ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಹಿಂಪಡೆದ ಸರ್ಕಾರ
ಬೆಂಗಳೂರು, ಫೆ.25 : ತರಾತುರಿಯಲ್ಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿದ್ದ ಸಿದ್ದರಾಮಯ್ಯ ಸರ್ಕಾರ, ಭಾರೀ ವಿರೋಧಕ್ಕೆ ಮಣಿದಿದ್ದು ಕಾಯ್ದೆಗೆ ತಿದ್ದುಪಡಿ ಮಾಡುವ ವಿಚಾರವನ್ನು ಕೈಬಿಡಲು ಮುಂದಾಗಿದೆ. ಸೋಮವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಆದ್ದರಿಂದ ಈ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆ ಮಂಡಿಸದಿರಲು ಸರ್ಕಾರ ನಿರ್ಧರಿಸಿದೆ.
ಸೋಮವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ತಡರಾತ್ರಿವರೆಗೂ ಸಚಿವ ಸಂಪುಟ ಸಭೆ ನಡೆಯಿತು, ಸಭೆಯಲ್ಲಿ ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ತಿದ್ದುಪಡಿ ಮಾಡುವ ನಿರ್ಧಾರವನ್ನು ಕೈಬಿಡಲು ಸರ್ಕಾರ ನಿರ್ಧರಿಸಿದೆ. 4 ದಿನದ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲು ತೀರ್ಮಾನ ಕೈಗೊಳ್ಳಲಾಗಿತ್ತು. [ಲೋಕಾಯುಕ್ತ ಕಾಯ್ದೆಗೆ ಭಾಸ್ಕರ 'ಅನುಗ್ರಹ'ವಿಲ್ಲ]
ಮುಖ್ಯಮಂತ್ರಿ ಸೇರಿದಂತೆ ಸಚಿವರನ್ನು ಲೋಕಾಯುಕ್ತ ವ್ಯಾಪ್ತಿಗೆ ತರುವಂತೆ ಕಾಯ್ದೆಗೆ ತಿದ್ದುಪಡಿ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಲೋಕಾಯುಕ್ತರ ಬದಲಿಗೆ ಸಮಿತಿಯೊಂದನ್ನು ಅಸ್ತಿತ್ವಕ್ಕೆ ತರುವ ಆಲೋಚನೆ ಸರ್ಕಾರದ ಮುಂದಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್, ಈ ಕುರಿತು ರಾಜ್ಯಾಪಾಲರನ್ನು ಭೇಟಿ ಮಾಡಿದ್ದರು. [ಲೋಕಾಯುಕ್ತ ವ್ಯಾಪ್ತಿಗೆ ಮುಖ್ಯಮಂತ್ರಿ]
ಸಾರ್ವಜನಿಕ ವಲಯದಲ್ಲೂ ಸರ್ಕಾರದ ನಿರ್ಧಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದು, ತಿದ್ದುಪರಿ ಕಾಯ್ದೆಯನ್ನು ತರಾತುರಿಯಲ್ಲಿ ಸದನದಲ್ಲಿ ಮಂಡಿಸದೇ, ಕಾನೂನು ಇಲಾಖೆ ಸಲಹೆಪಡೆದು ಮುಂದುವರಿಯಲು ತೀರ್ಮಾನ ಕೈಗೊಳ್ಳಲಾಗಿದೆ. ಸಚಿವ ಸಂಪುಟದ ಇತರ ನಿರ್ಣಯಗಳು
28 ತಾಲೂಕುಗಳು ಬರಪೀಡಿತ ಪಟ್ಟಿಗೆ
ಸರ್ಕಾರ ಈಗಾಗಲೇ 98 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸದಾಗಿ 28 ತಾಲೂಕುಗಳನ್ನು ಈ ಪಟ್ಟಿಗೆ ಸೇರಿಸಲಾಗಿದ್ದು, ಇದಕ್ಕಾಗಿ 1.2 ಕೋಟಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದಲ್ಲಿ 126 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾದಂತಾಗಿದೆ.
ಲೆವಿ ಅಕ್ಕಿ ಸಂಗ್ರಹ ಕಡಿತ
ಸಿದ್ದರಾಮಯ್ಯ ಸರ್ಕಾರದ ಬಹುಜನಪ್ರಿಯ ಅನ್ನಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಅಕ್ಕಿ ಗಿರಣಿಗಳಿಂದ 2.5 ಲಕ್ಷ ಮೆಟ್ರಿಕ್ ಟನ್ ಲೆವಿ ಅಕ್ಕಿ ಸಂಗ್ರಹಿಸಲು ಸರ್ಕಾರ ತೀರ್ಮಾನಿಸಿತ್ತು. ಸದ್ಯ ತನ್ನ ನಿರ್ಧಾರವನ್ನು ಸರ್ಕಾರ ಹಿಂಪಡೆದಿದ್ದು, ಗಿರಣಿಗಳಿಂದ 1.5 ಲಕ್ಷ ಮೆಟ್ರಿಕ್ ಟನ್ ಲೆವಿ ಅಕ್ಕಿಯನ್ನು ಮಾತ್ರ ಸಂಗ್ರಹಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿದೆ.
987 ಬಸ್ ಖರೀದಿಗೆ ಒಪ್ಪಿಗೆ
ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಗೆ ಒಟ್ಟು 987 ಬಸ್ಗಳನ್ನು ಖರೀಸಿದಲು ಸರ್ಕಾರ ಒಪ್ಪಿಗೆ ನೀಡಿದೆ. ಕೆಎಸ್ಆರ್ಟಿಸಿಗೆ ಟಾಟಾ ಕಂಪನಿಯಿಂದ 487 ಬಸ್ ಖರೀದಿಸಲು 184 ಕೋಟಿ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದೆ. ಬಿಎಂಟಿಸಿಗೆ ಅಶೋಕ ಲೈಲೆಂಡ್ ಕಂಪನಿಯಿಂದ 500 ಬಸ್ ಖರೀದಿಸಲು 274 ಕೋಟಿ ಪ್ರಸ್ತಾಪಕ್ಕೂ ಒಪ್ಪಿಗೆ ಪಡೆಯಲಾಗಿದೆ.
ಬೆಸ್ತರನ್ನು ಎಸ್ ಟಿ ಸಮುದಾಯಕ್ಕೆ
ಬೆಸ್ತರನ್ನು ಎಸ್ಟಿ ಸಮುದಾಯಕ್ಕೆ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಹಾಗೆಯೇ ತುಮಕೂರು ಜಿಲ್ಲೆಯ ವಿವಿಧ ನೀರಾವರಿ ಕಾಮಗಾರಿಗಳಿಗೆ ಕೂಡ ಒಪ್ಪಿಗೆ ನೀಡಿಲಾಗಿದೆ.
ಸಿಇಟಿಗೆ ಪ್ರತಿವರ್ಷದ ಪದ್ಧತಿ
ವೃತ್ತಿಶಿಕ್ಷಣ ಕಾಲೇಜುಗಳ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಪ್ರತಿವರ್ಷ ಪದ್ಧತಿಯನ್ನೇ ಪಾಲಿಸುವ ಒಪ್ಪಂದಕ್ಕೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2006ರ ಖಾಸಗಿ ವೃತ್ತಿಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯ್ದೆಯನ್ನು ಅಮಾನತ್ತಿನಲ್ಲಿಡುವ ತೀರ್ಮಾನಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.