ಮಲ್ಯ ಕುಣಿಗಲ್ ಕುದುರೆಯ ಮೇಲೆ ರೈಲ್ವೆ ಸವಾರಿ!
ಹಾಸನ, ಆ.16 : ಹಾಸನ- ಬೆಂಗಳೂರು ಬ್ರಾಡ್ ಗೇಜ್ ರೈಲು ಮಾರ್ಗಕ್ಕೆ ಇದ್ದ ಎಲ್ಲಾ ಅಡೆ-ತಡೆಗಳು ನಿವಾರಣೆಯಾಗಿದ್ದು ಯೋಜನೆ ಜಾರಿಗೆ ಬರುತ್ತಿದೆ. ಕುಣಿಗಲ್ನಲ್ಲಿರುವ ವಿಜಯ್ ಮಲ್ಯ ಒಡೆತನದ ಕುದುರೆ ಫಾರ್ಮ್ ಮಧ್ಯದಲ್ಲೇ ರೈಲು ಮಾರ್ಗ ಹಾದು ಹೋಗಲಿದೆ. 2015ರ ಡಿಸೆಂಬರ್ ವೇಳೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ಕುಣಿಗಲ್ನಲ್ಲಿರುವ ಕುದುರೆ ಫಾರ್ಮ್ ಹಾಸನ- ಬೆಂಗಳೂರು ಬ್ರಾಡ್ ಗೇಜ್ ರೈಲು ಮಾರ್ಗ ಕಾಮಗಾರಿಗೆ ಅಡ್ಡವಾಗಿತ್ತು. ವಿಜಯ್ ಮಲ್ಯ ಸೇರಿದಂತೆ ಖ್ಯಾತನಾಮರ ಒಡೆತನ ಹೊಂದಿರುವ ಐತಿಹಾಸಿಕ ಕುದುರೆಗಳ ಆಶ್ರಯ ತಾಣ ವಿವಾದದ ಕೇಂದ್ರ ಬಿಂದುವಾಗಿತ್ತು. ಸದ್ಯ, ಫಾರ್ಮ್ ಇರುವ ಸ್ಥಳದಲ್ಲಿಯೇ ರೈಲ್ವೆ ಮಾರ್ಗ ಹಾದು ಹೋಗಲು ಹೈಕೋರ್ಟ್ ಸಹ ಅನುಮತಿ ನೀಡಿದೆ.

ಸುಮಾರು 350 ಎಕರೆ ವಿಸ್ತೀರ್ಣ ಹೊಂದಿರುವ ಈ ಪ್ರದೇಶದಲ್ಲಿ ಸುಮಾರು 1.05 ಕಿ.ಮೀ ವ್ಯಾಪ್ತಿಯಲ್ಲಿ ರೈಲು ಮಾರ್ಗ ಹಾದು ಹೋಗಲಿದೆ. ಶ್ರವಣ ಬೆಳಗೊಳ ಮಾರ್ಗವಾಗಿ ಸಾಗುವ ಹಾಸನ-ಬೆಂಗಳೂರು ನಡುವಿನ 166 ಕಿ.ಮೀ ದೂರದ ಈ ಮಾರ್ಗಕ್ಕೆ 413 ಕೋಟಿ ರು ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. [ಮಲ್ಯ ಫಾರ್ಮ್ ಮಧ್ಯದಲ್ಲೇ ಓಡಲಿದೆ ರೈಲು]
ಈ ಪ್ರಸ್ತಾವಿತ ರೈಲು ಮಾರ್ಗಕ್ಕೆ ವಿಜಯ್ ಮಲ್ಯ ಭಾರಿ ಪ್ರತಿರೋಧ ವ್ಯಕ್ತಪಡಿಸಿದ್ದರು ಬಹುಬೆಲೆ ಬಾಳುವ ಕುದುರೆಗಳ ವಂಶಾವೃದ್ಧಿ ಸೇರಿದಂತೆ ಅವುಗಳ ಆರೈಕೆ ಇಲ್ಲಿ ನಡೆಯುತ್ತದೆ. ರೈಲು ಸಂಚಾರದಿಂದ ಇಲ್ಲಿನ ವಾತಾವರಣದ ಚಿತ್ರಣವೇ ಹಾಳಾಗುತ್ತದೆ. ಕುದುರೆಗಳಿಗೆ ತೊಂದರೆ ಉಂಟಾಗಲಿದೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.
ಕುದುರೆ ಫಾರ್ಮ್ ಹೊರತು ಪಡಿಸಿ ರೈಲ್ವೆ ಇಲಾಖೆ ಸಿದ್ಧಪಡಿಸಿದ ಪರ್ಯಾಯ ಮಾರ್ಗದಲ್ಲಿ ರೈತರ 70 ಎಕರೆ ಜಮೀನು ಇತ್ತು. ವಿಜಯ್ ಮಲ್ಯ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ರೈತರ ಜಮೀನಿನ ಬದಲು, ಕುದುರೆ ಫಾರ್ಮ್ನಲ್ಲಿಯೇ ರೈಲು ಮಾರ್ಗ ನಿರ್ಮಿಸಬಹುದು ಎಂದು ಆದೇಶ ನೀಡಿತ್ತು.
ಕುದುರೆ ಫಾರ್ಮ್ನಲ್ಲಿ ರೈಲು ಮಾರ್ಗ ನಿರ್ಮಿಸುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುನೈಟೆಡ್ ರೇಸಿಂಗ್ ಅಂಡ್ ಬ್ಲಡ್ಸ್ಟಾಕ್ ಬ್ರೀಡರ್ (ಯುಆರ್ಬಿಬಿ) ಎಂಡಿ ಜೇನ್ ಮಿರ್ಜಾ ರೈಲು ಮಾರ್ಗದಿಂದಾಗಿ ಕುದುರೆಗಳಿಗೆ ತೊಂದರೆ ಉಂಟಾಗಲಿದೆ. ಫಾರ್ಮ್ನಲ್ಲಿ ಸಾಗುವ ರೈಲ್ವೆ ಮಾರ್ಗದ ಎರಡೂ ಬದಿಯಲ್ಲಿ ಎತ್ತರದ ಗೋಡೆ ನಿರ್ಮಿಸಲು ರೈಲ್ವೆ ಇಲಾಖೆಗೆ ಮನವಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications