ಎರಡನೇ ಪತಿ ಜೊತೆ ಸೇರಿ ಮೊದಲನೇ ಪತಿಯನ್ನು ಕೊಂದಿದ್ದ ಮಹಿಳೆಗೆ ಕುತ್ತು
ಬೆಂಗಳೂರು,ಆ.19. ಎರಡನೇ ಪತಿಗೂಡಿ ಮೊದಲ ಪತಿಯನ್ನು ಕೊಲೆಗೈದ ಆರೋಪದ ಎದುರಿಸುತ್ತಿದ್ದ ಮಹಿಳೆಗೆ ಮತ್ತೆ ಕುತ್ತು ಬಂದಿದೆ.
ಆಕೆಯನ್ನು ಆರೋಪ ಮುಕ್ತಗೊಳಿಸಿ ವಿಚಾರಣಾಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಹಾಗಾಗಿ ಇದೀಗ ಆಕೆ ವಿಚಾರಣೆ ಎದುರಿಸಲೇಬೇಕಿದೆ. ಜೊತೆಗೆ ಕೋರ್ಟ್ ಮೇಲ್ನೋಟಕ್ಕೆ ಕೊಲೆಗೆ ಸಾಕ್ಷ್ಯ ಎಂದು ನ್ಯಾಯಾಲಯ ಹೇಳಿರುವುದು ಆಕೆಗೆ ಶಿಕ್ಷೆ ಆಗುವುದು ಬಹುತೇಕ ಖಾತ್ರಿಯಾಗಿದೆ.
ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿ ಮಹಿಳೆಯ ಮೊದಲ ಗಂಡನ ತಂದೆ ಕೆ.ಸಿ.ರಾಮು ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಎಚ್.ಬಿ. ಪ್ರಭಾಕರ ಶಾಸ್ತ್ರಿ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.

ಆಸ್ತಿ ಉಳಿಸಿಕೊಳ್ಳುವ ಉದ್ದೇಶದಿಂದ ಅಪರಾಧಿಕ ಕೃತ್ಯ ಎಸಗಿದ್ದಾರೆ ಎಂಬ ಆರೋಪವನ್ನು ವಿಚಾರಣಾ ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಸಾಕ್ಷ್ಯಾಧಾರಗಳ ಪರಿಶೀಲನೆ ನಡೆಸಿದ ನಂತರ ತೀರ್ಮಾನ ಮಾಡಬೇಕಾಗುತ್ತದೆ. ಮಮತಾ ವಿರುದ್ದ ಕಾನೂನು ಪ್ರಕ್ರಿಯೆ ಮುಂದುವರಿಸಲು ಸಾಕಷ್ಟು ದಾಖಲೆಗಳು ಇವೆ ಎಂದು ಆಭಿಪ್ರಾಯಪಟ್ಟು ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿದ್ದು, ಆಕೆ ವಿರುದ್ಧದ ಆರೋಪಗಳ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದೆ.
ದ್ವಿಪತ್ನಿತ್ವ ಆರೋಪ:
"ಆರೋಪಿ ಮಹಿಳೆ ಮಮತಾ ವಿರುದ್ಧ ದ್ವಿಪತಿತ್ವ ಆರೋಪವಿದೆ. ಅದನ್ನು ಪೊಲೀಸರು ನೇರವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ. ಜತೆಗೆ, ಮೊದಲ ಪತಿಯ ಕೊಲೆಗೆ ಒಳಸಂಚು ರೂಪಿಸಿದರು ಎಂಬ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಧಾರ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದ ವಿಚಾರಣಾ ನ್ಯಾಯಾಲಯವು ಮಮತಾ ವಿರುದ್ಧದ ಆರೋಪಗಳನ್ನು ಕೈಬಿಟ್ಟಿದೆ. ಆದರೆ, ಆರೋಪ ಪಟ್ಟಿ ಮತ್ತು ಸಾಕ್ಷಿಗಳ ಹೇಳಿಕೆ ಗಮನಿಸಿದಾಗ ಮಮತಾ ಮೇಲಿನ ಆರೋಪಗಳು ಸಾಬೀತುಪಡಿಸುವ ಹಾಗೂ ಅವರನ್ನು ಪ್ರಾಸಿಕ್ಯೂಷನ್ಗೆ ಒಳಪಡಿಸುವುದಕ್ಕೆ ಸಾಕಷ್ಟ ಪುರಾವೆ ಇದೆ'' ಎಂದು ಹೈಕೋರ್ಟ್ ತಿಳಿಸಿದೆ.
ಅಲ್ಲದೆ, ದೂರಿನಲ್ಲಿ ಅಪರಾಧಗಳ ಕೃತ್ಯದ ಬಗ್ಗೆ ಆರೋಪ ಇರುವಾಗ, ಪೊಲೀಸರು ಎಲ್ಲಾ ಆರೋಪಗಳನ್ನು ಪರಿಗಣಿಸಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಬೇಕಾಗುತ್ತದೆ. ಪೊಲೀಸರು ತನಿಖೆ ಸಂದರ್ಭದಲ್ಲಿ ಮೇಲ್ನೊಟಕ್ಕೆ ಕೃತ್ಯ ನಡೆದಿದೆ ಎಂಬುದು ಸಾಬೀತುಪಟ್ಟಾಗ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಬೇಕಾಗುತ್ತದೆ.
ಪ್ರಕರಣದ ಹಿನ್ನೆಲೆ:
ಮಂಡ್ಯ ಜಿಲ್ಲೆಯ ಕೆ.ಆರ್.ಮಂಜುನಾಥ್ ಮತ್ತು ಆರ್.ಮಮತಾ ಮದುವೆಯಾಗಿದ್ದರು. ಮಂಜುನಾಥ್ ಕಾಣೆಯಾಗಿದ್ದಾಗ ಮಮತಾ, ವೈ.ಡಿ. ಮಂಜುನಾಥ್ ಎಂಬಾತನನ್ನು ಎರಡನೇ ವಿವಾಹವಾಗಿದ್ದರು. ಒಂದೂವರೆ ವರ್ಷದ ಬಳಿಕ ಮೊದಲ ಪತಿ ವಾಪಸಾಗಿದ್ದು, ಪುತ್ರಿಯನ್ನು ತನ್ನ ಜೊತೆ ಕಳುಹಿಸಿಕೊಡುವಂತೆ ಕೇಳಿದ್ದರು. ಆದರೆ, 2015ರ ಆ.25ರಂದು ಮಂಡ್ಯದ ವಿ.ಸಿ. ಕಾಲುವೆ ಬಳಿ ಕೆ.ಆರ್. ಮಂಜುನಾಥ್ ಮೃತದೇಹ ಪತ್ತೆಯಾಗಿತ್ತು.
ಈ ಕುರಿತು ಮೃತನ ತಂದೆ ಕೆ.ಸಿ.ರಾಮು ಮಂಡ್ಯ ಗ್ರಾಮೀಣ ಪೊಲಿಸರಿಗೆ ಕೊಲೆ ಆರೋಪ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರ ಅಪ್ರಾಪ್ತ ಮಗಳ ಹೆಸರಿಗೆ ಬರುವ ಆಸ್ತಿ ಉಳಿಸಿಕೊಳ್ಳಲು ಮೊದಲ ಗಂಡನನ್ನು ಎರಡನೇ ಗಂಡನದೊಂದಿಗೆ ಪಿತೂರಿ ನಡೆಸಿ ಕೊಲೆ ಮಾಡಿದ ಮತ್ತು ಮೊದಲ ಗಂಡ ಬುದುಕಿರುವಾಗಲೇ ಎರಡನೇ ಮದುವೆಯಾದ (ದ್ವಿಪತಿತ್ವ) ಆರೋಪದ ಮೇಲೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯವು ಮಮತಾಳನ್ನು ಖುಲಾಸೆಗೊಳಿಸಿತ್ತು.












Click it and Unblock the Notifications