ಫೆ.4ಕ್ಕೆ ಹಾಸನ ಅಭ್ಯರ್ಥಿ ಪಟ್ಟಿ; ನನಗೇನು ಗೊತ್ತಿಲ್ಲ ಅಂದ್ರು ರೇವಣ್ಣ!
ಹಾಸನ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರವರಿ 4ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಎಚ್. ಡಿ. ರೇವಣ್ಣ ನಿರಾಕರಿಸಿದರು.
ಬೆಂಗಳೂರು, ಫೆಬ್ರವರಿ 02; ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಜೆಡಿಎಸ್ ಪಕ್ಷ ತಯಾರಿ ಆರಂಭಿಸಿದೆ. ಪಂಚರತ್ನ ರಥಯಾತ್ರೆ ಮೂಲಕ ಎಚ್. ಡಿ. ಕುಮಾರಸ್ವಾಮಿ ಜನರ ಬಳಿ ಹೋಗಿದ್ದಾರೆ. ಅಲ್ಲದೇ ಚುನಾವಣೆಗೆ 93 ಅಭ್ಯರ್ಥಿಗಳ ಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ.
ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರ ಕಳೆದ ವಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದರ ನಡುವೆಯೇ ಹಾಸನ ಜಿಲ್ಲಾ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರವರಿ 4ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಪಟ್ಟಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
Hassan JDS Ticket Row : ಹಾಸನ ಟಿಕೆಟ್ ವಿವಾದ, ಮೌನ ಮುರಿದ ಎಚ್ಡಿ ರೇವಣ್ಣ!
ಜೆಡಿಎಸ್ ಪಕ್ಷದ ಭದ್ರಕೋಟೆಯಾದ ಹಾಸನ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ ಹೊಳೆನರಸೀಪುರ ಕ್ಷೇತ್ರವನ್ನು ಎಚ್. ಡಿ. ರೇವಣ್ಣ ಪ್ರತಿನಿಧಿಸುತ್ತಾರೆ. ಅವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲು ಆಗುವುದಿಲ್ಲ. ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಭವಾನಿ ರೇವಣ್ಣಗೆ ಬಿಜೆಪಿ ಟಿಕೆಟ್ ಆಫರ್ ಕೊಟ್ಟ ರಾಷ್ಟ್ರೀಯ ನಾಯಕ
ಆದರೆ ಬಿಜೆಪಿ ವಶದಲ್ಲಿರುವ ಹಾಸನ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಹಾಲಿ ಶಾಸಕ ಪ್ರೀತಮ್ ಜೆ. ಗೌಡ ವಿರುದ್ಧ ಭವಾನಿ ರೇವಣ್ಣ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ಟಿಕೆಟ್ ಹಂಚಿಕೆ ವಿಚಾರವೇ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದ್ದರಿಂದ ಯಾರಿಗೆ ಟಿಕೆಟ್ ಎಂಬುದು ಕುತೂಹಲ.
ಹಾಸನದ ಜೆಡಿಎಸ್ ಟಿಕೆಟ್; ಭವಾನಿ ರೇವಣ್ಣ V/S ಸ್ವರೂಪ್
ಎಚ್. ಡಿ. ರೇವಣ್ಣ ಪ್ರತಿಕ್ರಿಯೆ
ಎಚ್. ಡಿ. ಕುಮಾರಸ್ವಾಮಿ ಹಾಸನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ನೀಡಿರುವ ಹೇಳಿಕೆಗೆ ಮಾಜಿ ಸಚಿವ ಎಚ್ .ಡಿ. ರೇವಣ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. "ಕುಮಾರಸ್ವಾಮಿ ಹೇಳಿಕೆ ಬಗ್ಗೆ ನನಗೇನು ಗೊತ್ತಿಲ್ಲ. ದೇವೇಗೌಡರು, ಎಚ್. ಡಿ. ಕುಮಾರಸ್ವಾಮಿ, ಸಿ. ಎಂ. ಇಬ್ರಾಹಿಂ ನಿರ್ಧಾರವೇ ಅಂತಿಮ" ಎಂದು ಹೇಳಿದ್ದಾರೆ.
ಹಾಸನ ಜಿಲ್ಲೆಯ 7 ಕ್ಷೇತ್ರಗಳಿಗೆ ಫೆಬ್ರವರಿ 4ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಪಟ್ಟಿಯಲ್ಲಿ ಹಾಸನ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎಂದು ಘೋಷಣೆ ಯಾಗಲಿದಯೇ?. ಇಲ್ಲವೇ ಪಕ್ಷ ಕಾದು ನೋಡುವ ತಂತ್ರ ಅನುಸರಿಸಲಿದೆಯೇ? ಎಂದು ನೋಡಬೇಕಿದೆ.
ಎಚ್. ಡಿ. ಕುಮಾರಸ್ವಾಮಿ ಹೇಳಿದ್ದೇನು?
