ಗೃಹಲಕ್ಷ್ಮಿ ಯೋಜನೆ; ಬಂತು ಮತ್ತೊಂದು ಸುತ್ತೋಲೆ
ಬೆಂಗಳೂರು, ಜುಲೈ 18; ಕರ್ನಾಟಕದ ಕಾಂಗ್ರೆಸ್ ಸರ್ಕಾರ ನೀಡಿರುವ 5 ಗ್ಯಾರಂಟಿಗಳಲ್ಲಿ ಒಂದಾದ 'ಗೃಹಲಕ್ಷ್ಮಿ ಯೋಜನೆ'ಗೆ ಜುಲೈ 19ರಂದು ಬುಧವಾರ ಚಾಲನೆ ಸಿಗಲಿದೆ.ಯೋಜನೆಯ ಫಲಾನುಭವಿಗಳು ಯಾವುದೇ ಮಧ್ಯವರ್ತಿಗಳ ಆಮಿಷಕ್ಕೆ ಒಳಗಾಗದೇ ಉಚಿತವಾಗಿ ನೋಂದಣಿ ಮಾಡಿಕೊಳ್ಳಿರಿ ಎಂದು ಸರ್ಕಾರ ಕರೆ ನೀಡಿದೆ.
ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ಸಲುವಾಗಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂ.ಗಳನ್ನು ನೀಡುವುದು ಗೃಹಲಕ್ಷ್ಮಿ ಯೋಜನೆಯಾಗಿದೆ. ದಿನಾಂಕ 6/6/2023ರಂದು ಸರ್ಕಾರದ ಆದೇಶದಂತೆ ಯೋಜನೆ ಜಾರಿಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, 'ಗೃಹಲಕ್ಷ್ಮಿ' ಯೋಜನೆಯ ಜಾರಿ ಕುರಿತು ದಿನಾಂಕ 15/7/2023ರಂದು ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಸೂಚನೆಗಳನ್ನು ನೀಡಿದ್ದಾರೆ. ಯೋಜನೆ ಜಾರಿಗಾಗಿ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಗೃಹಲಕ್ಷ್ಮಿ ಯೋಜನೆ ಸೂಚನೆಗಳು
* ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳ ನೋಂದಣಿಗೆ ಗುರುತಿಸಲ್ಪಟ್ಟಿರುವ ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್/ ಬಾಪೂಜಿ ಸೇವಾ ಕೇಂದ್ರ/ ನಗರ ಸ್ಥಳೀಯ ಆಡಳಿತ ಸರ್ಕಾರಿ ಅಧಿಕಾರಿ/ ಕಛೇರಿಯ ಕೇಂದ್ರಗಳಲ್ಲಿ ಮೇಲ್ವಿಚಾರಣೆಯನ್ನು ನಿರ್ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸುವುದು.
* ಸದರಿ ಕೇಂದ್ರಗಳಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಓರ್ವ ಪೊಲೀಸ್ ಸಿಬ್ಬಂದಿಯನ್ನು ನೇಮಿಸುವುದು.
* ನೋಂದಣಿ ಕೇಂದ್ರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡರೆ ನೋಂದಣಿ ಕಾರ್ಯಕ್ಕೆ ತೊಂದರೆಯಾಗದಂತ ಬ್ಯಾಟರಿ ಬ್ಯಾಕ್ಅಪ್ ಮತ್ತು ಸುಸ್ಥಿತಿಯಲ್ಲಿರುವ ಪ್ರಿಂಟರ್ ವ್ಯವಸ್ಥೆ ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.
* ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ Helpdesk ಅನ್ನು ಸ್ಥಾಪಿಸುವುದು.
* ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರಜಾಪ್ರತಿನಿಧಿಗಳ ಪಟ್ಟಿಯನ್ನು ಪಡೆದು ಅವರ ನೋಂದಣಿ ಮಾಡಿಸುವುದು. ತಾಲ್ಲೂಕು ಮಟ್ಟದಲ್ಲಿ ಅವರಿಗೆ ತರಬೇತಿ ಒದಗಿಸುವುದು.
* ಫಲಾನುಭವಿಗಳ ನೋಂದಣಿ ಕೇಂದ್ರಗಳಲ್ಲಿ ಮಳೆಯಿಂದ ರಕ್ಷಿಸಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವುದು.
* ಪ್ರತಿ ನೋಂದಣಿ ಕೇಂದ್ರಕ್ಕೆ ನಿಯೋಜಿಸಿದ ನೋಡಲ್ ಅಧಿಕಾರಿಯ ವಿವರಗಳನ್ನು ಇ-ಆಡಳಿತ ಇಲಾಖೆ ಒದಗಿಸುವ ಲಿಂಕ್ನಲ್ಲಿ ಅಪ್ಲೋಡ್ ಮಾಡುವುದು.
ಆಮಿಷಕ್ಕೆ ಒಳಗಾಗಬೇಡಿ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, "ಗೃಹಲಕ್ಷ್ಮಿ ಯೋಜನೆಗೆ ಜುಲೈ 19ರಂದು ಚಾಲನೆ ಸಿಗಲಿದೆ. ಯೋಜನೆಯ ಫಲಾನುಭವಿಗಳು ಯಾವುದೇ ಮಧ್ಯವರ್ತಿಗಳ ಆಮಿಷಕ್ಕೆ ಒಳಗಾಗದೇ ಉಚಿತವಾಗಿ ನೋಂದಣಿ ಮಾಡಿಕೊಳ್ಳಿರಿ" ಎಂದು ಕರೆ ನೀಡಿದ್ದಾರೆ.
ಯೋಜನೆಯ ಸೌಲಭ್ಯ ಪಡೆಯಲು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಬಾಪೂಜಿ ಕೇಂದ್ರಗಳಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು ಅಥವಾ ಸ್ವಯಂಸೇವಕ 'ಪ್ರಜಾಪ್ರತಿನಿಧಿಗಳು ' ಮನೆ ಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಲಿದ್ದಾರೆ.
ನೋಂದಣಿ ಮಾಡಿಕೊಳ್ಳಲು ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಡಿತರ ಕಾರ್ಡ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಜಾ ಪ್ರತಿನಿಧಿ ನೇಮಕಾತಿ ಕುರಿತು; ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುವ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಂಟಾಗುವ ಒತ್ತಡವನ್ನು ತಪ್ಪಿಸಲು ಹಾಗೂ ಅರ್ಜಿದಾರರಿಗೆ ಅನುಕೂಲವಾಗುವಂತೆ ಮೊಬೈಲ್ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಅರ್ಜಿ ಭರ್ತಿ ಮಾಡಿ ಸಲ್ಲಿಸಲು ಪ್ರಜಾ ಪ್ರತಿನಿಧಿಯವರನ್ನು ನೇಮಕ ಮಾಡಲಾಗುತ್ತದೆ.
ಪ್ರಜಾ ಪ್ರತಿನಿಧಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ತಂತ್ರಜ್ಞಾನ ಅಡೆತಡೆಗಳನ್ನು ಎದುರಿಸುತ್ತಿರುವ ನಾಗರಿಕರಿಗೆ ಸಹಾಯ ಮಾಡುತ್ತಾರೆ. ಕರ್ನಾಟಕ ಸರ್ಕಾರವು ಅಭಿವೃದ್ಧಿ ಪಡಿಸಿದ ಮೊಬೈಲ್ ಅಪ್ಲಿಕೇಶನ್ ಅನ್ನು ನೋಂದಣಿಗಾಗಿ ಬಳಸುತ್ತಾರೆ. ಇವರು ಉದ್ದೇಶಿತ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡುತ್ತಾರೆ ಮತ್ತು ನಾಗರಿಕರ ಪರವಾಗಿ ಅರ್ಜಿ ಸಲ್ಲಿಸುತ್ತಾರೆ.
ಪ್ರಜಾ ಪ್ರತಿನಿಧಿಯವರು ಈ ಸೇವೆಯನ್ನು ಸ್ವಯಂ ಪ್ರೇರಣೆಯಿಂದ ಮಾಡುತ್ತಿದ್ದು ಅವರಿಗೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಪ್ರಜಾ ಪ್ರತಿನಿಧಿಗಳು ಆಯಾ ತಾಲ್ಲೂಕಿನ ನಿವಾಸಿಗಳಾಗಿದ್ದು, 10ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ಸ್ವಯಂ ಸೇವಕರಾಗಿ ಕೆಲಸ ನಿರ್ವಹಿಸಹಿಸಲು ಆಸಕ್ತಿಯುವುಳ್ಳವರಾಗಿರಬೇಕು.












Click it and Unblock the Notifications