ಕೆಪಿಎಸ್ಸಿಗೆ ಶ್ಯಾಂ ಭಟ್ ನೇಮಕಕ್ಕೆ ತಾತ್ಕಾಲಿಕ ತಡೆ
ಬೆಂಗಳೂರು, ಜೂನ್ 07 : ಬಿಡಿಎ ಆಯುಕ್ತ ಟಿ.ಶ್ಯಾಂ ಭಟ್ ಅವರನ್ನು ಕೆಪಿಎಸ್ಸಿ ಅಧ್ಯಕ್ಷರಾಗಿ ನೇಮಕ ಮಾಡುವುದಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಶ್ಯಾಂ ಭಟ್ ಅವರ ಬಗ್ಗೆ ಯಾವುದಾದರೂ ಆರೋಪಗಳಿವೆಯೇ ಎಂದು ವರದಿ ನೀಡುವಂತೆ ರಾಜ್ಯಪಾಲರು ಲೋಕಾಯುಕ್ತಕ್ಕೆ ಸೂಚನೆ ನೀಡಿದ್ದಾರೆ.
ಕರ್ನಾಟಕ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಧ್ಯಕ್ಷ ಹುದ್ದೆಗೆ ಶ್ಯಾಂ ಭಟ್, ಸದಸ್ಯ ಹುದ್ದೆಗೆ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಲಕ್ಷ್ಮೀ ನರಸಯ್ಯ, ಸಹಾಯಕ ವಾಣಿಜ್ಯ ತೆರಿಗೆ ಆಯುಕ್ತ ಸಯೀದ್ ಅಹಮದ್ ಅವರ ಹೆಸರನ್ನು ಶಿಫಾರಸು ಮಾಡಿ, ರಾಜ್ಯಪಾಲರಿಗೆ ಕಳುಹಿಸಿತ್ತು. [KPSC ಅಧ್ಯಕ್ಷರಾಗಿ ಶ್ಯಾಂ ಭಟ್?]
ಜೂನ್ 6ರ ಸೋಮವಾರ ರಾಜ್ಯಪಾಲ ವಜುಭಾಯಿ ವಾಲಾ ಅವರು, ಲಕ್ಷ್ಮೀ ನರಸಯ್ಯ, ಸಯೀದ್ ಅಹಮದ್ ಅವರನ್ನು ಕೆಪಿಎಸ್ಸಿ ಸದಸ್ಯರಾಗಿ ನೇಮಕ ಮಾಡಲು ಅಂಕಿತ ಹಾಕಿದ್ದಾರೆ. ಆದರೆ, ಅಧ್ಯಕ್ಷ ಹುದ್ದೆಗೆ ಶ್ಯಾಂ ಭಟ್ ಅವರನ್ನು ನೇಮಿಸುವ ಪ್ರಸ್ತಾಪಕ್ಕೆ ತಾತ್ಕಾಲಿಕ ತಡೆ ಸಿಕ್ಕಿದೆ. [KPSCಗೆ ಶ್ಯಾಂ ಭಟ್ ಅರ್ಹ ವ್ಯಕ್ತಿಯಲ್ಲ]
ಲೋಕಾಯುಕ್ತರಿಂದ ವರದಿ ಬಂದ ಬಳಿಕ ಶ್ಯಾಂ ಭಟ್ ಅವರನ್ನು ನೇಮಕ ಮಾಡುವ ಕುರಿತು ರಾಜ್ಯಪಾಲರು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಹಲವಾರು ಸಂಘಟನೆಗಳು ಶ್ಯಾಂ ಭಟ್ ಅವರನ್ನು ಕೆಪಿಎಸ್ಸಿಗೆ ನೇಮಕ ಮಾಡಬಾರದು ಎಂದು ಒತ್ತಾಯವನ್ನು ಮಾಡುತ್ತಿವೆ.
ನೇಮಕಕ್ಕೆ ವಿರೋಧವಿದೆ? : ಮೈಸೂರಿನ ಪ್ರಜ್ಞಾವಂತ ಮತ್ತು ಕಾಳಜಿಯುಳ್ಳ ನಾಗರಿಕರ ವೇದಿಕೆ ಶ್ಯಾಂ ಭಟ್ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದೆ. ಶ್ಯಾಂ ಭಟ್ ಅವರು ಅರ್ಕಾವತಿ ಬಡಾವಣೆ ಟಿನೋಟಿಫಿಕೇಶನ್ ವಿಚಾರದಲ್ಲಿ ರಿಯಲ್ ಎಸ್ಟೆಟ್ ಕಂಪನಿಗಳ ಪರವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪವಿದೆ. ಇಂತಹ ವ್ಯಕ್ತಿಯನ್ನು ಕೆಪಿಎಸ್ಸಿಗೆ ನೇಮಕ ಮಾಡಬಾರದು ಎಂದು ಆಗ್ರಹಿಸಿದೆ. [ಸರ್ಕಾರ, ರಾಜಭವನದ ನಡುವೆ ಕೆಪಿಎಸ್ ಸಿ ಗುದ್ದಾಟ]
ಹೆಸರು ತಿರಸ್ಕಾರವಾಗಿತ್ತು : 2015ರ ಮೇ ತಿಂಗಳಿನಲ್ಲಿ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ವಿ.ಆರ್.ಸುದರ್ಶನ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಆದರೆ, ರಾಜ್ಯಪಾಲರು ಹೆಸರನ್ನು ತಿರಸ್ಕರಿಸಿದ್ದರು. 2016ರ ಮೇ ತಿಂಗಳಿನಲ್ಲಿ ಶ್ಯಾಂ ಭಟ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಈ ವರ್ಷವಾದರೂ ಅಧ್ಯಕ್ಷ ಹುದ್ದೆ ಭರ್ತಿ ಯಾಗುತ್ತದೆಯೇ? ಕಾದು ನೋಡಬೇಕು.