ಕೊರೊನಾ ಸಂಕಷ್ಟ: ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ
ಬೆಂಗಳೂರು, ಮೇ 10: ಹೊರ ದೇಶ ಹಾಗೂ ರಾಜ್ಯಗಳಿಂದ ಬರುವವರಿಗೆ ಹೊಸ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಕ್ವಾರಂಟೈನ್ ಸೇರಿದಂತೆ ಹಲವು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರಿಗೆ ಮಾತ್ರ ಬರುವುದಕ್ಕೆ ಅವಕಾಶ ಎಂದು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ. ಇನ್ಮುಂದೆ ಮೃತದೇಹಗಳನ್ನು ರಾಜ್ಯದಲ್ಲಿ ಸಾಗಿಸಲು ಅವಕಾಶ ಇರುವುದಿಲ್ಲ, ಹೊರ ರಾಜ್ಯಗಳಲ್ಲಿ ಮೃತಪಟ್ಟವರ ದೇಹಗಳನ್ನೂ ರಾಜ್ಯಕ್ಕೆ ತರುವಂತಿಲ್ಲ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಜೊತೆಗೆ ಬೇರೆ ಬೇರೆ ದೇಶ ಹಾಗು ರಾಜ್ಯಗಳಿಂದ ಕನ್ನಡಿಗರು ವಾಪಸ್ ಬರುತ್ತಿದ್ದು ಅವರನ್ನು ಯಾವ ರೀತಿ ಕ್ವಾರಂಟೈನ್ ಮಾಡಬೇಕು ಅನ್ನೋ ಬಗ್ಗೆಯೂ ಸರ್ಕಾರ ಸೂಚಿಸಿದೆ.
ಕೇಂದ್ರ ಸರ್ಕಾರದ ವಂದೇ ಮಾತರಂ ಹಾಗೂ ಬೇರೆ ರಾಜ್ಯಗಳಿಂದ ಬರಲು ಮೂರನೇ ಹಂತದ ಲಾಕ್ಡೌನ್ ಸಂದರ್ಭದಲ್ಲಿ ಅವಕಾಶ ಕೊಡಲಾಗಿದೆ. ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಬರುವವರಿಗೆ, ಅನಿವಾರ್ಯ ಸಂದರ್ಭಗಳಲ್ಲಿ ಮೃತದೇಹಗಳನ್ನು ತರುವವರಿಗೆ ಹಲವು ಷರತ್ತುಗಳನ್ನು ಹಾಕಲಾಗಿದೆ. ಷರತ್ತುಗಳನ್ನು ಪಾಲಿಸಲು ಒಪ್ಪಿಕೊಳ್ಳುವವರಿಗೆ ಮಾತ್ರ ಅನುಮತಿ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಆನ್ಲೈನ್ ನೋಂದಣಿ ಕಡ್ಡಾಯ
ಹೊರ ರಾಜ್ಯದಿಂದ ರಾಜ್ಯಕ್ಕೆ ಬರುವ ಕನ್ನಡಿಗರು ನಿರ್ದಿಷ್ಟ ವ್ಯವಸ್ಥೆಯಡಿ ಬರುವಂತೆ ಮಾಡಬೇಕು. ಹೀಗಾಗಿ ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ಆನ್ಲೈನ್ನಲ್ಲಿ ನೋಂದಣಿ ಮಾಡಿಸಲೇಬೇಕು. ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ರಾಜ್ಯದಿಂದ ಅನಿರ್ವಾಯವಾಗಿ ಹೊರ ಹೋಗಿ ಸಿಕ್ಕಿಹಾಕಿ ಕೊಂಡಿರುವವರಾಗಿರಬೇಕು. ಎಲ್ಲಿಗೆ ಬರುತ್ತೇವೆ ಮತ್ತು ಎಂದು ಬರುತ್ತೇವೆ ಅನ್ನೋದನ್ನ ನೋಂದಣಿಯಲ್ಲಿ ತಿಳಿಸಬೇಕು ಎಂದು ಸೂಚಿಸಲಾಗಿದೆ.

