರಣದಲ್ಲಿ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಹೈಕೋರ್ಟ್ ಏಕಸದಸ್ಯಪೀಠ ಮತ್ತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಾರ್ಯನಿರ್ವಹಣೆ ಬಗ್ಗೆ ಮತ್ತೆ ಕಿಡಿಕಾರಿದೆ.
ಅಲ್ಲದೆ, ನ್ಯಾಯಾಲಯದ ಹಿಂದಿನ ಆದೇಶದಂತೆ ಸರ್ಚ್ ವಾರೆಂಟ್ ಜಾರಿ ಮತ್ತು ಸಲ್ಲಿಕೆಯಾಗಿರುವ ಬಿ ರಿಪೋರ್ಟ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿದೆ.
ಎಸಿಬಿ ಪ್ರಕರಣದ ಮಾಹಿತಿಯನ್ನು ಮುಚ್ಚಿಡುತ್ತಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಎಷ್ಟು ಪ್ರಕರಣಗಳಲ್ಲಿ ಎಸಿಬಿ ನ್ಯಾಯಾಲಯಗಳಿಗೆ ಬಿ ರಿಪೋರ್ಟ್ ಗಳನ್ನು ಸಲ್ಲಿಸಿದೆ ಎಂಬ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವಂತೆ ರಿಜಿಸ್ಟ್ರಾರ್ ಜುಡಿಷಿಯಲ್ ರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಪ್ರಕರಣದಲ್ಲಿ ಉಪ ತಹಸೀಲ್ದಾರ್ ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾ.ಎಚ್.ಪಿ. ಸಂದೇಶ್ ಗುರುವಾರ ಎಸಿಬಿ ವಿರುದ್ಧ ಹರಿಹಾಯ್ದರು.
ಕೋರ್ಟ್ ಆದೇಶದ ನಂತರವೇ ಬಂಧನ:
ಹೈಕೋರ್ಟ್ ವಿಚಾರಣೆ ನಂತರವಷ್ಟೇ ಬೆಂಗಳೂರು ನಗರ ಡಿಸಿ ಮಂಜುನಾಥ್ ಅವರನ್ನು ಬಂಧಿಸಲಾಗಿದೆ, ಅವರ ಮೇಲೆ ಮೊದಲೇ ಸ್ಪಷ್ಟ ಸಾಕ್ಷ್ಯವಿದ್ದರೂ ಅವರನ್ನು ರಕ್ಷಿಸುವ ಯತ್ನ ನಡೆಸಿತು. ಕೋರ್ಟ್ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮೇಲೆ ಡಿಸಿಗೆ ಎಸಿಬಿ ನೋಟಿಸ್ ನೀಡಿದರೂ ಅದೂ ಅವರನ್ನು ರಕ್ಷಿಸುವ ಯತ್ನವೇ ಆಗಿತ್ತು ಎಂದು ನ್ಯಾಯಾಲಯ ಕಿಡಿ ಕಾರಿತು.
ಎಸಿಬಿ ಎಡಿಜಿಪಿ ಈ ವಿಚಾರದಲ್ಲಿ ಸಂಸ್ಥೆಯ ಘನತೆ ಉಳಿಸುವ ಬದಲು, ಐಎಎಸ್ ಅಧಿಕಾರಿಯನ್ನು ರಕ್ಷಿಸಲು ಮುಂದಾದರು, ಅವರು ಆತ್ಮಸಾಕ್ಷಿ ಮುಟ್ಟಿಕೊಂಡು ಇಲ್ಲ ಎಂದು ಹೇಳಲಿ ನೋಡೋಣ ಎಂದು ನ್ಯಾಯಪೀಠ ಪ್ರಶ್ನಿಸಿದರು.
99 ಬಿ ರಿಪೋರ್ಟ್ ಸಲ್ಲಿಕೆ:
ವಿಚಾರಣೆ ಅರಂಭವಾಗುತ್ತಿದ್ದಂತೆಯೇ ಎಸಿಬಿ ಪರ ವಕೀಲರು, ನ್ಯಾಯಾಲಯದ ನಿರ್ದೇಶನದಂತೆ ಬಿ ರಿಪೋರ್ಟ್ ಹಾಗೂ ಸಚ್ ವಾರೆಂಟ್ ಗಳ ಮಾಹಿತಿ ಸಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅದನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, ಬಿ ರಿಪೋರ್ಟ್ ಗಳ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಿಲ್ಲ, 2021, 2022 ರ ಅಪೂರ್ಣ ಮಾಹಿತಿಯನ್ನು ನೀಡಲಾಗಿದೆ. 2022 ರಲ್ಲಿ 3 ಬಿ ರಿಪೋರ್ಟ್ ಸಲ್ಲಿಸಲಾಗಿದೆ, ಆ ಬಗ್ಗೆ ನನ್ನ ಬಳಿ ಮಾಹಿತಿ ಇದೆ, ಆದರೂ ನೀವು ಆ ಮಾಹಿತಿ ನಮಗೆ ನೀಡಿಲ್ಲ ಎಂದು ಪ್ರಶ್ನಿಸಿದರು.
