ನಾಡಿನಾದ್ಯಂತ ಕಳೆಕಟ್ಟಿದ ರಾಜ್ಯೋತ್ಸವ ವಜ್ರಮಹೋತ್ಸವ ಆಚರಣೆ
ಬೆಂಗಳೂರು, ನವೆಂಬರ್,1: 61ನೇ ಕನ್ನಡ ರಾಜ್ಯೋತ್ಸವದ ವಜ್ರಮೋಹೋತ್ಸವ ಆಚರಣೆ ನಾಡಿನೆಲ್ಲಡೆ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕನ್ನಡಪರ ಸಂಘಟನೆಗಳು, ಕನ್ನಡಾಭಿಮಾನಿಗಳು ಕನ್ನಡ ಬಾವುಟ ಹಾರಿಸಿ ಸಂಭ್ರಮಿಸುತ್ತಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರಾಜ್ಯೋತ್ಸವ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ರಾಜ್ಯವನ್ನುದ್ದೇಶಿಸಿ ಮಾತನಾಡಿದರು.
ರಾಜಧಾನಿ ಬೆಂಗಳೂರು ಸೇರಿದಂತೆ ನಾಡಿನಾದ್ಯಂತ ಕನ್ನಡ ಬಾವುಟ ಹಾರಿಸಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ಟರ್ ನಲ್ಲಿ 61ನೇ ಕನ್ನಡ ರಾಜ್ಯೋತ್ಸವ ವಜ್ರಮಹೋತ್ಸವದ ಶುಭಾಶಯಗಳನ್ನು ಕೋರಿದ್ದು, ಕನ್ನಡ ಭಾಷೆ ಉಳಿವಿಗಾಗಿ ಸರ್ಕಾರ ಕೈಗೊಳ್ಳುವ ಕ್ರಮಗಳ ಕುರಿತು ತಿಳಿಸಿದ್ದಾರೆ.
ಸೋಮವಾರ ಸಂಜೆ ರಾಜ್ಯವನ್ನುದ್ದೇಶಿಸಿ ದೂರದರ್ಶನ 'ಚಂದನ' ವಾಹಿನಿಯಲ್ಲಿ ಅವರು ನೀಡಿರುವ ಹೇಳಿಕೆಗಳನ್ನು ಟ್ವಿಟ್ಟರ್ ನಲ್ಲೂ ಸಹ ಇಂದು ಪ್ರಕಟಿಸಿದ್ದಾರೆ.
ಕನ್ನಡಾಭಿಮಾನಿಗಳ ತ್ಯಾಗ, ಬಲಿದಾನ ಸ್ಮರಣೆ
ಕನ್ನಡಾಭಿಮಾನಿಗಳ ತ್ಯಾಗ, ಬಲಿದಾನಗಳನ್ನು ಸ್ಮರಿಸಿರುವ ಅವರು "ಕ್ನನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ ತ್ಯಾಗ, ಬಿಲಿದಾನಗಳಿಗೆ ಗೌರವಪೂರ್ವಕ ನಮನಗಳು" ಸಲ್ಲಿಸಿದ್ದಾರೆ.
ಕನ್ನಡ ಕಟ್ಟುವ ಕಾಯಕ ನಿರಂತರವಾಗಿರಲಿ
"ಕನ್ನಡ ಪ್ರೇಮ ಕೇವಲ ನವೆಂಬರ್ ತಿಂಗಳಲ್ಲಿ ವಿಜೃಂಭಿಸಿ ಕಳೆದುಹೋಗಬಾರದು, ಕನ್ನಡ ಕಟ್ಟುವ, ಬೆಳೆಸುವ ಕಾಯಕ ನಿರಂತರವಾಗಿ ನಡೆಯಬೇಕು" ಎಂದು ಹೇಳಿದ್ದಾರೆ.
ಕನ್ನಡವೆಂದರೆ ಕೇವಲ ವ್ಯಾಕರಣವಲ್ಲ
"ಕನ್ನಡವೆಂದರೆ ಕೇವಲ ಭಾಷೆ, ವರ್ಣಮಾಲೆಯಲ್ಲ, ಅದು ಕೇವಲ ಶಬ್ದ ವ್ಯಾಕ್ಯಗಳಲ್ಲಿ ಇಲ್ಲ. ಕನ್ನಡವೆಂಬುದು ಸಂಸ್ಕೃತಿ ಇತಿಹಾಸ, ನೆಲ-ಜಲದ ಸಂಪತ್ತು ಎಲ್ಲವನ್ನೂ ಒಳಗೊಂಡ ಅಸ್ಮಿತೆ" ಎಂದು ಹೇಳಿದ್ದಾರೆ.
ಕನ್ನಡ ಶಿಕ್ಷಣಕ್ಕೆ ಹೆಚ್ಚು ಒತ್ತು
ಕನ್ನಡ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವುದಾಗಿ ಹೇಳಿರುವ ಸಿದ್ದರಾಮಯ್ಯ ಅವರು "ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ, ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಲು ಸರ್ಕಾರ ಸಂಕಲ್ಪಿಸಿದೆ" ಎಂದು ಹೇಳಿದ್ದಾರೆ."
ಇತರೆ ರಾಜ್ಯಗಳೊಂದಿಗೆ ಸೇರಿ ಸಂಘಟಿತ ಹೋರಾಟ
ಭಾಷಾ ಮಾಧ್ಯಮ ಕಡ್ಡಾಯ ಕುರಿತು ಸುಪ್ರೀಂಕೋರ್ಟ್ ನೀಡಿರುವ ಸೂಚನೆ ಕುರಿತು ಟ್ವಿಟ್ಟರ್ ನಲ್ಲಿ ಪ್ರಸ್ತಾಪಿಸಿರುವ ಅವರು "ಭಾಷಾ ಮಾಧ್ಯಮ ಕಡ್ಡಾಯ ಮಾಡಬಾರದು ಎಂದು ಸುಪ್ರೀಂ ಹೇಳಿದೆ. ಇದರಿಂದ ರಾಜ್ಯದ ಜನರು ಧೃತಿಗೆಡಬೇಕಾದ ಅವಶ್ಯಕತೆ ಇಲ್ಲ" ಎಂದು ಹೇಳಿದ್ದಾರೆ.
"ಭಾಷಾ ಮಾಧ್ಯಮದ ಕುರಿತು ಸುಪ್ರೀಂ ನೀಡಿರುವ ತೀರ್ಪು ಜಾರಿಯಾದರೆ ಕನ್ನಡವೊಂದೇ ಅಲ್ಲ, ಎಲ್ಲ ಪ್ರಾದೇಶಿಕ ಪಕ್ಷಗಳು ಅಸ್ತಿತ್ವ ಕಳೆದುಕೊಂಡು ಅಪಾಯಕ್ಕೀಡಾಗಲಿವೆ" ಎಂದು ಎಚ್ಚರಿಸಿದ್ದಾರೆ.
"ಭಾಷಾ ಮಾಧ್ಯಮದ ರಕ್ಷಣೆಗೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕು, ಈ ಕುರಿತು ಬೇರೆ ರಾಜ್ಯಗಳ ಜತೆ ಸೇರಿ ಸಂಘಟಿತ ಹೋರಾಟ ನಡೆಸಲು ರಾಜ್ಯ ಸರ್ಕಾರ ಬದ್ಧವಾಗಿದೆ" ಎಂದು ಅವರು ಹೇಳಿದ್ದಾರೆ.
ಇಂಗ್ಲೀಷ್ ಮಾತನಾಡಿದ ಮಾತ್ರಕ್ಕೆ ಬುದ್ದಿವಂತರಲ್ಲ
"ಇಂಗ್ಲೀಷ್ ಮಾತನಾಡುವವರು ಮಾತ್ರ ಬುದ್ಧಿವಂತರು ಎಂಬ ತಪ್ಪು ಅಭಿಪ್ರಾಯ ಸಾಮಾನ್ಯ ಜನರಿಗಿಂತ ಹೆಚ್ಚಾಗಿ ವಿದ್ಯಾವಂತರಲ್ಲೇ ಇದೆ ಇದನ್ನು ಕಳಚಿಕೊಳ್ಳಬೇಕು" ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
ಆಡಳಿತದಲ್ಲಿ ಕನ್ನಡ ಕಡ್ಡಾಯಕ್ಕೆ ಕ್ರಮ
ಆಡಳಿತದಲ್ಲೂ ಕನ್ನಡಕ್ಕೆ ಒತ್ತು ನೀಡುವ ಕುರಿತು ಟ್ವಿಟ್ಟರ್ ನಲ್ಲಿ ತಿಳಿಸಿರುವ ಅವರು " ಆಡಳಿತದಲ್ಲಿ ಕನ್ನಡ ಬಳಕೆಗೆ ಸರ್ಕಾರ ಬದ್ಧವಾಗಿದೆ, ಮಂತ್ರಿ ಮಂಡಲದ ನಿರ್ಣಯಗಳು ಮಂತ್ರಿಗಳ ಟಿಪ್ಪಣಿಗಳು, ವಿಧಾನ ಸಭೆ ಮುಂದೆ ಬರುವ ವಿಧೇಯಕಗಳು ಕನ್ನಡದಲ್ಲೇ ಇರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ" ಎಂದು ಹೇಳಿದ್ದಾರೆ.