ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ವಿಳಂಬಕ್ಕೆ 6 ಬಣಗಳು ಕಾರಣ!
ಬೆಂಗಳೂರು, ಏಪ್ರಿಲ್ 11; ಕರ್ನಾಟಕ ವಿಧಾನಸಭೆ ಚುನಾವಣೆಗೆ ಏಪ್ರಿಲ್ 13ರಂದು ಅಧಿಸೂಚನೆ ಪ್ರಕಟವಾಗಲಿದೆ. ಆದರೆ ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿ ಇನ್ನೂ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ. ಬಿಜೆಪಿ ಪಟ್ಟಿ ಏಕೆ ತಡವಾಗುತ್ತಿದೆ? ಎಂಬುದು ರಾಜ್ಯ ರಾಜಕೀಯದ ಚರ್ಚೆಯ ವಿಚಾರ. ರಾಜ್ಯದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲತಾಂಶ ಪ್ರಕಟವಾಗಲಿದೆ.
ಕರ್ನಾಟಕದ ಬಿಜೆಪಿ ನಾಯಕರು ಶುಕ್ರವಾರದಿಂದ ನವದೆಹಲಿಯಲ್ಲಿ ಸರಣಿ ಸಭೆಗಳನ್ನು ನಡೆಸಿದರೂ ಪಟ್ಟಿ ಅಂತಿಮವಾಗಿಲ್ಲ. ಪಟ್ಟಿ ಬಿಡುಗಡೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ಬೆಂಗಳೂರಿಗೆ ವಾಪಸ್ ಆಗಿರುವ ಯಡಿಯೂರಪ್ಪ ನಿವಾಸಕ್ಕೆ ಶಾಸಕರು ಭೇಟಿ ನೀಡುತ್ತಿದ್ದು, ಟಿಕೆಟ್ ಪಡೆಯಲು ಅಂತಿಮ ಹಂತದ ಕಸರತ್ತು ಕೈಗೊಂಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಮಂಗಳವಾರ ತಡರಾತ್ರಿ ಅಥವ ಬುಧವಾರ ಪ್ರಕಟವಾಗಲಿದೆ. ಏಪ್ರಿಲ್ 13 ರಿಂದ 20ರ ತನಕ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಕೆ ಮಾಡಬಹುದು. ಬಿಜೆಪಿ ವಲಯಗಳ ಮಾಹಿತಿ ಪ್ರಕಾರ ಮೊದಲ ಪಟ್ಟಿಯಲ್ಲಿ 170 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ.
ಬಿಜೆಪಿ 6 ಬಣಗಳ ಪಟ್ಟಿ; ಬಿಜೆಪಿ ಪಟ್ಟಿ ಬಿಡುಗಡೆ ವಿಳಂಬವಾಗಲು ಕಾರಣ ಏನು? ಎಂದು ಪ್ರತಿಪಕ್ಷ ಕಾಂಗ್ರೆಸ್ ಮಾಹಿತಿ ನೀಡಿದೆ. ಬಿಜೆಪಿಯಲ್ಲಿರುವ 6 ಬಣಗಳ ಕಾರಣದಿಂದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪಕ್ಷ ಪರದಾಟ ನಡೆಸುತ್ತಿದೆ. 'ಈ ಬಣಗಳ ಮೇಲಾಟದಲ್ಲಿ ಕನಿಷ್ಠ ಒಂದು ಪಟ್ಟಿಯನ್ನೂ ಬಿಡುಗಡೆ ಮಾಡಲಾಗದ್ದು ಬಿಜೆಪಿ "ಮುಳುಗಿದ ಹಡಗು" ಎಂಬುದಕ್ಕೆ ನಿದರ್ಶನ' ಎಂದು ಪ್ರತಿಪಕ್ಷ ಟೀಕೆ ಮಾಡಿದೆ.

ಕಾಂಗ್ರೆಸ್ ತನ್ನ ಟ್ವೀಟ್ನಲ್ಲಿ, 'ಅಭ್ಯರ್ಥಿಗಳ ಬಡಿದಾಟಕ್ಕಿಂತ ಬಣ ಬಡಿದಾಟವೇ ಪಟ್ಟಿ ಬಿಡುಗಡೆಗೆ ತಡೆಯೊಡ್ಡಿದೆ!
BSY ಬಣ,
ಬೊಮ್ಮಾಯಿ ಬಣ,
RSS ಬಣ,
ವಲಸಿಗರ ಬಣ,
ಸಂತೋಷ್ ಬಣ,
ಹೈಕಮಾಂಡ್ ಬಣ ಎಂಬ ಕಾರಣಕ್ಕೆ ಕನಿಷ್ಠ ಒಂದು ಪಟ್ಟಿಯನ್ನೂ ಬಿಡುಗಡೆ ಮಾಡಲಾಗುತ್ತಿಲ್ಲ ಎಂದು ದೂರಿದೆ.
ಕಾಂಗ್ರೆಸ್ ಪಕ್ಷ ತನ್ನ ಮತ್ತೊಂದು ಟ್ವೀಟ್ನಲ್ಲಿ, "ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೇ ಘೋಷಿಸಲು ತಿಣುಕಾಡುತ್ತಿರುವ ಬಿಜೆಪಿ ಕರ್ನಾಟಕಗೆ ಚುನಾವಣೆ ಎದುರಿಸುವ ಶಕ್ತಿ ಇದೆಯೇ. ಇಂದೇ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಬಿಎಸ್ವೈ ಹೇಳಿದರೆ, ಇನ್ನೆರಡು ದಿನ ತಡ ಎಂದು ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ಪಟ್ಟಿ ಬಿಡುಗಡೆಯ ದಿನಾಂಕದಲ್ಲೇ ಒಮ್ಮತ ಇಲ್ಲದವರು ಅಭ್ಯರ್ಥಿಗಳಲ್ಲಿ ಒಮ್ಮತ ಇರಲು ಸಾಧ್ಯವೇ!' ಎಂದು ಪ್ರಶ್ನೆ ಮಾಡಿದೆ.
ಇಂದೇ ಪಟ್ಟಿ ನಿರೀಕ್ಷೆ ಮಾಡಬಹುದು; ಮಂಗಳವಾರ ಬೆಳಗ್ಗೆ ದೆಹಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಇಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಿರೀಕ್ಷೆ ಮಾಡಬಹುದು" ಎಂದು ಹೇಳಿದರು. ಮಂಗಳವಾರ ಸಂಜೆ ಅಥವ ತಡರಾತ್ರಿ ಪಟ್ಟಿ ಬಿಡುಗಡೆಯಾಗಲಿದೆಯೇ? ಎಂದು ಕಾದು ನೋಡಬೇಕಿದೆ.
ಶುಕ್ರವಾರ ಸಂಜೆಯಿಂದ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್, ಬಿ. ಎಸ್. ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಸಿ. ಟಿ. ರವಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ದೆಹಲಿಯಲ್ಲಿ ಸರಣಿ ಸಭೆಗಳನ್ನು ನಡೆಸಿದ್ದಾರೆ. ಸೋಮವಾರ ಅಮಿತ್ ಶಾ ರಾಜ್ಯ ನಾಯಕರ ಜೊತೆ ಸಭೆ ನಡೆಸಿದ್ದಾರೆ. ಸಂಜೆ ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ರಾಜ್ಯ ನಾಯಕರ ಜೊತೆ, ಬಿ. ಎಸ್. ಯಡಿಯೂರಪ್ಪ ಜೊತೆ ಪ್ರತ್ಯೇಕ ಸಭೆಯನ್ನು ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಜೊತೆಗಿನ ಸಭೆಯ ಬಳಿಕ ಸೋಮವಾರ ಸಂಜೆ ಬೆಂಗಳೂರಿಗೆ ವಾಪಸ್ ಆದರು. ಆದರೆ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ದೆಹಲಿಯಲ್ಲಿಯೇ ಇದ್ದಾರೆ. ಮೊದಲ ಪಟ್ಟಿಯಲ್ಲಿ 13 ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿವೆ. ಆದ್ದರಿಂದ ಬಿಜೆಪಿ ಪಟ್ಟಿ ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ 124 ಮತ್ತು 42 ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದೆ. ಜೆಡಿಎಸ್ ಪಕ್ಷ 93 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಆಮ್ ಆದ್ಮಿ ಪಕ್ಷ 3 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದೆ. ಈ ಬಾರಿಯ ಚುನಾವಣೆಗೆ ಏಪ್ರಿಲ್ 13 ರಿಂದ 20 ರ ತನ ನಾಮಪತ್ರವನ್ನು ಸಲ್ಲಿಕೆ ಮಾಡಬಹುದಾಗಿದೆ.












Click it and Unblock the Notifications