ಕ್ವಾರಂಟೈನ್ ಸೌಲಭ್ಯಕ್ಕೆ ಅನುಗುಣವಾಗಿ ಅವಕಾಶ
ಹೊರ ದೇಶ ಹಾಗೂ ರಾಜ್ಯಗಳಿಂದ ಬರುವವರು ಖಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಪಡಲೇಬೇಕು. ಕ್ವಾರಂಟೈನ್ಗೆ ಒಳಪಡಲು ಸಿದ್ದವಿದ್ದವರು ಮಾತ್ರ ನೋಂದಣಿ ಮಾಡಿಕೊಳ್ಳಬೇಕು. ಬಂದ ತಕ್ಷಣ ಯಾರು ಅವರ ಊರುಗಳಿಗೆ ಹೋಗುವಂತಿಲ್ಲ. ಸರ್ಕಾರ ನಿಗದಿ ಮಾಡಿರುವ ಸ್ಥಳಗಳಲ್ಲಿಯೆ ಕ್ವಾರಂಟೈನ್ಗೆ ಒಳಪಡಬೇಕು. ಜೊತೆಗೆ ರಾಜ್ಯದಲ್ಲಿ ಕ್ವಾರಂಟೈನ್ ಸೌಲಭ್ಯಕ್ಕೆ ಅನುಗುಣವಾಗಿ ಕರೆಸಿಕೊಳ್ಳಲಾಗುವುದು. ಕ್ವಾರಂಟೈನ್ ಮಾಡಲು ಸ್ಥಳಾವಕಾಶ ಇಲ್ಲದಿದ್ದರೆ ಮೊದಲಿಗೆ ಬಂದವರು ಕ್ವಾರಂಟೈನ್ ಮುಗಿಸುವವರಿಗೆ ಹೊಸಬರು ಬರಲು ಅವಕಾಶ ಇರುವುದಿಲ್ಲ.

ಕೋವಿಡ್ ಪರೀಕ್ಷೆ ಕಡ್ಡಾಯ
ಹೊರ ರಾಜ್ಯದಿಂದ ರೈಲುಗಳಲ್ಲಿ ಬರುವವರಿಗೆ ರಾಜ್ಯ ಸರ್ಕಾರವೇ ವೆಚ್ಚ ಭರಿಸುತ್ತದೆ. ಆದರೆ ಮೊದಲೇ ನೋಂದಣಿ ಮಾಡಿಸಿರಬೇಕು. ಜೊತೆಗೆ ಬೇರೆ ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದರೂ, ನಮ್ಮ ರಾಜ್ಯಕ್ಕೆ ಬಂದ ಮೇಲೆ ಖಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಲೇಬೇಕು. ಪರೀಕ್ಷೆ ಮಾಡಿಸಲು ಒಪ್ಪಿದರೆ ಮಾತ್ರ ಅವಕಾಶ ಕೊಡಲಾಗುವುದು. ಪರೀಕ್ಷೆ ಮಾಡಿಸದೇ ಇದ್ದರೆ ರಾಜ್ಯದ ಒಳಗೆ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ.

ಇನ್ಮುಂದೆ ಮೃತ ದೇಹಗಳನ್ನು ರಾಜ್ಯಕ್ಕೆ ತರುವಂತಿಲ್ಲ
ಇನ್ನು ಮುಂದೆ ಬೇರೆ ರಾಜ್ಯದಲ್ಲಿ ಮೃತರಾದರೆ ಶವಗಳನ್ನು ರಾಜ್ಯಕ್ಕೆ ತರುವಂತಿಲ್ಲ. ಎಲ್ಲಿ ಮೃತರಾಗಿರುತ್ತಾರೋ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕು. ರಾಜ್ಯದಲ್ಲಿ ತೀರಿಕೊಂಡರೆ ತೀರಿಕೊಂಡ ಸ್ಥಳದಲ್ಲಿಯೇ ಅಂತ್ಯಕ್ರಿಯೆ ಮಾಡಬೇಕು. ಮೃತದೇಹವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಅವಕಾಶ ಇರವುದಿಲ್ಲ. ಹೀಗಾಗಿ ಯಾವುದೇ ಕಾರಣದಿಂದಲೂ ಮೃತಪಟ್ಟರೂ ಮೃತಪಟ್ಟ ಸ್ಥಳಗಳಲ್ಲಿಯೆ ಖಡ್ಡಾಯವಾಗಿ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಬೇಕು ಎಂದು ರಾಜ್ಯ ಸರ್ಕಾರ ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ಕಟ್ಟುನಿಟ್ಟಿನ ನಿರ್ದೇಶನಗಳನ್ನು ಕೊಟ್ಟಿದೆ.












Click it and Unblock the Notifications