ಸಂಡೂರು ತಾಲೂಕಿನ ಕುರೇಕುಪ್ಪದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ್ದ ಎಚ್. ಡಿ. ಕುಮಾರಸ್ವಾಮಿ, "ನಮ್ಮ ಕುಟುಂಬದಲ್ಲಿ ಕೋಲ್ಡ್ ವಾರೂ ಇಲ್ಲ ಹೀಟ್ ವಾರೂ ಇಲ್ಲ. ಹಾಸನ 7 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಗೆ ಸುಗಮವಾಗಿ ಒಪ್ಪಿಗೆ ದೊರೆಯಲಿದೆ" ಎಂದು ಹೇಳಿದ್ದರು.
"ಹಾಸನದ ಏಳು ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಯಾವುದೇ ಸಮಸ್ಯೆಗಳಿಲ್ಲದೇ ಅಂತಿಮಗಳಿಸಲಾಗುತ್ತದೆ. ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಫೆಬ್ರವರಿ 10ರಂದು ಬಿಡುಗಡೆ ಮಾಡಲಾಗುತ್ತದೆ" ಎಂದು ಕುಮಾರಸ್ವಾಮಿ ತಿಳಿಸಿದ್ದರು.
ಮೌನ ಮುರಿದಿದ್ದ ಎಚ್. ಡಿ. ರೇವಣ್ಣ
ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಜಾಟಾಪಟಿ ನಡುವೆಯೇ ಮಾಜಿ ಸಚಿವ ಎಚ್. ಡಿ. ರೇವಣ್ಣ ಈ ವಿಚಾರದಲ್ಲಿ ಮೌನ ಮುರಿದಿದ್ದರು. ಹೊಳೆನರಸೀಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಅವರು, "ಹಾಸನ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ವರಿಷ್ಠರು ಕೈಗೊಳ್ಳುವ ತೀರ್ಮಾನವೇ ಅಂತಿಮ. ಕುಮಾರಸ್ವಾಮಿ ನಮ್ಮ ನಾಯಕ. ಕುಮಾರಸ್ವಾಮಿ, ರೇವಣ್ಣ ಹೊಡೆದಾಡುತ್ತಾರೆ ಎಂದು ಕೆಲವರು ಅಂದುಕೊಂಡಿದ್ದರು. ನನ್ನ ತಲೆ ಇರುವವರೆಗೆ ಯಾವುದೇ ಕಾರಣಕ್ಕೂ ನಾವು ಹೊಡೆದಾಡಲ್ಲ" ಎಂದು ಹೇಳಿದ್ದರು.
ಎಚ್. ಡಿ. ರೇವಣ್ಣ ಮಾತನಾಡಿ, "ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಟಿಕೆಟ್ ಹಂಚಿಕೆ ವಿಚಾರದಲ್ಲಿ ವರಿಷ್ಠರು ಕೈಗೊಳ್ಳುವ ನಿರ್ಧಾರವೇ ಅಂತಿಮ" ಎಂದು ಹೇಳುವ ಮೂಲಕ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಟಿಕೆಟ್ ಅಂತಿಮಗೊಳಿಸುವುದಿಲ್ಲ
"ಹಾಸನ ಕ್ಷೇತ್ರದ ಟಿಕೆಟ್ ಅನ್ನು ನನ್ನ ಮಕ್ಕಳಾಗಲಿ, ನಾನಾಗಲಿ ಅಂತಿಮಗೊಳಿಸುವುದಿಲ್ಲ. ಎಚ್. ಡಿ. ಕುಮಾರಸ್ವಾಮಿ ಹಾಗೂ ನನ್ನ ಸಂಬಂಧ ಬೇರ್ಪಡಿಸಲು ಸಾಧ್ಯವಿಲ್ಲ, ನಮ್ಮಿಬ್ಬರನ್ನು ದೂರ ಮಾಡುತ್ತೇವೆ ಎಂಬುದು ಕೆಲವರ ಭ್ರಮೆ ಅಷ್ಟೇ" ಎಂದು ರೇವಣ್ಣ ಹೇಳಿದ್ದರು.
"ಹಾಸನ ಜಿಲ್ಲೆಯ 7 ಕ್ಷೇತ್ರಗಳ ಟಿಕೆಟ್ ನಾನೊಬ್ಬನೇ ಅಂತಿಮಗೊಳಿಸುವ ಪ್ರಶ್ನೆ ಇಲ್ಲ. ಎಲ್ಲರೂ ಕುಳಿತುಕೊಂಡು ಚರ್ಚೆ ಮಾಡಿ, ಅಭಿಪ್ರಾಯ ಸಂಗ್ರಹಣೆ ಮಾಡಿ, ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಅಂತಿಮ ಮಾಡುತ್ತೇವೆ" ಎಂದು ರೇವಣ್ಣ ತಿಳಿಸಿದ್ದರು.