ಕೈಗಾರಿಕೆಗಳನ್ನು ಸೆಳೆಯಲು ತೆರಿಗೆ ವಿನಾಯಿತಿ
ಬೆಂಗಳೂರು, ಆ.1 : ರಾಜ್ಯಕ್ಕೆ ಕೈಗಾರಿಕೆಗಳನ್ನು ಸೆಳೆಯುವ ಉದ್ದೇಶದಿಂದ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಉಪ ಸಮಿತಿ ಮೂರು ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡಲು ಗುರುವಾರ ನಡೆದ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ಸೀಮಾಂಧ್ರದತ್ತ ದೃಷ್ಟಿ ನೆಟ್ಟಿರುವ ಕೈಗಾರಿಕೆಗಳನ್ನು ರಾಜ್ಯಕ್ಕೆ ಸೆಳೆಯುವ ಉದ್ದೇಶದಿಂದ ತೆರಿಗೆ ವಿನಾಯಿತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. [ಉತ್ತರ ಕರ್ನಾಟದಲ್ಲಿ ಹೀರೋ ಹೋಂಡಾ ಸವಾರಿ]

ಸಭೆಯಲ್ಲಿ ಪ್ರಮುಖವಾಗಿ ಧಾರವಾಡದಿಂದ ಆಂಧ್ರಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದ ಹೊಂಡಾ ಘಟಕಕ್ಕೆ ಶೇ.70ರಷ್ಟು ವ್ಯಾಟ್ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಹಿಂದುಳಿದ ಪ್ರದೇಶಗಳಲ್ಲಿ ಘಟಕ ಆರಂಭಿಸಲು ಬರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವ್ಯಾಟ್, ಪ್ರವೇಶ ಶುಲ್ಕ, ಮುದ್ರಾಂಕ ಶುಲ್ಕ ವಿನಾಯಿತಿ ಜತೆಗೆಮೂಲ ಸೌಕರ್ಯ ಒದಗಿಸಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಮಂಗಳೂರಿನ ಜೆಬಿಎಫ್ ಪೆಟ್ರೋ ಕೆಮಿಕಲ್ ಸಂಸ್ಥೆ, ಧಾರವಾಡದ ಟಾಟಾ ಘಟಕ, ಗುಲ್ಬರ್ಗದಲ್ಲಿನ ರಾಜಶ್ರೀ ಸಿಮೆಂಟ್ ಸಂಸ್ಥೆಗಳಿಗೆ ವಿಶೇಷ ರಿಯಾಯಿತಿ ನೀಡಲು ಒಪ್ಪಿಗೆ ಪಡೆಯಲಾಗಿದೆ.
ಹೊಂಡಾ ಎಲ್ಲೂ ಹೋಗೋಲ್ಲ : ಕರ್ನಾಟಕ ಸರ್ಕಾರ ಅಗತ್ಯ ಸೌಲಭ್ಯ ಒದಗಿಸದ ಹಿನ್ನಲೆಯಲ್ಲಿ ಧಾರವಾಡದಲ್ಲಿ ಆರಂಭವಾಗಬೇಕಿದ್ದ ಹೊಂಡಾ ಕಂಪನಿ ಸೀಮಾಂಧ್ರಕ್ಕೆ ಹೋಗಲಿದೆ ಎಂದು ವಿಧಾನಸಭೆ ಕಲಾಪದಲ್ಲಿಯೂ ಚರ್ಚೆ ನಡೆದಿತ್ತು. ಈ ವೇಳೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂಡಾ ಘಟಕವನ್ನು ರಾಜ್ಯದಲ್ಲಿ ಉಳಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.












Click it and Unblock the Notifications