ಕೆರೆಗೆ ಉರುಳಿದ ಕಾರು, 7 ಟೋಯೋಟಾ ಉದ್ಯೋಗಿಗಳ ಸಾವು
ಹಾಸನ, ಜನವರಿ 09 : ಚನ್ನರಾಯಪಟ್ಟಣ ತಾಲೂಕಿನ ಜನಿವಾರ ಕೆರೆಗೆ ಕಾರು ಉರುಳಿ ಬಿದ್ದು 7 ಜನರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಮುಂಜಾನೆ ನಡೆದಿದೆ. ಮೃತಪಟ್ಟವರೆಲ್ಲರೂ ಬಿಡದಿಯ ಟೋಯೋಟಾ ಕಂಪನಿಯ ಉದ್ಯೋಗಿಗಳು.
ಬಿಡದಿಯ ಟೋಯೋಟಾ ಕಂಪನಿಯ ಉದ್ಯೋಗಿಗಳು ಸ್ಕಾರ್ಪಿಯೋ ಕಾರಿನಲ್ಲಿ ಚಿಕ್ಕಮಗಳೂರಿಗೆ ಪ್ರವಾಸ ಹೊರಟಿದ್ದರು. ಚನ್ನರಾಯಪಟ್ಟಣದ ಜನಿವಾರ ಕೆರೆಯ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಉರುಳಿ ಬಿದ್ದಿದೆ. [ಬೆಂಗಳೂರಿನಲ್ಲಿ ಒತ್ತುವರಿಯಾದ ಕೆರೆಗಳ ವಿವರ]

ಕಾರಿನಲ್ಲಿದ್ದ ಜನಾರ್ದನ (22), ಕಾರ್ತಿಕ್ (24), ಸತೀಶ್ (24), ದಿಲೀಪ್ (24), ಜಯಂತ್ (23), ಶಿವಸ್ವಾಮಿ (24), ರಾಜು (24) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಹಾಸನದ ಖಾಸಗಿ ಆಸ್ಪತ್ರೆಯ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತಪಟ್ಟವರ ಪೈಕಿ ಇಬ್ಬರು ಮಂಡ್ಯ ಜಿಲ್ಲೆಯವರಾಗಿದ್ದಾರೆ. ಉಳಿದವರು ರಾಮನಗರ, ಚಾಮರಾಜನಗರ ಜಿಲ್ಲೆಯವರು ಎಂದು ತಿಳಿದುಬಂದಿದೆ. ಚನ್ನರಾಯಪಟ್ಟಣ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರವಾಸ ಹೊರಟಿದ್ದ 10 ಮಂದಿ ಚಿಕ್ಕಮಗಳೂರಿನಲ್ಲಿ ಉಳಿದುಕೊಳ್ಳಲು ಹೋಂ ಸ್ಟೇ ಬುಕ್ ಮಾಡಿದ್ದರು. ಅಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಹೊರನಾಡಿಗೆ ಭೇಟಿ ನೀಡಿ ಬೆಂಗಳೂರಿಗೆ ವಾಪಸ್ ಆಗುವ ಯೋಜನೆ ಹಾಕಿಕೊಂಡಿದ್ದರು.












Click it and Unblock the Notifications