ಹೈ-ಕ ಅಧಿಸೂಚನೆಗೆ ಅಸ್ತು ಎಂದ ರಾಜ್ಯಪಾಲರು
ಮಂಗಳವಾರ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು, ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ, ಸರ್ಕಾರಿ ಉದ್ಯೋಗ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸುವ ಕುರಿತ ನಾಲ್ಕು ಅಧಿಸೂಚನೆಗಳಿಗೆ ಸಹಿ ಹಾಕಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ರಾಜ್ಯಪಾಲರನ್ನು ಭೇಟಿ ಮಾಡಿ ಹೈ-ಕ ಅಭಿವೃದ್ಧಿ ವಿಶೇಷ ಸ್ಥಾನಮಾನದ ಕುರಿತು ಮಾತುಕತೆ ನಡೆಸಿದರು. ಕೆಲವು ದಿನಗಳ ಹಿಂದೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೈ-ಕ ವಿಶೇಷ ಸ್ಥಾನಮಾನ ಅಧಿಸೂಚನೆಗೆ ಅನುಮೋದನೆ ನೀಡಿದ್ದರು. ಈ ಮೂಲಕ ಅಧಿಸೂಚನೆ ಜಾರಿಯಾಗಲು ಅಗತ್ಯವಿದ್ದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ.
ಇದರಿಂದಾಗಿ ಹೈದರಾಬಾದ್-ಕರ್ನಾಟಕ ಭಾಗದ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70 ರಷ್ಟು ಸೀಟು ಮೀಸಲು, ರಾಜ್ಯವ್ಯಾಪಿ ಶಿಕ್ಷಣ ಸಂಸ್ಥೆಗಳಲ್ಲಿ ಹೈ-ಕ ಭಾಗದವರಿಗೆ ಶೇ. 8 ಸೀಟುಗಳನ್ನು ಮೀಸಲಿಡಬೇಕಾಗುತ್ತದೆ.
ಸರ್ಕಾರ ನೇಮಕಾತಿಗಳಿಗೆ (ಉದ್ಯೋಗ) ಸಂಬಂಧಿಸಿದಂತೆ ಹೈ-ಕ ಭಾಗದಲ್ಲಿ ಎ ವರ್ಗದ ಹುದ್ದೆಗಳಲ್ಲಿ ಶೇ.75, ಬಿ ವರ್ಗ-ಶೇ.75, ಸಿ ವರ್ಗ-ಶೇ.80, ಡಿ ವರ್ಗದಲ್ಲಿ ಶೇ.85, ರಾಜ್ಯ ಮಟ್ಟದ ಹುದ್ದೆಗಳಲ್ಲಿ ಶೇ. 8 ಮೀಸಲಾತಿ ಕಲ್ಪಿಸಬೇಕೆಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ವಿಶೇಷ ಸ್ಥಾನಮಾನ ಕಲ್ಪಿಸಲು ಸರ್ಕಾರ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಮಾಡಲಿದ್ದು, ರಾಜ್ಯಪಾಲರು ಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ಹೈದರಾಬಾದ್ ಕರ್ನಾಟಕದ ವ್ಯಾಪ್ತಿಯ ಗುಲ್ಬರ್ಗ, ರಾಯಚೂರು, ಬೀದರ್, ಯಾದಗಿರಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಅಭಿವೃದ್ಧಿಗಾಗಿ ವಿಶೇಷ ಸೌಲಭ್ಯದಡಿ ಸ್ಥಾನಮಾನ ಕಲ್ಪಿಸಲು ಅನುಕೂಲವಾಗಲಿದೆ ಇದರಿಂದ ಅನುಕೂಲವಾಗಲಿದೆ. (ಹೈ-ಕ ಭಾಗದ ಮೀಸಲಾತಿ ಮಾರ್ಗಸೂಚಿ)
ಶಿಕ್ಷಣ ಮತ್ತು ಸರ್ಕಾರಿ ಕೆಲಸಗಳಲ್ಲಿ ಹೈ-ಕ ಜನರಿಗೆ ಪ್ರತ್ಯೇಕ ಮೀಸಲಾತಿ ಸೇರಿದಂತೆ ಆರು ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ಮಂಡಳಿ ಸಹಾಯಕವಾಗಲಿದೆ. ಆರು ಜಿಲ್ಲೆಗಳ ಅಭಿವೃದ್ಧಿಗಾಗಿಯೇ ಕೇಂದ್ರ ಸರ್ಕಾರ ವಿಶೇಷ ಅನುದಾನ ನೀಡಲಿದೆ. ರಾಜ್ಯಪಾಲರ ಅಧ್ಯಕ್ಷತೆಯ ಸಮಿತಿ ಈ ಅನುದಾನ ಬಳಕೆ, ಅಭಿವೃದ್ಧಿ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತದೆ.