ಹೊಸ ಬಾಳಿನ ಹೊಸಿಲಲ್ಲಿರುವ ಕಾರ್ತಿಕ್ ಗೌಡಗೆ ರಿಲೀಫ್
ಬೆಂಗಳೂರು, ಅ.28: ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಅವರ ಮದುವೆ ತಯಾರಿ ಕುಶಾಲನಗರದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ಮೈತ್ರಿಯಾ ಗೌಡ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಭೀತಿಯಲ್ಲಿದ್ದ ಕಾರ್ತಿಕ್ ಗೆ ಬುಧವಾರ ಮತ್ತೊಮ್ಮೆ ರಿಲೀಫ್ ಸಿಕ್ಕಿದೆ.
ಬುಧವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಪ್ರಕರಣದ ವಿಚಾರಣೆಗೆ ಮತ್ತೊಮ್ಮೆ ಮಧ್ಯಂತರ ತಡೆ ನೀಡಿದ್ದು, ಎರಡು ವಾರಗಳ ಕಾಲ ಚಾರ್ಜ್ ಶೀಟ್ ಸಲ್ಲಿಸದಂತೆ ತನಿಖಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಕಾರ್ತಿಕ್ ಗೌಡ ಪರ ವಕೀಲ ಎಸ್ ಶಂಕರಪ್ಪ ಅವರು ಹೇಳಿದ್ದಾರೆ. [ಕಾರ್ತಿಕ್ ಗೌಡಗೆ ನಿರೀಕ್ಷಣಾ ಜಾಮೀನು]
ಕಾರ್ತಿಕ್ ಗೌಡ ಅವರ ವಿರುದ್ಧ ನಟಿ ಮೈತ್ರಿಯಾ ಗೌಡ ಅವರು ಅತ್ಯಾಚಾರ, ವಂಚನೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ರದ್ದು ಮಾಡುವಂತೆ ಕಾರ್ತಿಕ್ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಹೀಗಾಗಿ ಮೈತ್ರಿಯಾ ಪ್ರೇಮ ಪ್ರಸಂಗ ಪ್ರಕರಣದಲ್ಲಿ ಕಾರ್ತಿಕ್ ಗೌಡ ಮತ್ತೊಮ್ಮೆ ಪೊಲೀಸರ ತನಿಖೆಗೆ ಲಭ್ಯವಾಗಿದ್ದು, ತನಿಖಾಧಿಕಾರಿಗಳು ಅಗತ್ಯ ಬಿದ್ದಾಗ ವಿಚಾರಣೆಗಾಗಿ ಸಮನ್ಸ್ ಜಾರಿಗೊಳಿಸಿ, ಚಾರ್ಜ್ ಶೀಟ್ ಸಲ್ಲಿಸಬಹುದಾಗಿತ್ತು. ಅದರೆ, ತನಿಖಾ ಪ್ರಕ್ರಿಯೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಲಾಗಿದೆ.

ಮಡಿಕೇರಿಯ ಉದ್ಯಮಿ ನಾಣಯ್ಯ ಅವರ ಪುತ್ರಿಯನ್ನು ಅಕ್ಟೋಬರ್ 29ರಂದು ವರಿಸಲು ಸಿದ್ಧವಾಗುತ್ತಿರುವ ಕಾರ್ತಿಕ್ ಅವರು ಈ ಕೇಸಿಗೆ ಸಂಬಂಧಿಸಿದಂತೆ ದೋಷಾರೋಪಣ ಪಟ್ಟಿ ಸಲ್ಲಿಸುವುದಕ್ಕೆ ತಡೆ ನೀಡುವಂತೆ ಕೋರ್ಟಿಗೆ ಸಲ್ಲಿಸಿದ್ದರು. ಜೊತೆಗೆ ಚಾರ್ಜ್ ಶೀಟ್ ಹಾಕದಂತೆ ಆದೇಶಿಸಲು ಮನವಿ ಮಾಡಿದ್ದರು. [ಕಾರ್ತಿಕ್ ಗೌಡ ಮದುವೆಗೆ ಅಡ್ಡಿ ಆತಂಕವಿಲ್ಲ!]
ಆರ್ ಟಿ ನಗರ ಪೊಲೀಸರು ಸಲ್ಲಿಸಿದ್ದ 632 ಪುಟಗಳ ಚಾರ್ಜ್ ಶೀಟ್ ನಲ್ಲಿ ಅತ್ಯಾಚಾರ ಪ್ರಕರಣವನ್ನು ಕೈ ಬಿಟ್ಟು ವಂಚನೆ ಆರೋಪವನ್ನು ಮಾತ್ರ ಕಾರ್ತಿಕ್ ಮೇಲೆ ಹೊರೆಸಲಾಗಿದೆ. ಅದರೆ, ಮಧ್ಯಂತರ ತಡೆ ನೀಡಿರುವ ನ್ಯಾ. ರತ್ನಕಲಾ ಅವರಿರುವ ನ್ಯಾಯಪೀಠ, ನಾಲ್ಕು ವಾರಗಳ ನಂತರ ಪೊಲೀಸರು ತನಿಖೆ ಮುಂದುವರೆಸುವಂತೆ ಸೆಪ್ಟೆಂಬರ್ 30ರಂದು ನಿರ್ದೇಶಿಸಿದ್ದಾರೆ. ಈಗ ಬುಧವಾರ (ಅಕ್ಟೋಬರ್ 28) ಚಾರ್ಜ್ ಶೀಟ್ ಸಲ್ಲಿಕೆಗೆ ಎರಡು ವಾರಗಳ ತಡೆ ವಿಸ್ತರಿಸಲಾಗಿದೆ.
ಮೈತ್ರಿಯಾ ಜೊತೆ ಮದುವೆ ಆಗಿಲ್ಲ: ಕಾರ್ತಿಕ್ ಕಾನೂನುಬದ್ಧವಾಗಿ ನನ್ನ ಪತಿಯಾಗಿದ್ದಾರೆ. ಹಿಂದೂ ಧರ್ಮದ ಪ್ರಕಾರ ನಮ್ಮಿಬ್ಬರ ಮದುವೆಯಾಗಿದೆ. ಅವರು ನನ್ನನ್ನು ಪತ್ನಿ ಎಂದು ಒಪ್ಪಿಕೊಂಡು ಪತ್ನಿಗೆ ಸೇರುವ ಎಲ್ಲಾ ಹಕ್ಕುಗಳನ್ನು ನೀಡತಕ್ಕದ್ದು, ಅಲ್ಲದೆ ಕಾರ್ತಿಕ್ ಅವರು ಬೇರೆ ಯಾವುದೇ ಯುವತಿ ಜೊತೆ ಮದುವೆಯಾಗುವುದು ಕಾನೂನು ಉಲ್ಲಂಘನೆಯಾಗುತ್ತದೆ. ಇಂಥ ಪ್ರಯತ್ನಕ್ಕೆ ತಡೆ ಒಡ್ಡಬೇಕು ಎಂದು ಮೈತ್ರಿಯಾ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಳ್ಳಿ ಹಾಕಿರುವುದು ಎಲ್ಲರಿಗೂ ಗೊತ್ತೇ ಇದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications