'ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಂಡರೆ ಸ್ವೀಕರಿಸುತ್ತೇನೆ'
ಬೆಂಗಳೂರು, ಫೆಬ್ರವರಿ 13 : ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಮತ್ತು ಜೆಡಿಎಸ್ ನಾಯಕರ ನಡುವಿನ ಭಿನ್ನಮತ ಮುಂದುವರೆದಿದೆ. 'ನಾನು ಜೆಡಿಎಸ್ ಪಕ್ಷದಲ್ಲಿಯೇ ಇದ್ದೇನೆ. ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಂಡರೆ ಅದನ್ನು ಸ್ವೀಕರಿಸುತ್ತೇನೆ' ಎಂದು ಅವರು ಶನಿವಾರ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಜಮೀರ್ ಅಹಮದ್ ಖಾನ್ ಅವರು, 'ನಾನು ಪಕ್ಷದಲ್ಲಿಯೇ ಇದ್ದೇನೆ. ಉಪ ಚುನಾವಣೆಯಿಂದ ದೂರ ಉಳಿದಿದ್ದೇನೆ. ಪಕ್ಷದ ವರಿಷ್ಠರು ಮಾತುಕತೆಗೆ ಕರೆದರೆ ಅದಕ್ಕೆ ನಾನು ಸಿದ್ಧನಿದ್ದೇನೆ' ಎಂದು ಹೇಳಿದರು. ['ಜೆಡಿಎಸ್ ಪಕ್ಷ ತಾಯಿ ಇದ್ದಂತೆ, ತಾಯಿ ಮರೆತರೆ ಅನ್ನ ಸಿಗುವುದಿಲ್ಲ']

'ದೇವೇಗೌಡರ ಮೀರ್ ಸಾಧಿಕ್ ಹೇಳಿಕೆ ಮತ್ತು ಹಜ್ ಯಾತ್ರೆಯ ಹೇಳಿಕೆಯಿಂದ ಬೇಸರ ಉಂಟಾಗಿದೆ. ಅವರು ದೊಡ್ಡವರು, ಅಪ್ಪಾಜಿ ಇದ್ದಂತೆ. ಅವರ ಮಾತಿನ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಹೇಳಿದರು. 'ಒಂದು ವೇಳೆ ವರಿಷ್ಠರು ನನ್ನ ವಿರುದ್ಧ ಶಿಸ್ತು ಕ್ರಮಗಳನ್ನು ತೆಗೆದುಕೊಂಡರೂ ಅದನ್ನು ಸ್ವೀಕರಿಸುತ್ತೇನೆ' ಎಂದು ಸ್ಪಷ್ಟಪಡಿಸಿದರು. [ಜಮೀರ್ ಉಲ್ಟಾ ಹೊಡೆಯಲು ಕಾರಣ ಹೀಗೂ ಇರಬಹುದೇ?]
ಪಕ್ಷಕ್ಕೆ ಮತ ಹಾಕಬೇಡಿ ಎಂದಿಲ್ಲ : 'ಹೆಬ್ಬಾಳ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸುವುದು ಕಷ್ಟ. ಒಳ್ಳೆಯ ಅಭ್ಯರ್ಥಿಯನ್ನು ನೋಡಿ ಮತ ನೀಡಿರಿ ಎಂದು ಹೇಳಿದ್ದೇನೆ. ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಡಿ ಎಂದು ಹೇಳಿಲ್ಲ. ಕೋಮುವಾದಿ ಪಕ್ಷಗಳನ್ನು ದೂರವಿಡಬೇಕಿದೆ. ಮುಸ್ಲಿಂಮರ ಮತ ವಿಭಜನೆಯಾಗಬಾರದು' ಎಂಬುದು ನನ್ನ ಉದ್ದೇಶ ಎಂದು ಜಮೀರ್ ಹೇಳಿದರು. [ದೇವೇಗೌಡ, ಎಚ್ಡಿಕೆಗೆ ಇಕ್ಬಾಲ್ ಅನ್ಸಾರಿ ಬಹಿರಂಗ ಸವಾಲು!]
ಕಳೆದ ವಾರ ಕುದೂರಿನಲ್ಲಿ ಪಕ್ಷದ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಜಮೀರ್ ಅಹಮದ್ ಖಾನ್ ಅವರು, 'ತಮ್ಮ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿವೆ. ಆದರೆ, ತಾವು ಎಂದಿಗೂ ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದರು.
ಫೆ.7ರ ಭಾನುವಾರ ಹೆಬ್ಬಾಳ ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ದೇವೇಗೌಡರು, 'ಶಾಸಕ ಜಮೀರ್ ಅಹಮದ್ ಖಾನ್ ಮತ್ತು ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಶಾಸಕರು ಮೀರ್ ಸಾಧಿಕ್' ಎಂದು ಹೇಳಿದ್ದರು. ಈ ಹೇಳಿಕೆಯನ್ನು ಖಂಡಿಸಿ ಮೌಲ್ವಿಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.












Click it and Unblock the Notifications