ಕಂಬಳ ಆಚರಣೆಗೆ ಹೈಕೋರ್ಟಿನಿಂದ ಗ್ರೀನ್ ಸಿಗ್ನಲ್
ಬೆಂಗಳೂರು, ಡಿ.15: ಇತಿಹಾಸ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳಕ್ಕೆ ಹೇರಲಾಗಿರುವ ನಿಷೇಧಕ್ಕೆ ಹೈಕೋರ್ಟ್ ನಿಂದ ತಡೆಯಾಜ್ಞೆ ನೀಡಲಾಗಿದೆ. ಉಡುಪಿ ಜಿಲ್ಲಾಧಿಕಾರಿಗಳ ಆದೇಶಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಸೋಮವಾರ ಬೆಳಗ್ಗೆ ತಡೆಯಾಜ್ಞೆ ನೀಡಿದೆ. ತುಳುನಾಡಿನ ಹೆಮ್ಮೆಯ ಓಟಕ್ಕೆ ಮತ್ತೆ ಜೀವ ಬಂದಿದೆ.
ಕರ್ನಾಟಕದ ಕರಾವಳಿಯಲ್ಲಿ ತುಳು ಪರ್ಬ ಸಂಪನ್ನಗೊಂಡ ಬೆನ್ನಲ್ಲೇ ಕಂಬಳ ಕ್ರೀಡೆ ಮೇಲಿನ ನಿಷೇಧಕ್ಕೆ ತಡೆಯಾಜ್ಞೆ ಸಿಕ್ಕಿರುವುದಕ್ಕೆ ಉಡುಪಿ ಜಿಲ್ಲಾ ಕಂಬಳ ಸಮಿತಿ ಹರ್ಷ ವ್ಯಕ್ತಪಡಿಸಿದೆ. ಕರಾವಳಿಯ ಜನ ಕಂಬಳ ಕ್ರೀಡೆಯನ್ನು ತಮ್ಮ ಜೀವನದ ಅಂಗ ಎಂದು ತಿಳಿದಿದ್ದೇವೆ. ಪ್ರಾಣಿ ಹಿಂಸೆ ಮಾಡುವ ಯಾವ ಉದ್ದೇಶ ನಮಗಿಲ್ಲ ಎಂದು ಹೇಳಿದ್ದಾರೆ. [ನಿಷೇಧ ತೆರವಿಗೆ ಕರ್ನಾಟಕ ಮನವಿ ಮಾಡಿಲ್ಲ]
ಕೇಂದ್ರಸರ್ಕಾರದ ಒಪ್ಪಿಗೆ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ನಡೆಸಲು ಯಾವುದೇ ಅಭ್ಯಂತರ ವಿಲ್ಲ ಕೇಂದ್ರ ಸರ್ಕಾರ ಹೈಕೋರ್ಟಿಗೆ ತಿಳಿಸಿತ್ತು. ಇದರ ಬೆನ್ನಲ್ಲೇ ಈ ಬಗ್ಗೆ ಕೋರ್ಟ್ ತನ್ನ ಆದೇಶ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಜಿಲ್ಲಾ ಕಂಬಳ ಸಮಿತಿಗಳ ಸದಸ್ಯರು ಮಂಗಳೂರಿನ ನಿವಾಸದಲ್ಲಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡರನ್ನು ಭೇಟಿ ಮಾಡಿ, ಕರಾವಳಿಯ ಜಾನಪದ ಕ್ರೀಡೆಯನ್ನು ಉಳಿಸುವಂತೆ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಕಂಬಳ ನಿಷೇಧ : ರಸ್ತೆಗಿಳಿದ ಸಿಂಗಾರಗೊಂಡ ಕೋಣಗಳು]
ಕಂಬಳಕ್ಕೆ ನಿಷೇಧ ಹೇರದಂತೆ ಕೇಂದ್ರ ಸರ್ಕಾರದ ಮನವೊಲಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಲಿದೆ ಎಂದು ಕಾನೂನು ಹಾಗೂ ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದರು. ಅದರೆ, ರಾಜ್ಯ ಸರ್ಕಾರ ನಿಷೇಧ ತೆರವಿಗೆ ಯಾವುದೇ ಅರ್ಜಿ ಸಲ್ಲಿಸಿರಲಿಲ್ಲ.
ಕರಾವಳಿಯ ಜಾನಪದ ಕ್ರೀಡೆ ಕಂಬಳವನ್ನು ನಿಷೇಧಿಸಿ ಉಡುಪಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ನ.15ರಿಂದ ನಡೆಯಬೇಕಾಗಿದ್ದ ಎಲ್ಲಾ ಕಂಬಳವನ್ನು ಸುಪ್ರೀಂಕೋರ್ಟ್ ಆದೇಶ ಮತ್ತು ರಾಜ್ಯ ಸರ್ಕಾರ ನಿರ್ದೇಶನದ ಅನ್ವಯ ನಿಷೇಧಿಸಲಾಗಿತ್ತು.












Click it and Unblock the Notifications