ಗುಲ್ಬರ್ಗ ಶೂಟೌಟ್ : ಎಎಸ್ಐ ಉದ್ದಂಡಪ್ಪ ಹೇಳಿದ್ದಿಷ್ಟು
ಗುಲ್ಬರ್ಗ, ಜ.17 : ಗುಲ್ಬರ್ಗದಲ್ಲಿ ಭೂಗತ ಪಾತಕಿ ಮುನ್ನಾನನ್ನು ಹಿಡಿಯಲು ಹೋಗಿ ಗುಂಡೇಟು ತಿಂದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅಂತ್ಯ ಸಂಸ್ಕಾರ ಮುಗಿದು ಹೋಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಎಎಸ್ಐ ಉದ್ದಂಡಪ್ಪ ಕಾರ್ಯಾಚರಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಗುಲ್ಬರ್ಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಸಹ ನಿಷೇಧಾಜ್ಞೆ ಮುಂದುವರೆಸಲಾಗಿದೆ.
ಮುನ್ನಾನನ್ನು ಹಿಡಿಯುವ ಕಾರ್ಯಾಚರಣೆ ವೇಳೆ ಗಾಯಗೊಂಡು ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಎಸ್ಐ ಉದ್ದಂಡಪ್ಪ, ಕಾರ್ಯಾಚರಣೆ ಬಗ್ಗೆ ನಮಗೆ ಯಾವುದೇ ಮುನ್ಸೂಚನೆ ಇರಲಿಲ್ಲ. ಶಸ್ತ್ರಾಸ್ತ್ರ ತೆಗೆದುಕೊಂಡು ಘಟನಾ ಸ್ಥಳಕ್ಕೆ ಆಗಮಿಸುವಂತೆ ಮಾಹಿತಿ ಬಂದಿತ್ತು. ಅದರಂತೆ ನಾವು ಅಲ್ಲಿಗೆ ತೆರಳಿದೆವು.
ಘಟನಾ ಸ್ಥಳಕ್ಕೆ ಹೋದಾಗ ಅಲ್ಲಿ ಹಿರಿಯ ಅಧಿಕಾರಿಗಳು ಇದ್ದರು, ಮನೆಯೊಂದಕ್ಕೆ ಕೆಲವು ಅಧಿಕಾರಿಗಳು ತೆರಳಿದರು, ನಾವು ಅಲ್ಲಿಗೆ ನಾವು ಹೋದೆವು. ಅಲ್ಲಿ ಕತ್ತಲು ತುಂಬಿತ್ತು. ಮನೆ ಬಾಗಿಲ ಬಳಿ ಹೋಗುತ್ತಿದ್ದಂತೆ ನನ್ನ ಮೇಲೆ ಗುಂಡಿನ ದಾಳಿ ನಡೆಯಿತು. 2 ಗುಂಡು ನನ್ನ ಹೊಟ್ಟೆಗೆ ಬಿದ್ದಿತು ಎಂದು ಉದ್ದಂಡಪ್ಪ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. [ಮಲ್ಲಿಕಾರ್ಜುನ ಬಂಡೆ ಅಂತಿಮ ಯಾತ್ರೆ]
ನಮ್ಮ ಕಡೆ ಗುಂಡು ಹೊಡೆದವರು ಯಾರು ಎಂದು ತಿಳಿಯಲಿಲ್ಲ. ಸ್ಥಳದಲ್ಲಿದ್ದ ಐಜಿಪಿ ವಜೀರ್ ಅಹಮದ್ ಗಾಯಗೊಂಡಿದ್ದ ತಮ್ಮನ್ನು ಅವರ ಜೀಪಿನಲ್ಲಿ ಆಸ್ಪತ್ರೆಗೆ ದಾಖಲಿಸಿದರು ಎಂದು ಉದ್ದಂಡಪ್ಪ ಹೇಳಿದ್ದಾರೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ತನಿಖೆಯ ನಂತರ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಬರಲಿದೆ.
ಶೂಟೌಟ್ ಬಗ್ಗೆ ಸಮಗ್ರ ತನಿಖೆ
ಗುಲ್ಬರ್ಗದಲ್ಲಿ ನಡೆದ ಶೂಟೌಟ್ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಬಂಡೆ ಸಾವಿನ ಕುರಿತು ಅನೇಕ ಉಹಾಪೋಹಗಳಿದ್ದು, ಅದನ್ನು ನಿವಾರಿಸಲು ಸಮಗ್ರ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವರು ಹೇಳಿದರು.
ಶುಕ್ರವಾರ ಸಹ ನಿಷೇಧಾಜ್ಞೆ
ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅಂತ್ಯಕ್ರಿಯೆ ಗುರುವಾರ ಸಂಜೆ ಮುಗಿದಿದೆ. ಆದರೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಆಳಂದ, ಗುಲ್ಬರ್ಗ ನಗರ ಮತ್ತು ಜೇವರ್ಗಿ ಪಟ್ಟಣದಲ್ಲಿ 144 ಕಾಯ್ದೆ ಅನ್ವಯ ಶುಕ್ರವಾರ ರಾತ್ರಿ 8ಗಂಟೆಯ ತನಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬೆಂಗಳೂರು ಪೊಲೀಸರ ಒಂದು ದಿನದ ವೇತನ
ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ ಬೆಂಗಳೂರು ಪೊಲೀಸರು ಒಂದು ದಿನದ ವೇತನ ನೀಡಲು ನಿರ್ಧರಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಪೊಲೀಸ್ ಕಮೀಷನರ್ ರಾಘವೇಂದ್ರ ಔರಾದ್ಕರ್, ನಗರ ವ್ಯಾಪ್ತಿಗೆ ಬರುವ ಎಲ್ಲಾ ಪೊಲೀಸ್ ಅಧಿಕಾರಿಗಳು ತಮ್ಮ ಒಂದು ದಿನದ ವೇತನ ನೀಡಲು ಸ್ವಯಂ ಪ್ರೇರಿತರಾಗಿ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಖಮರುಲ್, ವಜೀರ್ ಗೈರು
ಖಜೂರಿ ಗ್ರಾಮದಲ್ಲಿ ನಡೆದ ಮಲ್ಲಿಕಾರ್ಜುನ ಬಂಡೆ ಅವರ ಅಂತ್ಯ ಸಂಸ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಮತ್ತು ಐಜಿ ವಜೀರ್ ಅಹಮದ್ ಭಾಗವಹಿಸಿರಲಿಲ್ಲ, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆನಾರೋಗ್ಯದ ಕಾರಣಗಳಿಂದ ಇಬ್ಬರು ಪಾಲ್ಗೊಂಡಿಲ್ಲ ಎಂದು ತಿಳಿದು ಬಂದಿದೆ. ಆದರೆ ಗುಲ್ಬರ್ಗದ ಡಿಎಆರ್ ಮೈದಾನದಲ್ಲಿ ಇಬ್ಬರು ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದ್ದರು.
ಎಎಸ್ಐ ಉದ್ದಂಡಪ್ಪ ಹೇಳಿದ್ದು
ಶೂಟೌಟ್ ನಲ್ಲಿ ಗಾಯಗೊಂಡಿರುವ ಎಎಸ್ಐ ಉದ್ದಂಡಪ್ಪ "ಕಾರ್ಯಾಚರಣೆ ಬಗ್ಗೆ ನಮಗೆ ಯಾವುದೇ ಮುನ್ಸೂಚನೆ ಇರಲಿಲ್ಲ. ಶಸ್ತ್ರಾಸ್ತ್ರ ತೆಗೆದುಕೊಂಡು ಘಟನಾ ಸ್ಥಳಕ್ಕೆ ಆಗಮಿಸುವಂತೆ ಮಾಹಿತಿ ಬಂದಿತ್ತು. ಅದರಂತೆ ನಾವು ಅಲ್ಲಿಗೆ ತೆರಳಿದೆವು. ಮನೆಯನ್ನು ಪ್ರವೇಶಿಸಿದಾಗ ನಮ್ಮ ಮೇಲೆ ದಾಳಿ ನಡೆಯಿತು" ಎಂದು ಹೇಳಿದ್ದಾರೆ.