ಅಲ್ಲದೆ, ಲಂಚದ ಹಣದೊಂದಿಗೆ ಸಿಕ್ಕಿಬಿದ್ದ ಕೇಸಿನಲ್ಲೂ ಬಿ ರಿಪೋರ್ಟ್ ಹಾಕಲಾಗಿದೆ. ಎಸಿಬಿ ನಿಜವಾದ ಮಾಹಿತಿಯನ್ನು ಹೈಕೋರ್ಟ್ ಗೆ ಸಲ್ಲಿಸಿಲ್ಲ. ಹಾಗಾಗಿ ರಿಜಿಸ್ಟ್ರಾರ್ ಜುಡಿಷಿಯಲ್ ರಿಗೆ 2016ರಿಂದ ಈವರೆಗೆ ಕೋರ್ಟ್ಗೆ ಎಸಿಬಿ ಸಲ್ಲಿಸಿರುವ ಬಿ ರಿಪೋರ್ಟ್ ಗಳ ಮಾಹಿತಿ ನೀಡಲು ಸೂಚನೆ. ನೀಡಿ ವಿಚಾರಣೆ ಜು. 11 ಕ್ಕೆ ಮುಂದೂಡಿತು.
819 ಸರ್ಚ್ ವಾರೆಂಟ್: ಎಸಿಬಿ ನ್ಯಾಯಾಲಯಕ್ಕೆ ನೀಡಿದ ಮಾಹಿತಿಯಲ್ಲಿ 2016ರಿಂದ ಇಲ್ಲಿಯವರೆಗೆ 819 ಸರ್ಚ್ ವಾರೆಂಟ್ ಗಳನ್ನು ಎಸಿಬಿ ಸಂಬಂಧಿಸಿದ ನ್ಯಾಯಾಲಯಗಳಿಂದ ಪಡೆದಿದ್ದು, ಅವುಗಳಲ್ಲಿ 28 ಹೊರತುಪಡಿಸಿದರೆ ಉಳಿದೆಲ್ಲಾ ವಾರೆಂಟ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದೆ. ಕೋರ್ಟ್, ಎಷ್ಟು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವಿಚಾರಣೆಗೆ ಪೂರ್ವಾನುಮತಿ ಬಾಕಿ ಇದೆ ವಿವರ ನೀಡಿ ಎಂದು ಎಬಿಸಿಗೆ ಸೂಚನೆ ನೀಡಿತು.
ಸಿಬಿಐ ಎಸ್ಪಿ ಹಾಜರಿಗೆ ಸೂಚನೆ:
ಬಳ್ಳಾರಿಯಲ್ಲಿ ಗಣಿಗಾರಿಕೆ ಪ್ರಕರಣ ನಡೆದಾಗ ಹಾಲಿ ಎಸಿಬಿ ಎಡಿಜಿಪಿ ಆಗಿರುವ ಸೀಮಂತ್ ಕುಮಾರ್ ಸಿಂಗ್ ಅಲ್ಲಿನ ಡಿಸಿಯಾಗಿದ್ದರು. ಅವರ ಮೇಲೂ ಗಣಿ ಕಪ್ಪ ಪಡೆದ ಆರೋಪ ಎದುರಾಗಿತ್ತು. ಹಾಗಾಗಿ ಆ ಕುರಿತ ತನಿಖೆ ಎಲ್ಲಿಯವರೆಗೆ ಬಂದಿದೆ ಎಂ ಬಗ್ಗೆ ವಿವರ ನೀಡಲು ಸಿಬಿಐ ಎಸ್ ಪಿ ಮುಂದಿನ ವಿಚಾರಣೆ ವೇಳೆಗೆ ಹಾಜರಿರಬೇಕು ಎಂದು ನಿರ್ದೇಶನ ನೀಡಿತು.
Recommended Video