ನಿಮ್ಮ ಕುತಂತ್ರ ಫಲಿಸಲ್ಲ ಎಂದು ಎಚ್ಚರಿಕೆ ಕೊಟ್ಟ ಮಹದೇವಪ್ಪ!
ಬೆಂಗಳೂರು, ಆಗಸ್ಟ್ 19; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಆತ್ಮೀಯ ಸ್ನೇಹಿತರು. ಸಿದ್ದರಾಮುಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಹದೇವಪ್ಪ ಲೋಕೋಪಯೋಗಿ ಸಚಿವರಾಗಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಬಾದಾಮಿ ಕ್ಷೇತ್ರದ ಶಾಸಕರು. ಆದರೆ ಮಹದೇವಪ್ಪ 2018ರ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.
ಸಿದ್ದರಾಮಯ್ಯ ಮತ್ತು ಎಚ್. ಸಿ. ಮಹದೇವಪ್ಪ ನಡುವಿನ ಸ್ನೇಹದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ವರದಿ ಕನ್ನಡದ ನ್ಯೂಸ್ ಚಾನಲ್ವೊಂದರಲ್ಲಿ ಪ್ರಸಾರವಾಗಿದೆ. ಈ ಕುರಿತು ಮಹದೇವಪ್ಪ ಸ್ಪಷ್ಟನೆಯನ್ನು ನೀಡಿದ್ದಾರೆ. ಸುಳ್ಳು ಸುದ್ದಿ ಹರಡಿದರೆ ಕೇಸು ದಾಖಲಿಸುತ್ತೇನೆ ಎಂದು ಮಾಧ್ಯಮಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಮೈಸೂರಿನ ತಿ. ನರಸೀಪುರ ಪುರಸಭೆ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಮಹದೇವಪ್ಪ ಸ್ನೇಹದಲ್ಲಿ ಬಿರುಕು ಮೂಡಿದೆ ಎಂದು ವರದಿ ಪ್ರಸಾರವಾಗಿತ್ತು. ಸಿದ್ದರಾಯ್ಯ ಬೆಂಬಲಿಗ ಸೋಮು ಅಧ್ಯಕ್ಷರಾಗಿದ್ದು, ಮಹದೇವಪ್ಪ ಬೆಂಬಲಿಗ ಕೌನ್ಸಿಲರ್ಗಳು 10 ತಿಂಗಳಿನಿಂದ ಸಭೆ ಮಾಡಲು ತಕರಾರು ಮಾಡುತ್ತಿದ್ದಾರೆ ಎಂಬುದು ಆರೋಪವಾಗಿದೆ.
ಸಿದ್ದರಾಮಯ್ಯ ಅವರೇ ಮೂರು ಬಾರಿ ಕೌನ್ಸಿಲರ್ಗಳ ಜೊತೆ ಸಭೆ ನಡೆಸಿ ಮನವೊಲಿಕೆಗೆ ಯತ್ನಿಸಿದ್ದಾರೆ. ಆದರೆ ಅವರು ಅಧ್ಯಕ್ಷರ ವಿರುದ್ಧ ಅವಿಶ್ವಾಶ ನಿರ್ಣಯ ತರುವ ಮೂಲಕ ಸೋಮು ಪದಚ್ಯುತಿಗೆ ಮುಂದಾಗಿದ್ದಾರೆ. ಮಹದೇವಪ್ಪ ಕೌನ್ಸಿಲರ್ಗಳ ಮನವೊಲಿಕೆ ಮಾಡಬಹುದಿತ್ತು ಎಂಬುವ ವಿಚಾರದಲ್ಲಿ ಅಸಮಾಧಾನ ಉಂಟಾಗಿದೆ ಎಂದು ವರದಿ ಹೇಳಿತ್ತು.
ಡಾ. ಎಚ್. ಸಿ. ಮಹದೇವಪ್ಪ ಖಾಸಗಿ ಸುದ್ದಿ ಮಾಧ್ಯಮದ ವರದಿಯನ್ನು ತಮ್ಮ ಫೇಸ್ ಬುಕ್ ಪುಟದಲ್ಲಿ ಹಾಕಿದ್ದಾರೆ. ಅಲ್ಲಿ ವರದಿಗಳಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ. 'ನನ್ನನ್ನೇ ಸಂಪರ್ಕಿಸಿ ವಿಷಯವನ್ನು ತಿಳಿದುಕೊಂಡು ಸುದ್ದಿಯನ್ನು ಬಿತ್ತರಿಸಿ ಎಂದು ವಿನಂತಿಸಿಕೊಳ್ಳುತ್ತೇನೆ' ಎಂದು ಮಾಧ್ಯಮಗಳಿಗೆ ಕಿವಿಮಾತು ಸಹ ಹೇಳಿದ್ದಾರೆ.

ಸ್ಥಳೀಯ ಚುನಾವಣೆಯಲ್ಲಿ ಹಸ್ತಕ್ಷೇಪವಿಲ್ಲ
'ಮಾಧ್ಯಮ ಮಿತ್ರರೇ, ಪ್ರಜಾಪ್ರಭುತ್ವದ 4 ನೇ ಅಂಗವಾದ ನಿಮ್ಮ ಮೇಲೆ ಯಾವುದೇ ಒಂದು ವಿಷಯವನ್ನು ಸರಿಯಾಗಿ ತಿಳಿದುಕೊಂಡು ಸುದ್ದಿಯನ್ನು ಬಿತ್ತರಿಸುವಂತಹ ಬಹುದೊಡ್ಡ ಜವಾಬ್ದಾರಿ ಇರುತ್ತದೆ ಎಂಬುದನ್ನು ನಾನು ನಿಮಗೆಲ ನೆನಪಿಸುವಂತಹ ದುಸ್ಥಿತಿಗೆ ನೀವು ಇಳಿಯಬಾರದಿತ್ತು. ನಾನಾಗಲೀ ಸಿದ್ದರಾಮಯ್ಯನವರಾಗಲೀ ಅಷ್ಟಾಗಿ ಸ್ಥಳೀಯ ಮಟ್ಟದ ಚುನಾವಣೆಗಳ ಬಗ್ಗೆ ಹಸ್ತಕ್ಷೇಪ ಮಾಡುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ' ಎಂದು ಡಾ. ಎಚ್. ಸಿ. ಮಹದೇವಪ್ಪ ಹೇಳಿದ್ದಾರೆ.

ಸುದ್ದಿಯನ್ನು ಬಿತ್ತರಿಸಿ
'ನಿಮಗೆ ಸುದ್ದಿ ಬೇಕಾದರೆ ಅಥವಾ ನಿಮಗೆ ಯಾವುದಾದರೂ ವಿಷಯಗಳ ಬಗ್ಗೆ ಗೊಂದಲಗಳಿದ್ದರೆ ನನ್ನನ್ನೇ ಸಂಪರ್ಕಿಸಿ ವಿಷಯವನ್ನು ತಿಳಿದುಕೊಂಡು ಸುದ್ದಿಯನ್ನು ಬಿತ್ತರಿಸಿ ಎಂದು ವಿನಂತಿಸಿಕೊಳ್ಳುತ್ತೇನೆ ಮತ್ತು ಇದು ಜರ್ನಲಿಸಂನ basic ethics ಎಂಬುದನ್ನು ನಿಮಗೆ ನೆನಪಿಸಲು ಇಚ್ಛಿಸುತ್ತೇನೆ. ಇನ್ನೇನೂ ಚುನಾವಣಾ ಪ್ರಕ್ರಿಯೆಗಳು ಗರಿಗೆದರುವ ಹೊತ್ತಿನಲ್ಲೇ ಸಿದ್ದರಾಮಯ್ಯ ಮತ್ತು ಮಹದೇವಪ್ಪನವರ ನಡುವೆ ಈ ಹಿಂದೆ ಮಾಡಿದಂತೆಯೇ ಬಿರುಕು ಮೂಡಿಸಬೇಕೆಂಬ ನಿಮ್ಮ ಪ್ರಯತ್ನಗಳು ಮತ್ತು ತಲೆಯೇ ಇಲ್ಲದ ಆರೋಪಗಳಿಗೆ ಇರಬಹುದಾದ ಕಾರಣಗಳನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ' ಎಂದು ಫೇಸ್ ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಕುತಂತ್ರಗಳು ಫಲಸುವುದಿಲ್ಲ
'ಇನ್ನೂ ಮುಖ್ಯವಾಗಿ ಹೇಳುವುದಾದರೆ ಯಾವುದು ಶಕ್ತಿಯುತವಾಗಿರುತ್ತದೋ, ಅಂತಹದ್ದರ ಬಗ್ಗೆಯೇ ಕೆಲವರಿಗೆ ಅಳುಕು, ಇದ್ದು ಈ ರೀತಿಯಲ್ಲಿ ವ್ಯಕ್ತವಾಗುತ್ತದೆ ಎಂದು ನನಗೆ ಅನ್ನಿಸುತ್ತದೆ. ಆದರೆ ಈ ಬಾರಿ ನಿಮ್ಮಗಳ ಕುತಂತ್ರಗಳು ಫಲಿಸುವುದಿಲ್ಲ ಎಂಬುದನ್ನು ನಿಮಗೆ ತಿಳಿಸಲು ಬಯಸುತ್ತೇನೆ' ಎಂದು ಡಾ. ಎಚ್. ಸಿ. ಮಹದೇವಪ್ಪ ಫೇಸ್ ಬುಕ್ ಪೋಸ್ಟ್ನಲ್ಲಿ ಹೇಳಿದ್ದಾರೆ.

ಸುಳ್ಳು ಸುದ್ದಿ ಹರಡಿದರೆ ಪ್ರಕರಣ ದಾಖಲು
'ಸಿದ್ದರಾಮಯ್ಯ- ಮಹದೇವಪ್ಪನವರ ಸ್ನೇಹದಲ್ಲಿ ಬಿರುಕು ಮೂಡುವುದು ನಿಮಗೆ ಬಹಳ ಇಷ್ಟವಿರಬಹುದು. ಆದರೆ ಅದು ನಮಗೆ ಇಷ್ಟವಿಲ್ಲ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಕೊಳ್ಳದೇ ಹೋದರೆ ನಮ್ಮಿಬ್ಬರಿಗೆ ಅದರಿಂದ ಯಾವುದೇ ನಷ್ಟವಿಲ್ಲ. ನೀವು ಇದೇ ರೀತಿ ಸುಳ್ಳು ಸುದ್ದಿ ಹರಡಿದರೆ ನಿಮ್ಮ ಮೇಲೆ ಪ್ರಕರಣ ದಾಖಲಿಸಲೂ ಕೂಡಾ ಹಿಂಜರಿಯುವುದಿಲ್ಲ' ಎಂದು ಮಹದೇವಪ್ಪ ಎಚ್ಚರಿಕೆಯನ್ನು ನೀಡಿದ್ದಾರೆ.












Click it and Unblock the Notifications