ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟಿಗೆ ತೀವ್ರ ಖಂಡನೆ
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ರಾಮಚಂದ್ರಾಪುರ ಮಠದ ಬಗ್ಗೆ ಮಾಡಿರುವ ಟ್ವೀಟಿಗೆ ಹವ್ಯಕ ಮಹಾಮಂಡಲ ತೀವ್ರ ಆಕ್ರೋಶ. ದೇವಮಾನವರನ್ನು ಜನ ಏಕೆ ನಂಬುತ್ತಾರೋ ಎನ್ನುವ ದಿನೇಶ್ ಟ್ವೀಟ್
ಬೆಂಗಳೂರು, ಆ 26: ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ರಾಮಚಂದ್ರಾಪುರ ಮಠದ ಬಗ್ಗೆ ಮಾಡಿರುವ ಟ್ವೀಟಿಗೆ ಹವ್ಯಕ ಮಹಾಮಂಡಲ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ.
ದಿನೇಶ್ ಗುಂಡೂರಾವ್ ಅವರು ಅನಗತ್ಯವಾಗಿ ಸಾವಿರಾರು ವರ್ಷ ಇತಿಹಾಸವಿರುವ ರಾಮಚಂದ್ರಾಪುರ ಮಠದ ಬಗ್ಗೆ ಟ್ವಿಟ್ಟರ್'ನಲ್ಲಿ ಕೀಳಾಗಿ ಬರೆದಿರುವುದು ಆಘಾತವನ್ನು ಉಂಟುಮಾಡಿದ್ದು, ಬ್ರಾಹ್ಮಣ ಸಮುದಾಯದ ರಾಜಕೀಯ ನಾಯಕರೊಬ್ಬರು ಈ ರೀತಿಯಾಗಿ ಭಕ್ತರ ವಿಶ್ವಾಸದ ಮೇಲೆ ದಾಳಿ ಮಾಡಿರುವುದು ಸಮಸ್ತ ಹವ್ಯಕ ಶಿಷ್ಯಸಮುದಾಯಕ್ಕೆ ತೀವ್ರ ನೋವನ್ನು ಉಂಟುಮಾಡಿದೆ. ಎಂದು ಮಹಾಮಂಡಲ ಬೇಸರ ವ್ಯಕ್ತಪಡಿಸಿದೆ. (ದಿನೇಶ್, ನಿಮ್ಮ ಮನೆಯಲ್ಲಿ ಕಲಿಸಿದ ಸಂಸ್ಕಾರ ಇದೇನಾ)

ಶ್ರೀಶಂಕರಾಚಾರ್ಯರಿಂದ ಸ್ಥಾಪಿತವಾದ ಅವಿಚ್ಛಿನ್ನ ಪರಂಪರೆಯ ರಾಮಚಂದ್ರಾಪುರಮಠದ ಕುರಿತಾಗಿ ಇಂದಿನವರೆಗೆ ಮಾಡಲ್ಪಟ್ಟ ಎಲ್ಲಾ ಆರೋಪಗಳೂ ನಿರಾಧಾರವಾಗಿದೆ. ಶ್ರೀಮಠದ ಘನತೆಗೆ ಧಕ್ಕೆತರುವ ಪ್ರಯತ್ನದ ಯಾವುದೇ ಆರೋಪಗಳೂ ನೆಲದ ಕಾನೂನಿನ ಪ್ರಕಾರ ನಿರೂಪಿತವಾಗಿರುವುದಿಲ್ಲ ಎಂದು ಮಂಡಳಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನಮ್ಮ ಶ್ರದ್ಧೆ, ನಂಬಿಕೆಗಳು ನಮ್ಮ ಆಸ್ತಿ, ಅದನ್ನು ಪ್ರಶ್ನಿಸುವ, ನಮಗೆ ನೀತಿಪಾಠ ಹೇಳುವ ನೈತಿಕತೆಯನ್ನು ನಾವು ಯಾವುದೇ ರಾಜಕಾರಣಿಗಳಿಂದ ಕಲಿಯಬೇಕಾಗಿಲ್ಲ. ಬ್ರಾಹ್ಮಣ ಸಮುದಾಯದವರೆಂಬ ಕಾರಣಕ್ಕೆ ರಾಜಕೀಯವಾಗಿ ಎಲ್ಲಾ ಪ್ರಯೋಜನಗಳನ್ನು ಪಡೆದ ದಿನೇಶ್ ಗುಂಡೂರಾವ್ ಅವರು ಕೀಳು ಅಭಿರುಚಿಯ ಮಾತುಗಳನ್ನಾಡಿದ್ದಾರೆ.
ನಮ್ಮ ಅಚಲವಾದ ವಿಶ್ವಾಸದ ಮೇಲಿನ ವ್ಯವಸ್ಥಿತ ದಾಳಿಯಾಗಿದ್ದು, ಹವ್ಯಕ ಮಹಾಮಂಡಲಾಂತರ್ಗತ ಎಲ್ಲಾ 10 ಮಂಡಲಗಳು, 116 ವಲಯಗಳು, 1080 ಗುರಿಕ್ಕಾರರು ಹಾಗೂ 5000 ಕ್ಕಿಂತಲೂ ಹೆಚ್ಚಿನ ಪದಾಧಿಕಾರಿಗಳು ಸೇರಿದಂತೆ ದೇಶ ವಿದೇಶದಲ್ಲಿ ನೆಲೆಸಿರುವ ಸಮಸ್ತ ಹವ್ಯಕ ಸಮುದಾಯಕ್ಕೆ ದಿನೇಶ್ ಹೇಳಿಕೆ ಅಪಾರವಾದ ಖೇದವನ್ನುಂಟುಮಾಡಿದೆ.
ಹವ್ಯಕ ಮಹಾಮಂಡಲ ಒಕ್ಕೊರಲಿನಿಂದ ದಿನೇಶ್ ಗುಂಡೂರಾವ್ ಟ್ವೀಟ್ ಹೇಳಿಕೆಯನ್ನು ಖಂಡಿಸುತ್ತದೆ ಎಂದು ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು ಕಿಡಿಕಾರಿದ್ದಾರೆ.

ಅಸರಾಂ ಬಾಪು, ನಿತ್ಯಾನಂದ, ರಾಮಚಂದ್ರಾಪುರ ಮಠ ಮತ್ತೆ ಈಗ ಗುರುಮೀತ್ ರಾಮ್ ರಹೀಮ್ ಸಿಂಗ್ , ಜನ ಇಂತಹ ದೇವಮಾನವರನ್ನು ಏಕೆ ನಂಬುತ್ತಾರೋ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದರು. ಇದಕ್ಕೆ #Beliefattacked ಹ್ಯಾಷ್ ಟ್ಯಾಗ್ ಮೂಲಕ ಮಠದ ಭಕ್ತರು ದಿನೇಶ್ ಗುಂಡೂರಾವ್ ವಿರುದ್ದ ಕಿಡಿಕಾರಿದ್ದರು.












Click it and Unblock the Notifications