ಚಾಮರಾಜನಗರ : ಟಿಕೆಟ್ ಆಕಾಂಕ್ಷಿ ಸೋಮಣ್ಣರಿಗೆ ಪ್ರತಿಭಟನೆಯ ಎಚ್ಚರಿಕೆ
ಚಾಮರಾಜನಗರ, ಮಾರ್ಚ್ 25 : ಮಾಜಿ ಸಚಿವ ವಿ.ಸೋಮಣ್ಣ ಚಾಮರಾಜನಗರದ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಮತ್ತೊಂದೆಡೆ ಅವರಿಗೆ ಟಿಕೆಟ್ ನೀಡದಂತೆ ಸ್ಥಳೀಯ ನಾಯಕರೇ ತಿರುಗಿ ಬೀಳುತ್ತಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ, ಹನೂರು ಯಾವ ಕ್ಷೇತ್ರದಲ್ಲಿಯೂ ಸೋಮಣ್ಣ ಸ್ಪರ್ಧೆಗೆ ಕಾರ್ಯಕರ್ತರು ಒಲವು ತೋರಿದಂತೆ ಕಂಡು ಬರುತ್ತಿಲ್ಲ.
ಈಗಾಗಲೇ ಚಾಮರಾಜನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನಪ್ಪ ಅವರೊಂದಿಗೆ ಸಂಬಂಧ ಹಳಸಿದ್ದು ಇದೀಗ ಜಿಲ್ಲೆಯಲ್ಲಿ ಹೊರಗಿನವರಿಗೆ ಮಣೆ ಹಾಕದೆ ಸ್ಥಳೀಯರಿಗೆ ಅವಕಾಶ ಮಾಡಿಕೊಡಿ ಎಂಬ ಕೂಗು ಎದ್ದಿರುವುದು ಸೋಮಣ್ಣ ಆಸೆ ಆಕಾಂಕ್ಷೆಗಳಿಗೆ ಕೊಳ್ಳಿ ಇಟ್ಟಂತಾಗಿದೆ.

ಈಗಿನ ಪರಿಸ್ಥಿತಿಯಲ್ಲಿ ಹನೂರು ಕ್ಷೇತ್ರದ ಜನ ಕೈಹಿಡಿಯಬಹುದೆಂಬ ನಿರೀಕ್ಷೆಯಿತ್ತು. ಅಲ್ಲಿನ ಮುಖಂಡರು ತಮ್ಮ ಪರವಾಗಿದ್ದಾರೆ ಎಂಬ ನಂಬಿಕೆಯೂ ಇತ್ತು. ಆದರೆ, ಈಗ ಅಲ್ಲಿನ ಪರಿಸ್ಥಿತಿ ಬದಲಾಗಿದ್ದು, ಕಾರ್ಯಕರ್ತರು ಮುಖಂಡರು ಸ್ಥಳೀಯರಿಗೆ ಟಿಕೆಟ್ ಕೊಡಿ ಎಂಬ ಧ್ವನಿ ಎತ್ತಿದ್ದಾರೆ.
ಹನೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪ್ರೀತಮ್ ನಾಗಪ್ಪ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ಅವರ ಬೆಂಬಲಿಗರು ಇದೀಗ ಬೀದಿಗಿಳಿದಿದ್ದು, ಪ್ರೀತಮ್ ನಾಗಪ್ಪ ಹೊರತು ಪಡಿಸಿ ಬೇರೆ ಯಾರಿಗಾದರೂ ಟಿಕೆಟ್ ನೀಡಿದರೆ ಬಿಜೆಪಿಗೆ ಸೋಲು ಗ್ಯಾರಂಟಿ ಎಂಬ ಘೋಷಣೆಯನ್ನು ಮಾಡಿ ಬಿಟ್ಟಿದ್ದಾರೆ.
ಶನಿವಾರ ಹನೂರು ಪಟ್ಟಣ ಆರ್.ಎಸ್.ದೊಡ್ಡಿಯಲ್ಲಿರುವ ಭಾರತೀಯ ಜನತಾ ಪಾರ್ಟಿ ಕಚೇರಿ ಮುಂಭಾಗ ಬೇಕೇ ಬೇಕು ಹನೂರಿಗೆ ಡಾ.ಪ್ರೀತಂ ನಾಗಪ್ಪ ಎಂದು ಒತ್ತಾಯಿಸಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು ಇದೀಗ ಜಿದ್ದಾಜಿದ್ದಿಗೆ ಕಾರಣವಾಗಿದೆ.
ಈಗಾಗಲೇ ಬಿಜೆಪಿ ಸೇರಿರುವ ಮಾಜಿ ಶಾಸಕ ದಿವಂಗತ ನಾಗಪ್ಪ ಅವರ ಪತ್ನಿ ಪರಿಮಳ ನಾಗಪ್ಪ ಅವರು ತಮ್ಮ ಪುತ್ರನಿಗೆ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸಲು ಹರಸಾಹಸ ಪಡುತ್ತಿದ್ದಾರೆ.

ಕ್ಷೇತ್ರದಲ್ಲಿ ನಾಗಪ್ಪನವರ ಕುಟುಂಬಕ್ಕೆ ತನ್ನದೇ ಆದ ವರ್ಚಸ್ಸು ಇದೆ. ಆದರೆ, ಯಾರೋ ಕಾಣದ ಕೈಗಳು ಮತ್ತು ನಾಗಪ್ಪನವರ ಕುಟುಂಬದಲ್ಲಿ ಬೆಳೆದವರೂ ಇಂದು ಹೊರಗಿನವರಿಗೆ ಟಿಕೆಟ್ ಕೊಡಿ ಎಂದು ಯಡಿಯೂರಪ್ಪನವರಲ್ಲಿ ಒತ್ತಡ ಹೇರುತ್ತಿದ್ದಾರೆ, ಆದರೆ ಯಾವುದೇ ಕಾರಣಕ್ಕೂ ಯಡಿಯೂರಪ್ಪನವರು ಮಾಜಿ ಸಚಿವ ವಿ.ಸೋಮಣ್ಣನವರಿಗೆ ಟಿಕೆಟ್ ನೀಡಬಾರದು ಎಂಬ ಒತ್ತಾಯಿಸುತ್ತಾರೆ.
ಸೋಮಣ್ಣ ಅವರಿಗೆ ಅವರಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲು ಖಚಿತವಾಗಿದ್ದು, ಇದಕ್ಕೆ ನಾಗಪ್ಪ ಅಭಿಮಾನಿಗಳು ಹಾಗೂ ಯುವ ನಾಯಕ ಡಾ.ಪ್ರೀತಂ ನಾಗಪ್ಪನವರ ಅಭಿಮಾನಿ ಬಳಗ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ ಎಂದು ಬೆಂಬಲಿಗರು ಬಹಿರಂಗವಾಗಿಯೇ ಘೋಷಿಸಿದ್ದಾರೆ.
ಈ ನಡುವೆ ನಾನು ಕರ್ನಾಟಕದಲ್ಲಿ ಎಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತೇನೆ ಎಂಬ ಹೇಳಿಕೆ ನೀಡುವ ಮೂಲಕ ವಿ.ಸೋಮಣ್ಣ ಅವರು ಚಾಮರಾಜನಗರ ನನಗೆ ಅನಿವಾರ್ಯವೇನಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಮುಂದೇನಾಗುತ್ತದೆ?.











Click it and Unblock the Notifications