ಜೆಡಿಎಸ್ ಶಾಸಕರ ಪುತ್ರನಿಂದ ಬಿಜೆಪಿ ಸಂಸದರ ಭೇಟಿ!
ಬೆಂಗಳೂರು, ಮೇ 28 : ಜೆಡಿಎಸ್ ಪಕ್ಷದ ಹಿರಿಯ ನಾಯಕರೊಬ್ಬರ ಪುತ್ರ ಬೆಂಗಳೂರಿನಲ್ಲಿ ಸಂಸದ ತೇಜಸ್ವಿ ಸೂರ್ಯ ಭೇಟಿಯಾಗಿದ್ದಾರೆ. ಇದರ ಹಿಂದೆ ರಾಜಕೀಯ ಕಾರಣಗಳು ಇಲ್ಲದಿದ್ದರೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Recommended Video
ಗುರುವಾರ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯರನ್ನು ದುಶ್ಯಂತ್ ಶ್ರೀನಿವಾಸ್ ಭೇಟಿಯಾದರು. ತುಮಕೂರು ಕ್ಷೇತ್ರ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಅವರ ಸೋದರ ಸಂಬಂಧಿ ಸಹ ಈ ಸಂದರ್ಭದಲ್ಲಿ ಜೊತೆಗಿದ್ದರು.
ದುಶ್ಯಂತ್ ಶ್ರೀನಿವಾಸ್ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ, ಮಾಜಿ ಸಚಿವ ಎಸ್. ಆರ್. ಶ್ರೀನಿವಾಸ್ ಅವರ ಪುತ್ರ. ಬೆಂಗಳೂರು ನಗರದಲ್ಲಿ ಇಬ್ಬರು ಯುವ ನಾಯಕರು ಭೇಟಿಯಾಗಿ ಹಲವಾರು ವಿಚಾರಗಳ ಕುರಿತು ಚರ್ಚೆ ಮಾಡಿದ್ದಾರೆ.

ಈ ಭೇಟಿಗೆ ರಾಜಕೀಯ ಕಾರಣಗಳು ಇಲ್ಲದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಭೇಟಿಯ ಫೋಟೋಗಳು ವೈರಲ್ ಆಗಿವೆ. ಲಾಕ್ ಡೌನ್ ಸಮಯದಲ್ಲಿ ಗುಬ್ಬಿ ಕ್ಷೇತ್ರದ ತುಂಬಾ ಸಂಚಾರ ನಡೆಸಿದ್ದ ದುಶ್ಯಂತ್ ಶ್ರೀನಿವಾಸ್ ಮಾಸ್ಕ್ ವಿತರಣೆ ಮಾಡಿದ್ದರು, ಜನರ ಕಷ್ಟ ಆಲಿಸಿದ್ದರು.
ಬಿಜೆಪಿ ಸೇರುವ ಸುದ್ದಿ ಹಬ್ಬಿತ್ತು: ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಎಸ್. ಆರ್. ಶ್ರೀನಿವಾಸ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅದಕ್ಕೆ ಕಾರಣವಾಗಿದ್ದೂ ಅವರು ನೀಡಿದ್ದ ಒಂದು ಹೇಳಿಕೆ.

ಎಸ್. ಆರ್. ಶ್ರೀನಿವಾಸ್, "ನಮ್ಮ ಪಕ್ಷದ ರೀತಿ ಬಿಜೆಪಿಯಲ್ಲಿ ಅತೃಪ್ತರು ಕಿತ್ತಾಡುವುದು, ರಾಜೀನಾಮೆ ಕೊಡುವುದು ನಡೆಯಲ್ಲ. ಅವರಿಗೆ ಅವರದ್ದೇ ಆದ ಸಿದ್ಧಾಂತವಿದೆ, ಶಿಸ್ತು ಇದೆ. ಹೈಕಮಾಂಡ್ ಬಿಗಿಯಾಗಿದೆ ಹಾಗಾಗಿ ಸರ್ಕಾರ ಪೂರ್ಣ ಅವಧಿ ಮುಗಿಸಲಿದೆ" ಎಂದು ಹೇಳಿದ್ದರು.
ತಮ್ಮ ಮಾತಿನ ಬಗ್ಗೆ ಸ್ಪಷ್ಟನೆ ನೀಡಿದ್ದ ಅವರು, "ವಿಧಾನಸಭೆಯ ಈ ಅವಧಿವರೆಗೂ ಪಕ್ಷದಲ್ಲಿ ಇರುತ್ತೇನೆ. ಈ ಸಮಯದಲ್ಲಿ ಪಕ್ಷ ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ. ಈ ಅವಧಿ ಬಳಿಕ ರಾಜಕೀಯ ನಿವೃತ್ತಿ ಪಡಿಬೇಕು ಎಂದು ಕೊಂಡಿದ್ದೇನೆ" ಎಂದು ಹೇಳಿದ್ದರು.












Click it and Unblock the Notifications