ಶ್ರೀರಂಗಪಟ್ಟಣ: ಕಾವೇರಿಯಲ್ಲಿ ಅಸ್ಥಿ ವಿಸರ್ಜನೆಗೆ ನಿರ್ಬಂಧ?
ಬೆಂಗಳೂರು, ಜುಲೈ 30: ಕಾವೇದಿ ನದಿ ದಂಡೆಯಲ್ಲಿ ಅಸ್ಥಿ ವಿಸರ್ಜನೆ ಸೇರಿದಂತೆ ಇತರ ಮಾಲಿನ್ಯಕಾರಕ ಚಟುವಟಿಕೆಗಳಿಗೆ ನಿರ್ಬಂಧ ಹೇರುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರು ನಿವಾಸಿ ವಕೀಲ ಕುಶಾಲ್ ಕುಮಾರ್ ಕೌಶಿಕ್ ಸೇರಿ 6 ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಹಾಗೂ ನ್ಯಾ. ಕೆ. ವಿ. ಅರವಿಂದ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಡ್ಯ ಜಿಲ್ಲಾಧಿಕಾರಿ, ಮಂಡ್ಯ ಉಪ ವಿಭಾಗಾಧಿಕಾರಿ, ಶ್ರೀರಂಗಪಟ್ಟಣ ತಹಶೀಲ್ದಾರ್, ಶ್ರೀರಂಗಪಟ್ಟಣ ನಗರಸಭೆಗೆ ನೋಟಿಸ್ ಜಾರಿಗೊಳಿಸಿತು. ಅರ್ಜಿ ಆಕ್ಷೇಪಣೆ ಸಲ್ಲಿಸಲು ಎಲ್ಲಾ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ಸೆ.11ಕ್ಕೆ ಮುಂದೂಡಿತು.
ಮಾರ್ಗಸೂಚಿಗೆ ಆಗ್ರಹ: ಅರ್ಜಿದಾರರು ಖುದ್ದು ವಾದ ಮಂಡಿಸಿ, ಅಸ್ಥಿ ವಿಸರ್ಜನೆ ಕ್ರಿಯೆಗೆ ನಮ್ಮ ವಿರೋಧವಿಲ್ಲ. ಆದರೆ, ಅದಕ್ಕೊಂದು ನಿಗದಿತ ಜಾಗ ಹಾಗೂ ನಿರ್ದಿಷ್ಟ ಮಾರ್ಗಸೂಚಿಗಳು ಇರಬೇಕು. ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತಾಗಬೇಕು ಎಂಬುದಷ್ಟೇ ನಮ್ಮ ಕಾಳಜಿ.
ಏಕೆಂದರೆ, ಕಾವೇರಿ ನದಿ ತೀರದಲ್ಲಿ ಮಾಲಿನ್ಯ ವಿಪರೀತವಾಗಿ ಹೆಚ್ಚಳವಾಗಿದೆ. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ವರದಿಯಲ್ಲಿ ಕಾವೇರಿ ನದಿ ತೀರದಲ್ಲಿ ಮಾಲಿನ್ಯ ಹೆಚ್ಚಾಗುವುದಕ್ಕೆ ಕಾರಣಗಳನ್ನು ಉಲ್ಲೇಖಿಸಲಾಗಿದೆ ಎಂದರು.
ಜ್ಯುರಿಸ್ಟಿಕ್ ಪರ್ಸನ್ ಘೋಷಿಸಿ: ಇದನ್ನು ಪರಿಗಣಿಸಿ ನದಿ ತೀರದಲ್ಲಿ ಅಸ್ಥಿ ವಿಸರ್ಜನೆಗೆ ಮಾರ್ಗಸೂಚಿ ರೂಪಿಸಬೇಕು. ಕಾವೇರಿ ನದಿಯನ್ನು 'ಜ್ಯುರಿಸ್ಟಿಕ್ ಪರ್ಸನ್' (ಕಾನೂನಾತ್ಮಕ ವ್ಯಕ್ತಿ - ವಾಸ್ತವ ವ್ಯಕ್ತಿಯಲ್ಲದ ಆದರೆ ಕಾನೂನಿನನ್ವಯ ಮಾನ್ಯ ಮಾಡಲಾದ ಸಂಘ ಸಂಸ್ಥೆಗಳು, ನಿಸರ್ಗದ ಭಾಗಗಳನ್ನು ವ್ಯಕ್ತಿಗಳ ರೀತಿಯಲ್ಲಿ ಕಾನೂನಾತ್ಮಕವಾಗಿ ಪರಿಗಣಿಸುವುದು) ಎಂದು ಘೋಷಿಸಬೇಕು ಎಂದು ಕೋರಿದರು.
ಈ ಹಿಂದೆ ಸಾಮಾನ್ಯವಾಗಿ ಎರಡು ಸ್ಥಳಗಳಲ್ಲಿ ಮಾತ್ರ ಅಸ್ಥಿ ವಿಸರ್ಜನೆ ನಡೆಯುತ್ತಿತ್ತು. ಈಗ ನದಿಯ ತೀರದ ಎಲ್ಲಾ ಕಡೆಗಳಲ್ಲೂ ಅಸ್ಥಿ ವಿಸರ್ಜನೆ ನಡೆಸಲಾಗುತ್ತಿದೆ. ಇದೇ ನೀರನ್ನು ಕುಡಿಯಲು ಬಳಕೆ ಮಾಡಲಾಗುತ್ತಿದೆ. ಜತೆಗೆ ಭಕ್ತಾದಿಗಳಿಗೆ ಇದೇ ನೀರನ್ನು ಅಭಿಷೇಕವಾಗಿ ನೀಡಲಾಗುತ್ತದೆ. ಕನಿಷ್ಠ ಪಕ್ಷ ಶ್ರೀರಂಗಪಟ್ಟದ ನಿಮಿಷಾಂಭ ದೇವಸ್ಥಾನದ ತೀರದಲ್ಲಿಯಾದರೂ ಅಸ್ಥಿ ವಿಸರ್ಜನೆಯನ್ನು ಕಡ್ಡಾಯವಾಗಿ ನಿಷೇಧಿಸವೇಕು. ಈಗ ಮುಂಗಾರು ವ್ಯಾಪಕವಾಗಿದ್ದು, ಅರೆಬೆಂದ ಮೂಳೆಗಳು ದೇವಸ್ಥಾನದ ಬಳಿ ಬಂದು ಬೀಳಬಹುದು ಎಂದರು.
ಕಾವೇರಿ ನದಿ ತೀರದ ನಿರ್ದಿಷ್ಟ ಸ್ಥಳಗಳಲ್ಲಿ ಅಸ್ಥಿ ವಿಸರ್ಜನೆಗೆ ಅವಕಾಶ ಮಾಡಿ ಮಾರ್ಗಸೂಚಿ ರೂಪಿಸಬೇಕು. ಉತ್ತರಾಖಂಡ ಹೈಕೋರ್ಟ್ ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳನ್ನು 'ಜ್ಯುರಿಸ್ಟಿಕ್ ಪರ್ಸನ್' ಎಂದು ಘೋಷಿಸಿದ್ದು, ಅದೇ ರೀತಿ ಕಾವೇರಿ ನ ದಿಯನ್ನೂ 'ಜ್ಯುರಿಸ್ಟಿಕ್ ಪರ್ಸನ್' ಎಂದು ಪರಿಗಣಿಸಬೇಕು.
ಕಾವೇರಿ ನದಿಯ ವ್ಯಕ್ತಿಗಳು ಎಂದು ಪರಿಗಣಿಸಿ ಸಮಿತಿಯೊಂದನ್ನು ರಚಿಸಬೇಕು. ಇವರು ನದಿಗೆ ಹಾನಿ ಮಾಡಿದರವ ವಿರುದ್ಧ ದಾವೆ ಹೂಡಲು ಅವಕಾಶ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.












Click it and Unblock the Notifications