ಸಂಧಾನದ ಬಳಿಕವೂ ಮುಂದುವರಿದ ಜಿ.ಟಿ.ದೇವೇಗೌಡರ ಮೌನ
ಮೈಸೂರು, ನವೆಂಬರ್ 5: ಹಳೇ ಮೈಸೂರು ಭಾಗದ ಪ್ರಭಾವಿ ಒಕ್ಕಲಿಗರ ನಾಯಕ, ಶಾಸಕ ಜಿ.ಟಿ.ದೇವೇಗೌಡರು ಜೆಡಿಎಸ್ ಅನ್ನು ಬಿಟ್ಟು ಹೋಗದಂತೆ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಮಾಡಿದ ಸಂಧಾನ ಫಲಪ್ರದವಾದಂತೆ ಮೇಲುನೋಟಕ್ಕೆ ಕಂಡು ಬಂದಿದೆ. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ನೊಳಗೆ ಅಸಮಾಧಾನದ ಕಿಚ್ಚು ನಿಧಾನವಾಗಿ ಹತ್ತಿಕೊಳ್ಳಲು ಆರಂಭಿಸಿದ್ದು ಅದು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಎಂಬುದು ಸದ್ಯದ ಕುತೂಹಲವಾಗಿದೆ.
ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಜೆಡಿಎಸ್ನಿಂದ ದೂರವಿದ್ದ ಜಿ.ಟಿ.ದೇವೇಗೌಡರು ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರೊಂದಿಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದದ್ದು ಸುದ್ದಿಗೆ ಗ್ರಾಸವಾಗುತ್ತಿತ್ತು. ಜೆಡಿಎಸ್ನಲ್ಲಿದ್ದರೂ ಇರದಂತೆ ತಮ್ಮ ಶಾಸಕ ಅವಧಿಯನ್ನು ಪೂರೈಸುತ್ತಾ ಬಂದಿದ್ದ ಅವರ ನಡೆ ಎತ್ತ ಕಡೆ? ಎಂಬುವುದೇ ಯಕ್ಷ ಪ್ರಶ್ನೆಯಾಗಿ ಕಾಡಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಮಾತುಕತೆ ಹೊರತು ಪಡಿಸಿ ಅವರು ಜೆಡಿಎಸ್ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಸಭೆಯನ್ನು ನಡೆಸುವ ಗೋಜಿಗೆ ಹೋಗಿರಲಿಲ್ಲ.
ಸುಮಾರು ಮೂರು ವರ್ಷಗಳ ಕಾಲ ಶಾಸಕ ಜಿ.ಟಿ.ದೇವೇಗೌಡರ ತಟಸ್ಥ ಧೋರಣೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಿಗೆ ಗೊಂದಲ ತಂದಿತ್ತು. ತಾವು ಜಿ.ಟಿ.ದೇವೇಗೌಡರ ಬೆಂಬಲಿಗರಾಗಿರುವುದೋ ಅಥವಾ ಜೆಡಿಎಸ್ ಕಾರ್ಯಕರ್ತರಾಗಿರುವುದೋ? ಹೀಗೆ ಏನು ಮಾಡಬೇಕೆಂದು ತೋಚದೆ ಒದ್ದಾಡಿದ್ದರು. ಅದಾಗಲೇ ಕಾಂಗ್ರೆಸ್ ಮುಖಂಡರು ಕ್ಷೇತ್ರದಲ್ಲಿ ಸಭೆ, ಪ್ರಚಾರ ಮಾಡುತ್ತಿದ್ದರು. ಇದು ಜೆಡಿಎಸ್ ಪ್ರಾಬಲ್ಯ ಹೊಂದಿದ್ದ ಕ್ಷೇತ್ರದಲ್ಲಿ ಜೆಡಿಎಸ್ನ ಕೆಲವು ನಿಷ್ಠಾವಂತ ಮುಖಂಡರನ್ನು ಚಿಂತೆಗೀಡು ಮಾಡಿತ್ತು. ಹೀಗಾಗಿ ತಾವು ಮೌನಕ್ಕೆ ಜಾರಿದರೆ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ಗೆ ತೊಂದರೆಯಾಗಬಹುದೆಂದು ಅರಿತು ನಿಖಿಲ್ ಕುಮಾರ ಸ್ವಾಮಿ ಅವರನ್ನು ಕರೆತಂದು ಕಾರ್ಯಕರ್ತರ ಸಭೆ ನಡೆಸಿದ್ದರು.

ರಾಷ್ಟ್ರೀಯ ಪಕ್ಷಗಳ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಿಟಿಡಿ
ಅವತ್ತಿನ ಪರಿಸ್ಥಿತಿಯಲ್ಲಿ ಜಿ.ಟಿ.ದೇವೇಗೌಡರು ಕಾಂಗ್ರೆಸ್ನತ್ತ ಹೋಗುತ್ತಾರೆ ಎಂಬ ವದಂತಿ ಹರಡಿತ್ತಲ್ಲದೆ, ಅದಕ್ಕೆ ಪುಷ್ಠಿ ನೀಡುವಂತೆ ಸಿದ್ದರಾಮಯ್ಯ ಅವರೊಂದಿಗೆ ಕಾಣಿಸಿಕೊಂಡಿದ್ದರು. ಅದಾದ ನಂತರ ಬಿಜೆಪಿ ಮುಖಂಡರೊಂದಿಗೂ ಅವರು ಕಾಣಿಸಿಕೊಂಡಿದ್ದರು. ಆಗ ಜಿ.ಟಿ.ದೇವೇಗೌಡರು ಜೆಡಿಎಸ್ ಪಕ್ಷದಲ್ಲಿ ಉಳಿಯಲ್ಲ ಎಂಬುದು ಬಹುತೇಕ ಜೆಡಿಎಸ್ ಮುಖಂಡರಿಗೆ ಖಾತ್ರಿಯಾಗಿತ್ತು. ಹೀಗಾಗಿ ಕೆಲವು ಜೆಡಿಎಸ್ ಮುಖಂಡರು ಮುಂದೆ ನಿಂತು ಪಕ್ಷದ ಸಂಘಟನೆಗೆ ಮುಂದಾಗಿದ್ದರು. ಅದೆಲ್ಲದರ ಮಧ್ಯೆ ಕುಮಾರಸ್ವಾಮಿ ಅವರು ತಾವೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಜಿ.ಟಿ.ದೇವೇಗೌಡರಿಗೆ ಟಾಂಗ್ ನೀಡಿದ್ದರು.

ಮಗನ ರಾಜಕೀಯ ಭವಿಷ್ಯದ ಚಿಂತೆಯಲ್ಲಿ ಜಿಟಿಡಿ
ಕಳೆದ ಮೂರು ವರ್ಷಗಳ ಕಾಲದ ಜಿ.ಟಿ.ದೇವೇಗೌಡರ ನಡೆ ಎಲ್ಲರಲ್ಲಿಯೂ ಕುತೂಹಲ ಕೆರಳಿಸಿತ್ತು. ಅವರು ಕೊನೆಗೂ ತಮ್ಮ ಮೌನ ಮುರಿದು ಕೆಲವೇ ತಿಂಗಳಲ್ಲಿ ನಿಲುವು ತಿಳಿಸುವ ಬಗ್ಗೆಯೂ ಈ ನಡುವೆ ಹೇಳಿದ್ದರು. ಇಷ್ಟಕ್ಕೂ ಅವರ ಈ ರೀತಿಯ ವರ್ತನೆಗೆ ಕಾರಣವೇನು? ಎಂದು ಹುಡುಕುತ್ತಾ ಹೋದರೆ ಜಿ.ಟಿ.ದೇವೇಗೌಡರು ತಮ್ಮ ಮಗನ ರಾಜಕೀಯ ಭವಿಷ್ಯದ ಬಗ್ಗೆ ಯೋಚಿಸುತ್ತಿರುವುದು ಕಂಡು ಬರುತ್ತಿದೆ. ಯಾವ ಪಕ್ಷ ಮಗ ಜಿ.ಡಿ.ಹರೀಶ್ ಗೌಡ ಅವರಿಗೆ ಟಿಕೆಟ್ ನೀಡುತ್ತದೆಯೋ ಆ ಪಕ್ಷದತ್ತ ಮುಖ ಮಾಡುವುದು ಅವರ ಆಲೋಚನೆಯಾಗಿತ್ತು.

ಮಗನಿಗೆ ಹುಣಸೂರು ಟಿಕೆಟ್ ಬೇಡಿಕೆ
ಜಿ.ಟಿ.ದೇವೇಗೌಡರ ಈ ಷರತ್ತಿಗೆ ಕಾಂಗ್ರೆಸ್ ಒಪ್ಪುವುದು ಕಷ್ಟವಾಗಿತ್ತು. ಕಾರಣ ಜಿ.ಡಿ.ಹರೀಶ್ ಗೌಡರ ಕಾರ್ಯಕ್ಷೇತ್ರ ಹುಣಸೂರು ಆಗಿದ್ದು, ಈಗಾಗಲೇ ಅಲ್ಲಿ ಎಚ್.ಪಿ.ಮಂಜುನಾಥ್ ಶಾಸಕರಾಗಿದ್ದಾರೆ. ಜತೆಗೆ ಹೊಸ ಮುಖಗಳಿಗೆ ಮಣೆ ಹಾಕಿದರೆ ಮೊದಲಿನಿಂದಲೂ ಪಕ್ಷಕ್ಕೆ ದುಡಿದ ಮುಖಂಡರು ಅಸಮಾಧಾನಗೊಳ್ಳಬಹುದು. ಹೀಗಾಗಿ ವಿಧಾನಸಭಾ ಟಿಕೆಟ್ ನೀಡುವ ಬದಲಿಗೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ನೀಡಲು ಸಮ್ಮತ ಸೂಚಿಸಲಾಗಿತ್ತು ಎನ್ನಲಾಗಿದೆ. ಆದರೆ ಅದನ್ನು ಒಪ್ಪುವ ಸ್ಥಿತಿಯಲ್ಲಿ ಜಿ.ಟಿ.ದೇವೇಗೌಡರಾಗಲೀ, ಪುತ್ರ ಜಿ.ಡಿ.ಹರೀಶ್ ಗೌಡರಾಗಲೀ ಇರಲಿಲ್ಲ.

ಸಂಧಾನ ನಡೆಸಿದ ಹೆಚ್.ಡಿ.ದೇವೇಗೌಡರು
ಕಾಂಗ್ರೆಸ್ಗೆ ಹೋಲಿಸಿದರೆ ಬಿಜೆಪಿ ಜಿ.ಟಿ.ದೇವೇಗೌಡರ ಷರತ್ತಿಗೆ ಒಪ್ಪಲು ತಯಾರಿತ್ತು. ಕಾರಣ ಹುಣಸೂರಿನಲ್ಲಿ ಬಿಜೆಪಿ ಇನ್ನೂ ಪ್ರಾಬಲ್ಯ ಸಾಧಿಸಿಲ್ಲ. ಅಲ್ಲಿ ಪಕ್ಷ ಗೆಲುವು ಸಾಧಿಸಬೇಕಾದರೆ ಪ್ರಭಾವಿ ನಾಯಕರ ಅಗತ್ಯತೆ ಎದ್ದು ಕಾಣಿಸುತ್ತಿದೆ. ಮುಂದಿನ ಚುನಾವಣೆಯಲ್ಲಿ ಗೆಲುವು ಬಹುಮುಖ್ಯವಾಗಿದ್ದರಿಂದ ಬಿಜೆಪಿ ನಾಯಕರು ಹಸಿರು ನಿಶಾನೆ ತೋರುವಂತೆ ಕಾಣಿಸುತ್ತಿತ್ತು. ಆದರೆ ಇದೆಲ್ಲದರ ಅರಿವಿದ್ದ ಮತ್ತು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಿರುವುದನ್ನು ಮನಗಂಡ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ತಾವೇ ಅಖಾಡಕ್ಕಿಳಿದು ನೇರವಾಗಿ ಜಿ.ಟಿ.ದೇವೇಗೌಡರ ಮನೆಗೆ ಹೋಗಿ ಸಂಧಾನ ನಡೆಸಿ ಅವರು ಪಕ್ಷದಲ್ಲಿಯೇ ಉಳಿಯುವಂತೆ ಮಾಡಿದ್ದರು.

ಮೈಸೂರು ಜವಾಬ್ದಾರಿ ಜಿಟಿಡಿ ಹೆಗಲಿಗೆ
ಸಂಧಾನದ ವೇಳೆ ಜಿ.ಟಿ.ದೇವೇಗೌಡರಿಗೆ ಮೈಸೂರು ಭಾಗದ ಜೆಡಿಎಸ್ ಉಸ್ತುವಾರಿಯನ್ನು ವಹಿಸಿರುವುದಾಗಿ ವರಿಷ್ಠರಾದ ಹೆಚ್.ಡಿ.ದೇವೇಗೌಡ ಘೋಷಣೆ ಮಾಡಿದ್ದರು. ಇದಾದ ನಂತರ ಎಲ್ಲವೂ ಸರಿಹೋಗುತ್ತದೆ ಎಂದೇ ಹೇಳಲಾಗಿತ್ತು. ಆದರೆ ಇದುವರೆಗೆ ಅಂತಹ ಯಾವುದೇ ಬೆಳವಣಿಗೆಗಳು ನಡೆದಂತೆ ಕಾಣುತ್ತಿಲ್ಲ. ಜಿ.ಟಿ.ದೇವೇಗೌಡರು ಪಕ್ಷದ ವೇದಿಕೆಗೆ ಇನ್ನೂ ಕೂಡ ಬಾರದೆ ಮೊದಲು ಹೇಗಿದ್ದಾರೋ ಹಾಗೆಯೇ ಇದ್ದಾರೆ. ಇದೆಲ್ಲದರ ನಡುವೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ನ ಕೆಲವು ಮುಖಂಡರು ಜಿ.ಟಿ.ದೇವೇಗೌಡರ ವಿರುದ್ಧವೇ ತಮ್ಮ ಮುನಿಸನ್ನು ಹೊರ ಹಾಕುತ್ತಿರುವುದು ಎದ್ದು ಕಾಣಿಸುತ್ತಿದೆ. ಇದೆಲ್ಲವನ್ನು ಗಮನಿಸಿದರೆ ಮುಂದಿನ ಬೆಳವಣಿಗೆಯ ಹಾದಿ ಹೇಗಿರಬಹುದು ಎಂಬ ಕುತೂಹಲ ಕಾಡಿದೆ.
-
ಕೇರಳ ವಿಧಾನಸಭೆ ಚುನಾವಣೆ: ಸಿಎಂ ಪಿಣರಾಯಿ ವಿಜಯನ್ ನಾಮಪತ್ರ ಸಲ್ಲಿಕೆ, ಒಟ್ಟು ಆಸ್ತಿ ಮೌಲ್ಯ 1,00,00,000 ರೂಪಾಯಿಗೂ ಅಧಿಕ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications