ಸಿದ್ದರಾಮಯ್ಯ ಜೊತೆಗಿನ ಬಾಂಧವ್ಯದ ಬಗ್ಗೆ ಎಚ್.ಸಿ. ಮಹಾದೇವಪ್ಪ ಕುತೂಹಲಕಾರಿ ಹೇಳಿಕೆ!
ಬೆಂಗಳೂರು, ಫೆ. 11: ತಮ್ಮ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡವಿನ ಬಾಂಧವ್ಯದ ಕುರಿತು ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ 'ಅಹಿಂದ' ಸಂಘಟನೆ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಕುರುಬ ಎಸ್ಟಿ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂಬ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಅವರು ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಎಚ್.ಸಿ. ಮಹಾದೇವಪ್ಪ ಅವರು, ನನ್ನ ಹಾಗೂ ಸಿದ್ದರಾಮಯ್ಯ ಅವರ ನಡುವಿನ ಬಾಂಧವ್ಯ ಮೊದಲು ಹೇಗಿತ್ತೋ ಈಗಲೂ ಹಾಗೆ ಇದೆ. ಸಂವಿಧಾನದ ಆಶಯಕ್ಕೆ ಧಕ್ಕೆಯಾದಾಗ ನಾವು ಸದಾ ಹೋರಾಟ ಮಾಡುತ್ತಾ ಬಂದಿದ್ದೇವೆ. ಬರೀ ಅಧಿಕಾರಕ್ಕಾಗಿ ನಾವು ಹೋರಾಟ ಮಾಡಿಲ್ಲ. ನನಗೆ ಆರೋಗ್ಯ ಸಮಸ್ಯೆ ಆಗಿದ್ದರಿಂದ ಕೆಲವು ತಿಂಗಳುಗಳ ಕಾಲ ಮನೆಯಿಂದ ಹೊರಗೆ ಬಂದಿರಲಿಲ್ಲ. ಆದರೆ ಆಗಾಗ್ಗೆ ವಿಷಯಾಧಾರಿತ ಹೋರಾಟ ನಡೆಯಲೇಬೇಕು. ರೈತರ ಹೋರಾಟ ನಡೆದಿಲ್ಲವೇ? ಸಮಸ್ಯೆ ಆದಾಗ ಅದಾಗಲೇ ಹೋರಾಟ ಹುಟ್ಟಿಕೊಳ್ಳುತ್ತದೆ ಎಂದರು.
Recommended Video
ಹೀಗಾಗಿ ಅಹಿಂದ ಹೋರಾಟ ಮತ್ತೊಮ್ಮೆ ರಾಜ್ಯದಲ್ಲಿ ಆರಂಭವಾಗಲಿದೆ ಎಂದು ಪರೋಕ್ಷವಾಗಿ ಎಚ್.ಸಿ. ಮಹಾದೇವಪ್ಪ ಅವರು ಹೇಳಿದ್ದಾರೆ. ಮುಂದಿನ ಹೋರಾಟದ ವಿಚಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಳೆದ ಹಲವು ದಿನಗಳಿಂದ ಆಪ್ತರೊಂದಿಗೆ ಮಾಡುತ್ತಿದ್ದಾರೆ ಎಂಬ ಮಾಹಿತಿಯಿದೆ.