''ಕರ್ನಾಟಕದ ಈ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್, ಸಾಲ ವಿತರಣೆಯಲ್ಲಿ ಶೇ 107ರಷ್ಟು ಪ್ರಗತಿ''
ಹಾವೇರಿ: ಹಾವೇರಿ ಜಿಲ್ಲೆಯನ್ನು ಮಾದರಿ ಬ್ಯಾಂಕಿಂಗ್ ಜಿಲ್ಲೆಯನ್ನಾಗಿ ಮಾಡಬೇಕೆನ್ನುವುದು ಆಸೆ ನನಗಿದೆ. ಅದಕ್ಕಾಗಿ ಅಧಿಕಾರಿಗಳು ಸಂತೋಷದಿಂದ ಸಕ್ರೀಯರಾಗಿ ಕೆಲಸ ಮಾಡಬೇಕು. ಮೂರು ನಾಲ್ಕು ತಿಂಗಳಲ್ಲಿ ಹಾವೇರಿಗೆ ಪತ್ಯೇಕ ಡಿಸಿಸಿ ಬ್ಯಾಂಕ್ ತರಲು ಪಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಜಿಲ್ಲಾ ಪಂಚಾಯತಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ (DLRC) ಹಾಗೂ ಜಿಲ್ಲಾ ಮಟ್ಟದ ಬ್ಯಾಂಕುಗಳ ಸಲಹಾ ಸಮಿತಿ (DCC) ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯನ್ನು ಮಾದರಿ ಬ್ಯಾಂಕಿಂಗ್ ಜಿಲ್ಲೆಯನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಇನ್ನೂ ಹಾವೇರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಾಡಬೇಕೆಂದು ಏಳೆಂಟು ವರ್ಷಗಳಿಂದ ಹೋರಾಟ ನಡೆಸಿದ್ದೇವೆ. ಕೇಂದ್ರ ಸಹಕಾರ ಇಲಾಖೆ ಒಂದು ಜಿಲ್ಲೆಗೆ ಒಂದು ಡಿಸಿಸಿ ಬ್ಯಾಂಕ್ ಅಂತ ಒಪ್ಪಿಗೆ ನೀಡಿದೆ. ಕೆಲವು ಕಾನೂನಾತ್ಮಕ ವಿಷಯಗಳಿಂದಾಗಿ ವಿಳಂಬವಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಬ್ಯಾಂಕ್ ಮಂಜೂರು ಪ್ರಕ್ರಿಯೆ ಹೇಗಿರುತ್ತೆ?
ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ತರುವ ಸಂಬಂಧ ನಾನು ಎರಡು ಬಾರಿ ಸಭೆ ಮಾಡಿದ್ದೇನೆ. ಮೂರು ನಾಲ್ಕು ತಿಂಗಳಲ್ಲಿ ಈ ಬಗ್ಗೆ ಗುಡ್ನ್ಯುಸ್ ಸಿಗುವ ವಿಶ್ವಾಸವಿದೆ. ರಾಜ್ಯ ಸರ್ಕಾರ ಡಿಸಿಸಿ ಬ್ಯಾಂಕ್ ಗೆ ಅನುಮತಿಸಲು ಧಾರವಾಡ ಡಿಸಿಸಿ ಬ್ಯಾಂಕ್ನಿಂದ ಒಪ್ಪಿಗೆ ಪಡೆಯಬೇಕು. ನಬಾರ್ಡ್ ಒಪ್ಪಿಗೆ ಪಡೆಯಲು ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡಬೇಕೆಂದು ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ರೈತರಿಗೆ ಸಾಲ ನೀಡಲು ಆದ್ಯತೆ ಕೊಡಿ
ರಾಜ್ಯ ಸರ್ಕಾರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆಸಾಲ ನೀಡುತ್ತಿವೆ. ಆದರೆ, ಎಲ್ಲ ರೈತರೂ ಅಲ್ಲಿ ಬೆಳೆಸಾಲ ಪಡೆಯಲು ಆಗದೇ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಪಡೆಯುತ್ತಾರೆ. ರಾಷ್ಟ್ರೀಕೃತ ಬ್ಯಾಂಕ್ಗಳು ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿ, ಅವರನ್ನು ಪೋತ್ಸಾಹಿಸಬೇಕು. ಕೃಷಿ ವಲಯದಲ್ಲಿ ಶೇ 1ರಷ್ಟು ಅಭಿವೃದ್ಧಿಯಾದರೆ, ಉತ್ಪಾದನಾ ವಲಯದಲ್ಲಿ ಶೇ. 4 ರಷ್ಟು ಅಭಿವೃದ್ಧಿಯಾಗುತ್ತಿದೆ. ಸೇವಾ ವಲಯದಲ್ಲಿ ಶೇ 10 ರಷ್ಟು ಅಭಿವೃದ್ಧಿಯಾಗುತ್ತದೆ. ಕೃಷಿ ವಲಯ ಅತ್ಯಂತ ಮಹತ್ವದ್ದಾಗಿದೆ. ರೈತ ಕೇವಲ ಉತ್ಪಾದಕ ಅಷ್ಟೇ ಅಲ್ಲ ಆತ ಗ್ರಾಹಕನೂ ಆಗಿದ್ದಾನೆ. ರೈತನ ಕೊಳ್ಳುವ ಶಕ್ತಿ ಹೆಚ್ಚಬೇಕು. ರೈತ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪೆಟ್ರೋಲ್, ಡಿಸೇಲ್ ಸೇರಿದಂತೆ ಅನೇಕ ಉತ್ಪನ್ನಗಳನ್ನು ಕೊಳ್ಳುತ್ತಾನೆ.
ಕೇಂದ್ರದ ಯೋಜನೆಗಳನ್ನು ಹೆಚ್ಚಿಗೆ ಜನರಿಗೆ ತಲುಪಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಬ್ಯಾಂಕ್ಗಳು ಎಷ್ಟು ಸ್ವಸಹಾಯ ಗುಂಪುಗಳನ್ನು ಗುರುತಿಸಿ ಸಾಲ ನೀಡಿವೆ. ಸಣ್ಣ ಕೈಗಾರಿಕೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದಲ್ಲಿ ಬ್ಯಾಂಕ್ ಶಾಖೆಗಳು ಆರಂಭವಾಗಲಿ
ಇನ್ನು ರಾಷ್ಟ್ರೀಕೃತ ಬ್ಯಾಂಕ್ ಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಹೊಸ ಶಾಖೆಗಳನ್ನು ಪ್ರಾರಂಭಿಸಲು ಎಲ್ಲ ಕ್ರಮ ವಹಿಸಲು ಸೂಚಿಸಿದರು. ಹಾಗೂ ಹೆಚ್ಚಿನ ಮುದ್ರಾ ಸಾಲಗಳನ್ನು ವಿತರಣೆ ಮಾಡಲು ಸಹ ಬ್ಯಾಂಕಿನ ಅಧಿಕಾರಿಗಳಿಗೆ ತಿಳಿಸಿದರು. ಬ್ಯಾಂಕುಗಳು ದೇಶದ ದ್ರವ್ಯತೆಯನ್ನು ನಿರ್ವಹಿಸುತ್ತವೆ. ಬ್ಯಾಂಕುಗಳು ಕಾರ್ಯಕ್ರಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿದರೆ ಈಗಿನ ಶೇಕಡಾ 6 ರಿಂದ 7 ರ ವರೆಗೆ ಇರುವ ಬಂಡವಾಳವನ್ನು ಶೇಕಡಾ 10 ಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಸಲಹೆ ನೀಡಿದರು.
ಸಾಲ ವಿತರಣೆಯಲ್ಲಿ ಶೇ.107 ಪ್ರಗತಿ, ತಾಲೂಕುವಾರು ಪಟ್ಟಿ
2025-26 ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಅಂದರೆ ದಿನಾಂಕ ಮಾಚ್ 31ರ ಅಂತ್ಯದ ಪ್ರಗತಿ ವಿವರಸಿದ ಬೊಮ್ಮಾಯಿ ಅವರು, ತ್ರೈಮಾಸಿಕ ಅಂತ್ಯದ ಗುರಿಯ ಒಟ್ಟಾರೆ ಸಾಲ ವಿತರಣೆಯು ಗುರಿಯ ಶೇ.107 ರಷ್ಟು ಪ್ರಗತಿ ಸಾಧಿಸಿದೆ. ಒಟ್ಟು ಆದ್ಯತಾ ವಲಯ ಅಡಿಯಲ್ಲಿ ಶೇ.101 ರಷ್ಟು, ಕೃಷಿಯೇತರ ವಲಯ ಮತ್ತು ಇತರೆ ಆದ್ಯತಾ ವಲಯ ಅಡಿಯಲ್ಲಿ ಕ್ರಮವಾಗಿ ಶೇ.104 ಮತ್ತು ಶೇ.77 ರಷ್ಟು ಪ್ರಗತಿ ಆಗಿದೆ. ಒಟ್ಟಾರೆ ಕೃಷಿ ಅಡಿಯಲ್ಲಿ ಶೇ.102 ರಷ್ಟು ಸಾಧನೆ ಆಗಿದ್ದರೆ, ಬೆಳೆ ಸಾಲದ ಅಡಿಯಲ್ಲಿ ಗುರಿಯ ಶೇ.100 ರಷ್ಟು ದಾಖಲಾಗಿದೆ. ಕೃಷಿ ಅವಧಿ ಸಾಲಗಳ ಅಡಿಯಲ್ಲಿ ಗುರಿಯ ಶೇ.106 ರಷ್ಟು ಹಾಗೂ ಆದ್ಯತಾ ರಹಿತ ವಲಯದ ಅಡಿಯಲ್ಲಿ ಗುರಿಯ ಶೇ.136 ರಷ್ಟು ದಾಖಲಾಗಿದೆ ಎಂದು ಹೇಳಿದರು.
ಮಾರ್ಚ್ 2026 ರ ತ್ರೈಮಾಸಿಕ ಅಂತ್ಯಕ್ಕೆ ವಾಣಿಜ್ಯ ಬ್ಯಾಂಕ್ಗಳು ಶೇ.107 ರಷ್ಟು, ಕೆ.ಜಿ ಬ್ಯಾಂಕ್ ಶೇ.82 ರಷ್ಟು, ಕೆ.ಎಸ್ ಕಾರ್ಡ್ ಶೇ.110 ರಷ್ಟು, ಕೆ.ಸಿ.ಸಿ ಬ್ಯಾಂಕ್ ಶೇ.109 ರಷ್ಟು, ಕೆ.ಎಸ್.ಎಫ್.ಸಿ ಶೇ.35 ರಷ್ಟು ಮತ್ತು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಶೇ.85 ರಷ್ಟು ಸಾಧನೆ ಮಾಡಿರುತ್ತವೆ ಎಂದು ಹೇಳಿದರು.
ಜಿಲ್ಲಯಲ್ಲಿನ ತಾಲ್ಲೂಕುವಾರು ಸಾಧನೆಯಲ್ಲಿ ರಟ್ಟಿಹಳ್ಳಿ ಪ್ರಥಮ ಸ್ಥಾನದಲ್ಲಿದ್ದರೆ, ಹಿರೇಕೆರೂರು ದ್ವಿತೀಯ ಸ್ಥಾನದಲ್ಲಿದೆ. ಹಾಗೆ ಇನ್ನುಳಿದ ತಾಲ್ಲೂಕುಗಳು ಹಾನಗಲ್, ಬ್ಯಾಡಗಿ, ಹಾವೇರಿ, ಸವಣೂರು, ರಾಣೇಬೆನ್ನೂರು ಹಾಗೂ ಶಿಗ್ಗಾಂವಿ ಕ್ರಮವಾಗಿ ನಂತರದ ಸ್ಥಾನಗಳಲ್ಲಿರುತ್ತವೆ ಎಂದು ತಿಳಿಸಿದರು.














Click it and Unblock the Notifications