ಕೈಗಾರಿಕೆಗೆ ಭೂಮಿ ಹಂಚಿಕೆ ವ್ಯವಸ್ಥೆ ಸರಳೀಕರಣ; ನಿರಾಣಿ
ಬೆಂಗಳೂರು, ಸೆಪ್ಟಂಬರ್ 06: ಕರ್ನಾಟಕ ಕೈಗಾರಿಕಾ ಇಲಾಖೆ ಭೂಮಿ ಹಂಚಿಕೆ ವ್ಯವಸ್ಥೆ ಸರಳೀಕರಣಗೊಳಿಸಲಾಗಿದೆ. ಈಸ್ ಆಫ್ ಡುಯಿಂಗ್ ಬಿಸಿನೆಸ್' ಮಾದರಿಯಲ್ಲಿ 'ಈಸ್ ಆಫ್ ಲ್ಯಾಂಡ್ ಅಲಾಟ್ಮೆಂಟ್' ಪದ್ಧತಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಜಾರಿಗೊಳಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಮುಂಬರುವ ನವೆಂಬರ್ 2, 3 ಮತ್ತು 4ರಂದು ನಡೆಯಲಿರುವ ಮಹತ್ವಾಕಾಂಕ್ಷೆಯ ಜಾಗತಿಕ ಹೂಡಿಕೆದಾರರ ಸಭೆ (ಜಿಐಎಂ) ಸಂಬಂಧ ಪೂರ್ವಭಾವಿಯಾಗಿ ನಗರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಭೂ ಪರಿಶೋಧನಾ ಸಮಿತಿಯಲ್ಲಿ(ಎಲ್ಎಸಿ) 10 ಎಕರೆವರೆಗಿನ ಭೂಮಿ ಹಂಚಿಕೆಗೆ ಪರಿಶೀಲನೆ ಅವಶ್ಯವಿಲ್ಲ ಎಂದು ಹೊಸ ಆದೇಶ ಸ್ಪಷ್ಟಪಡಿಸಿದೆ. ಹೂಡಿಕೆ ಪ್ರಸ್ತಾವನೆಗಳು ಈಗ ನೇರವಾಗಿ ರಾಜ್ಯಮಟ್ಟದ ಸಮಿತಿಯ ಮುಂದೆಯೇ ಮಂಡನೆಯಾಗಲಿವೆ ಎಂದು ಅವರು ಹೇಳಿದರು.
Breaking: ಕರ್ನಾಟಕದಲ್ಲಿ ಮತ್ತೆ ಭಾರೀ ಮಳೆ ಮುನ್ಸೂಚನೆ, ರೆಡ್ ಅಲರ್ಟ್
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಗಳಿಗೆ ಅಗತ್ಯವಿರುವ ಭೂಮಿಯನ್ನು ಸುಲಭವಾಗಿ ನೀಡುವುದೇ ಇದರ ಮುಖ್ಯ ಉದ್ದೇಶ. ಸುಲಲಿತ ವ್ಯವಹಾರದಲ್ಲಿ ದೇಶದಲ್ಲೇ ಮುಂಚೂಣಿ ಸ್ಥಾನದಲ್ಲಿರುವ ರಾಜ್ಯಕ್ಕೆ ಹೆಚ್ಚು ಹೆಚ್ಚು ಉದ್ಯಮಗಳನ್ನು ಆಕರ್ಷಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.
ರಾಜ್ಯಮಟ್ಟದ ಸಮಿತಿ ಮುಂದೆ ನೇರ ಮಂಡನೆ;
10 ಎಕರೆಗಿಂತ ಕಡಿಮೆ ವಿಸ್ತೀರ್ಣದ ಭೂಮಿಗಾಗಿ ಜಮೀನು ಪರಿಶೀಲನಾ ಸಮಿತಿಗೆ ಹೋಗುವ ಬದಲು ನೇರವಾಗಿ ಜಿಲ್ಲಾ ಅಥವಾ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯಲ್ಲಿ ಅನುಮೋದನೆ ನೀಡಲಾಗುತ್ತದೆ. ಇದರಿಂದ ಪ್ರಸ್ತಾವನೆಗಳಿಗೆ ತ್ವರಿತವಾಗಿ ಅನುಮೋದನೆ ದೊರೆಯುತ್ತದೆ. ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ಉದ್ಯಮದಾರರಿಗೆ ಅನುಕೂಲವಾಗುವುದು ಎಂದು ಮುರುಗೇಶ ನಿರಾಣಿ ಹರ್ಷ ವ್ಯಕ್ತಪಡಿಸಿದರು.
ಆದಾಗ್ಯೂ, 10 ಎಕರೆಗಿಂತ ಹೆಚ್ಚಿನ ವಿಸ್ತೀರ್ಣ ಮತ್ತು ರೂ.15 ಕೋಟಿಯಿಂದ ರೂ.500 ಕೋಟಿ ವರೆಗಿನ ಹೂಡಿಕೆಯ ಪ್ರಸ್ತಾವನೆಗಳನ್ನು ಭೂ ಲೆಕ್ಕ ಪರಿಶೋಧನಾ ಸಮಿತಿಯ ಮುಂದೆಮಂಡಿಸಬಹುದು. ಇಲ್ಲಿ ತೆರವುಗೊಳಿಸಿದ ನಂತರ, ಅಂತಿಮ ಅನುಮೋದನೆಗಾಗಿ ರಾಜ್ಯ ಮಟ್ಟದ ಏಕ ಗವಾಕ್ಷಿ ತೆರವು ಸಮಿತಿ ಎದುರು ಪ್ರಸ್ತಾಪಿಸಲಾಗುವುದು.
ಹೊಸ ಆದೇಶ ಏಕೆ?
ನೇರವಾಗಿ ರಾಜ್ಯಮಟ್ಟದ ಸಮಿತಿ ಸಭೆ ಎದುರು ಮಂಡಿಸಲು ಅವಕಾಶ ಉದ್ದೇಶದಿಂದ ಹೊಸ ಆದೇಶ ನೀಡಲಾಗಿದೆ. ಆದೇಶದಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳ ಬೆಳವಣಿಗೆ ಹಿತದೃಷ್ಟಿಯಿಂದ 10 ಎಕರೆವರೆಗೆ ಜಮೀನು ಮಂಜೂರಾತಿ ಕೋರಿ ಸಲ್ಲಿಸುವ ಬಂಡವಾಳ ಹೂಡಿಕೆ ಪ್ರಸ್ತಾವನೆ ಮಂಡನೆ ಆಗುತ್ತವೆ. ಅಲ್ಲದೇ ಭೂಮಿ ಪರಿಶೋಧನಾ ಸಮಿತಿಯ ಮುಂದೆ ಅನುಮೋದನೆಗಾಗಿ ಕಾಯವುದು ತಪ್ಪಲಿದೆ.
ಹತ್ತು ಎಕರೆ ಜಮೀನು ಮಂಜೂರು ಕೋರುವ ಕೈಗಾರಿಕೆಗಳು ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಾಗಿವೆ. ಇವುಗಳನ್ನು ತ್ವರಿತಗತಿಯಲ್ಲಿ ಅನುಮೋದನೆ ನೀಡಬೇಕೆಂಬುದು ರಾಜ್ಯದ ಕೈಗಾರಿಕಾ ಉದ್ದಿಮೆದಾರರ ಸಂಘ ಸಂಸ್ಥೆಗಳ ಬಹುದಿನಗಳ ಬೇಡಿಕೆಯಾಗಿತ್ತು. ಈ ಮೊದಲು ಜಿಲ್ಲಾ ಮಟ್ಟದ ಏಕಗವಾಕ್ಷಿ ಅಥವಾ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳ ಮುಂದೆ ಬಂಡವಾಳ ಹೂಡಿಕೆ ಪ್ರಸ್ತಾವನೆ ಮಂಡಿಸುವ ಮೊದಲು ಜಮೀನು ಪರಿಶೀಲನಾ ಸಮಿತಿ ಮುಂದೆ ಪ್ರಸ್ತಾಪಿಸಬೇಕಿತ್ತು ಎಂದರು.
ರಾಜ್ಯ ಸರ್ಕಾರ ಹೂಡಿಕೆದಾರರ ಅಗತ್ಯಗಳನ್ನು ಅರ್ಥಮಾಡಿಕೊಂಡಿದೆ. ಭೂ ಮಂಜೂರಾತಿ ಪ್ರಕ್ರಿಯೆಯಲ್ಲಿ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮುರುಗೇಶ ನಿರಾಣಿ ಇದೇ ವೇಳೆ ಧನ್ಯವಾದ ತಿಳಿಸಿದರು.