ಶಿಕ್ಷಕರ ನೇಮಕಾತಿ; ದಾಖಲೆ ಪರಿಶೀಲನೆ ಬಗ್ಗೆ ಸುತ್ತೋಲೆ
ಬೆಂಗಳೂರು, ನವೆಂಬರ್ 15; ಕರ್ನಾಟಕದ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿ ಅಭ್ಯರ್ಥಿಗಳ ದಾಖಲೆಗಳ ನೈಜತೆಯ ಪರಿಶೀಲನಾ ಕಾರ್ಯವನ್ನು ತ್ವರಿತಗೊಳಿಸುವ ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಿದೆ. ಈಗಾಗಲೇ ಸ್ಥಳ ನಿಯುಕ್ತಿ ಕೌನ್ಸಲಿಂಗ್ ಪೂರ್ಣಗೊಂಡಿದೆ.
ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. GPTR-2022ರ ನೇಮಕಾತಿಗೆ ಸಂಬಂಧಿಸಿದಂತೆ ಕೌನ್ಸಲಿಂಗ್ನಲ್ಲಿ ಸ್ಥಳ ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ದಾಖಲೆಗಳ ನೈಜತೆಯ ಪರಿಶೀಲನಾ ಕಾರ್ಯವನ್ನು ತ್ವರಿತಗೊಳಿಸುವ ಬಗ್ಗೆ ಎಂಬ ವಿಷಯವನ್ನು ಇದು ಒಳಗೊಂಡಿದೆ.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ (GPTR-2022) ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದ ತೀರ್ಪು ಹಾಗೂ ಸರ್ಕಾರದ ಆದೇಶದಂತೆ 08/03/20230 ಮುಖ್ಯ ಆಯ್ಕೆಪಟ್ಟಿಯಲ್ಲಿನ ಅರ್ಹ ಅಭ್ಯರ್ಥಿಗಳಿಗೆ ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ಅನ್ನು ನಡೆಸಲಾಗಿದೆ ಎಂದು ಹೇಳಿದೆ.
ಆದರೆ ದಾಖಲೆಗಳ ನೈಜತೆ ಪರಿಶೀಲನೆ ಹಾಗೂ ಜಾತಿ, ಆದಾಯ ಪ್ರಮಾಣ ಪತ್ರದ ಸಿಂಧುತ್ವ ಕಾರ್ಯ ಕಾಲಮಿತಿಯಲ್ಲಿ ಪೂರ್ಣಗೊಳ್ಳದ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಗಳನ್ನು ನೀಡದಿರುವುದನ್ನು ಗಮನಿಸಲಾಗಿದೆ ಎಂದು ಸುತ್ತೋಲೆ ತಿಳಿಸಿದೆ.
ಸುತ್ತೋಲೆಯ ವಿವರಗಳು; ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ) ರವರು ಅಭ್ಯರ್ಥಿಗಳ ದಾಖಲೆಗಳ ನೈಜತೆ ಪರಿಶೀಲನೆ ಹಾಗೂ ಜಾತಿ ಆದಾಯ ಪ್ರಮಾಣ ಪತ್ರದ ಸಿಂಧುತ್ವ ಕಾರ್ಯಕ್ಕಾಗಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಕಳುಹಿಸುವಂತೆ ತಿಳಿಸಲಾಗಿತ್ತು. ಅಂತೆಯೇ ಈ ಬಗ್ಗೆ ವಿಡಿಯೋ ಕಾನ್ಸರೆನ್ಸ್ ಹಾಗೂ ದೂರವಾಣಿ, ಇ-ಮೇಲ್ ಮೂಲಕ ಪದೇ ಪದೇ ತಿಳಿಸಿದಾಗ್ಯೂ ಸಹ ದಾಖಲೆಗಳ ನೈಜತೆ ಹಾಗೂ ಜಾತಿ, ಆದಾಯ ಪ್ರಮಾಣ ಪತ್ರದ ಸಿಂಧುತ್ವ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಆಗದಿರುವುದು ಅಂಕಿ ಅಂಶಗಳಿಂದ ಕಂಡುಬಂದಿರುತ್ತದೆ.
ಆಯಾ ಜಿಲ್ಲಾ ನೇಮಕಾತಿ ಪ್ರಾಧಿಕಾರವಾದ ಉಪನಿರ್ದೇಶಕರು (ಆಡಳಿತ) ಅವರು ಈ ಬಗ್ಗೆ ವೈಯಕ್ತಿಕ ಗಮನ ಹರಿಸಿ, ಬಾಕಿ ಇರುವ ದಾಖಲೆಗಳ ನೈಜತೆ ಪರಿಶೀಲನೆ ಹಾಗೂ ಜಾತಿ, ಆದಾಯ ಪ್ರಮಾಣ ಪತ್ರದ ಸಿಂಧುತ್ವ ಕಾರ್ಯದ ಅನುಪಾಲನೆಯ ಜೊತೆಗೆ ತಮ್ಮ ಜಿಲ್ಲೆಯ ವಿವಿಧ ಪ್ರಾಧಿಕಾರಗಳಲ್ಲಿ ಬಾಕಿ ಇರುವ ಇತರೆ ಜಿಲ್ಲೆಗಳ ಪ್ರಮಾಣ ಪತ್ರಗಳ ನೈಜತೆ ಕಾರ್ಯದ ಬಗ್ಗೆಯೂ ಪ್ರತಿನಿತ್ಯ ಅನುಪಾಲನೆ ಮಾಡಿ ಸಂಬಂಧಪಟ್ಟ ಜಿಲ್ಲೆಗಳಿಗೆ ವರದಿ ರವಾನೆ ಆಗುವಂತೆ ನೋಡಿಕೊಳ್ಳುವುದು ಎಂದು ಸುತ್ತೋಲೆ ಹೇಳಿದೆ.
ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು (ಆಡಳಿತ) ರವರು ತಮ್ಮ ಜಿಲ್ಲೆಯಿಂದ ಬೇರೆ ಬೇರೆ ಜಿಲ್ಲೆಗಳಿಗೆ ಸಿಂಧುತ್ವ ಹಾಗೂ ನೈಜತೆ ಪರಿಶೀಲನೆಗಾಗಿ ಕಳುಹಿಸಿರುವ ಹಾಗೂ ಬಾಕಿ ಇರುವ ವಿವರಗಳನ್ನು ಆಯಾ ಜಿಲ್ಲೆಯ ಉಪನಿರ್ದೇಶಕರು(ಆಡಳಿತ) ರವರೊಂದಿಗೆ ಮಾಹಿತಿ ಹಂಚಿಕೊಳ್ಳಲು ತಿಳಿಸಿದೆ.
ಆಯಾ ಜಿಲ್ಲೆಯಲ್ಲಿರುವ ವಿಶ್ವವಿದ್ಯಾಲಯಗಳಿಗೆ ಉಪನಿರ್ದೇಶಕರು(ಆಡಳಿತ)ರವರ ಕಛೇರಿಯಿಂದ ಒಬ್ಬ ಅಧಿಕಾರಿಯನ್ನು ನಿಯೋಜಿಸಿ, ಜಿ.ಪಿ.ಟಿ.ಆರ್-2022ಕ್ಕೆ ಸಂಬಂಧಿಸಿದಂತೆ ರಾಜ್ಯದ ಯಾವುದೇ ಜಿಲ್ಲೆಯ ಅಭ್ಯರ್ಥಿಗಳ ಪದವಿಯ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರದ ನೈಜತೆಯ ಪರಿಶೀಲನೆಯ ಕಾರ್ಯ ಬಾಕಿ ಇದ್ದಲ್ಲಿ ಈ ಬಗ್ಗೆ ಅನುಪಾಲನೆ ಮಾಡಿ ತ್ವರಿತಗೊಳಿಸಲು ಅಗತ್ಯ ಕ್ರಮವಹಿಸುವುದು.
ಈ ಸಂಬಂಧ ಆಯಾ ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಜಂಟಿ ಕಾರ್ಯದರ್ಶಿಗಳು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿರವರು ವೈಯಕ್ತಿಕ ಗಮನಹರಿಸಿ ನೈಜತೆ ಪರಿಶೀಲನೆಗಾಗಿ ತಮಗೆ ಸಲ್ಲಿಕೆಯಾಗಿರುವ ಎಸ್.ಎಸ್.ಎಲ್.ಸಿ ಮತ್ತು ಡಿ.ಇಡಿ ಪ್ರಮಾಣ ಪತ್ರಗಳನ್ನು ಕೂಡಲೇ ಇತ್ಯರ್ಥಪಡಿಸುವುದು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಮ್ಮ ವ್ಯಾಪ್ತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿರುವ ಕನ್ನಡ ಮಾದ್ಯಮ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಗ್ರಾಮೀಣ ಪ್ರಮಾಣ ಪತ್ರಗಳ ನೈಜತೆಯನ್ನು ತಾವೇ ಖುದ್ದಾಗಿ ಪರಿಶೀಲಿಸಿ ವಿಳಂಬಕ್ಕೆ ಅವಕಾಶ ನೀಡದೆ ವರದಿಯನ್ನು ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳುವುದು ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳುವುದು ಹಾಗೂ ಗೊಂದಲಕ್ಕೆ ಯಾವುದೇ ಅವಕಾಶ ನೀಡದೆ ಪಾರದರ್ಶಕತೆಯನ್ನು ಪಾಲಿಸುವುದು. ನೇಮಕಾತಿ ಆದೇಶ ವಿಳಂಬವಾದಲ್ಲಿ ಜೇಷ್ಠತೆಯ ಮೇಲೆ ಯಾವುದೇ ಪ್ರಭಾವ ಉಂಟಾಗುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವುದು.
ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು (ಆಡಳಿತ) ಅವರುಗಳು ಪರಸ್ಪರ ಸಮನ್ವಯ ಸಾಧಿಸಿ, ಒಂದು ವಾರದೊಳಗಾಗಿ ಸಿಂಧುತ್ವ ಹಾಗೂ ನೈಜತೆ ಪರಿಶೀಲನೆ ಕಾರ್ಯವನ್ನು ಸಂಪೂರ್ಣವಾಗಿ ಮುಗಿಸಲು ಕ್ರಮವಹಿಸುವುದು. ದಾಖಲೆಗಳ ನೈಜತೆ ಪರಿಶೀಲನೆ ಹಾಗೂ ಜಾತಿ, ಆದಾಯ ಪ್ರಮಾಣ ಪತ್ರದ ಸಿಂಧುತ್ವ ಕಾರ್ಯ ಪೂರ್ಣಗೊಂಡ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶಗಳನ್ನು ನೀಡುವುದು ಹಾಗೂ ಪ್ರತಿದಿನ ಅದರ ಪ್ರಗತಿಯ ವರದಿಯನ್ನು ಈ ಕಛೇರಿಗೆ ಸಲ್ಲಿಸಲು ಸೂಚಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.












Click it and Unblock the Notifications