ಗುಜರಾತ್ ಫಲಿತಾಂಶ, ಬಿಜೆಪಿಗೆ 'ಹೀನಾಯ ಗೆಲುವು': ಕುಮಾರಸ್ವಾಮಿ
ಬೆಂಗಳೂರು, ಡಿ 18: ಗುಜರಾತಿನಲ್ಲಿ ಕಳೆದ 22 ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದೆ, ಅದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ತವರೂರು. ಹಾಗಾಗಿ, ಗುಜರಾತ್ ಚುನಾವಣಾ ಫಲಿತಾಂಶ ಬಿಜೆಪಿಗೆ 'ಹೀನಾಯ ಗೆಲುವು' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಜೆ ಪಿ ಭವನದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಗುಜರಾತ್ ನಲ್ಲಿ ಬಿಜೆಪಿ ಗೆದ್ದಿರುವಂತದ್ದು ಸಂಭ್ರಮಾಚರಣೆ ಮಾಡುವ ಗೆಲುವಲ್ಲಾ. ಗುಜರಾತ್ ಚುನಾವಣಾ ಫಲಿತಾಂಶ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಿರಾಶೆಯನ್ನು ತಂದೊಡ್ಡಿದೆ ಎನ್ನುವುದು ನನ್ನ ಅಭಿಪ್ರಾಯ.
ಕಳೆದ ಭಾರಿ ಬಿಜೆಪಿ ಗೆದ್ದಿದ್ದು 115 ಕ್ಷೇತ್ರವನ್ನು ಮತ್ತು ಹದಿನಾರು ಬಂಡಾಯ ಕಾಂಗ್ರೆಸ್ಸಿಗರು ಬಿಜೆಪಿಯನ್ನು ಸೇರಿದ್ದರು, ಹಾಗಾಗಿ ಬಿಜೆಪಿಯ ಒಟ್ಟು ಲೆಕ್ಕ 131. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಒಂದು ವೇಳೆ 120 ಕ್ಷೇತ್ರವನ್ನು ಗೆದ್ದಿದ್ದರೆ ಅದನ್ನು ಗೆಲುವು ಎನ್ನಬಹುದಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ದೇಶದ ಇದುವರೆಗಿನ ಇತಿಹಾಸವನ್ನು ನೋಡುವುದಾದರೆ ಇದುವರೆಗಿನ ಯಾವುದೇ ಪ್ರಧಾನಮಂತ್ರಿ ಮಾಡದ್ದನ್ನು ಮೋದಿಯವರು ಮಾಡಿದ್ದಾರೆ. ಅವರದ್ದೇ ನಾಡಿನಲ್ಲಿ ಹದಿನೈದು ದಿನಗಳಲ್ಲಿ ಎಪ್ಪತ್ತು ಬಹಿರಂಗ ಸಭೆ ನಡೆಸಿದ ಏಕೈಕ ಪ್ರಧಾನಿ ಅಂದರೆ ಅದು ನರೇಂದ್ರ ಮೋದಿ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಗುಜರಾತಿಗರ ವಿಶ್ವಾಸಗಳಿಸಲು ಪ್ರಧಾನಿಗಳು ಹರಸಾಹಸವನ್ನು ಪಟ್ಟಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷ ದೇಶದಲ್ಲಿ ಹಂತ ಹಂತವಾಗಿ ಸೋಲು ಅನುಭವಿಸುತ್ತಲೇ ಬರುತ್ತಿದೆ. ಗುಜರಾತ್ ಚುನಾವಣೆಯಲ್ಲಿ ಮೂರು ಯುವ ಶಕ್ತಿಗಳು (ಅಲ್ಪೇಶ್, ಜಿಗ್ನೇಶ್, ಹಾರ್ದಿಕ್ ) ಸರಕಾರದ ವಿರುದ್ದ ಸಂಘಟನಾತ್ಮಕವಾಗಿ ಹೋರಾಡಿ ಅದರ ಶಕ್ತಿಯನ್ನು ಕಾಂಗ್ರೆಸ್ಸಿಗೆ ಧಾರೆ ಎರೆದಿದ್ದಾರೆ.
ಆದರೆ, ಇದರ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ. ಗುಜರಾತ್ ನಲ್ಲಿದ್ದ ಆಡಳಿತ ವಿರೋಧಿ ಅಲೆಯ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಲಿಲ್ಲ. ಬಿಜೆಪಿ ಅಲ್ಲಿ ಗೆದ್ದಿರಬಹುದು, ಆದರೆ ಇದೊಂದು ಹೀನಾಯ ಗೆಲುವು ಎಂದು ವ್ಯಾಖ್ಯಾನಿಸಬಹುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕೊನೇ ಮಾತು: ಸೀಟು ಕಮ್ಮಿ ಬಂದಿರಬಹುದು, ವೋಟ್ ಶೇರ್ ಕಡಿಮೆಯಾಗಿರಬಹುದು. ಆದರೂ, ವಿನ್ ಈಸ್ ವಿನ್ ಅಲ್ಲವೇ ಕುಮಾರಣ್ಣ?












Click it and Unblock the Notifications