ಅಧಿಕಾರಿಗಳೇ ಕನ್ನಡ ಕಲಿಯಿರಿ, ಇಲ್ಲವೇ ಹೊರಡಿ
ಬೆಂಗಳೂರು, ಜೂ. 25 : ಕರ್ನಾಟಕ ಸರ್ಕಾರ ನಡೆಸುವ ಆಡಳಿತ ಕನ್ನಡ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಕೇಂದ್ರ ಸರ್ಕಾರದ ಸಿಬ್ಬಂದಿಯನ್ನು ಕೇಂದ್ರಕ್ಕೆ ವಾಪಸ್ ಕಳುಹಿಸುವ ಕುರಿತು ಪರಿಶೀಲನೆ ನಡೆಸುವುದಾಗಿ ವಿಧಾನಪರಿಷತ್ ಸಭಾನಾಯಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ಮಂಗಳವಾರದ ಕಲಾಪದ ವೇಳೆ ಬಿಜೆಪಿಯ ತಾರಾ ಅನುರಾಧ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಎಸ್.ಆರ್.ಪಾಟೀಲ್, ರಾಜ್ಯದಲ್ಲಿ ಈಗಾಗಲೇ 'ಆಡಳಿತ ಕನ್ನಡ' ಪರೀಕ್ಷೆಯಲ್ಲಿ ತೇರ್ಗಡೆಯಾಗದ ಐಎಎಸ್, ಐಪಿಎಸ್, ಐಎಫ್ಎಸ್ ಮತ್ತು ಕೇಂದ್ರ ಸರ್ಕಾರ ಸಿಬ್ಬಂದಿಗೆ ಹಿಂಬಡ್ತಿ ನೀಡುವುದು, ಭತ್ಯೆ ಕಡಿತಗೊಳಿಸುವುದು, ವಾಗ್ಧಂಡನೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಚಂದ್ರು ಅವರು, ನಾಡು ನುಡಿ ಅಧ್ಯಯನ ಕುರಿತು ಮಾಡಿರುವ ಶಿಫಾರಸಿನಲ್ಲಿ 'ಮುಂಬೈ ಮಾದರಿ' ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರ ಸರ್ಕಾರ ಆಡಳಿತದಲ್ಲಿ ಮರಾಠಿ ಭಾಷೆ ಕಡ್ಡಾಯಗೊಳಿಸಿದ್ದು, ಮರಾಠಿ ಪರೀಕ್ಷೆ ಅನುತ್ತೀರ್ಣಗೊಳ್ಳುವ ಕೇಂದ್ರದ ಅಧಿಕಾರಿಗಳನ್ನು ವಾಪಸ್ ಕಳುಹಿಸಲಾಗುತ್ತದೆ ಎಂದರು. [ಮಂಗಳವಾರದ ಕಲಾಪದ ಮುಖ್ಯಾಂಶಗಳು]
ಕರ್ನಾಟಕದಲ್ಲಿಯೂ ಇದೇ ಮಾದರಿಯನ್ನು ಅನುಷ್ಟಾನಕ್ಕೆ ತರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಸರ್ಕಾರ ನಡೆಸುವ 'ಆಡಳಿತ ಕನ್ನಡ' ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಐಎಎಸ್, ಐಪಿಎಸ್, ಐಎಫ್ಎಸ್ ಮತ್ತು ಕೇಂದ್ರ ಸರ್ಕಾರದ ಸಿಬ್ಬಂದಿಯನ್ನು ಕೇಂದ್ರಕ್ಕೆ ವಾಪಸ್ ಕಳುಹಿಸುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಸದನಕ್ಕೆ ಭರವಸೆ ನೀಡಿದರು.
ತಾರಾ ಪ್ರಸ್ತಾಪಿಸಿದ ವಿಷಯವೇನು : ಬಿಜೆಪಿ ಸದಸ್ಯೆ ತಾರಾ ಅವರು, ಮಹಾರಾಷ್ಟ್ರದಲ್ಲಿ ಎಲ್ಲಾ ವರ್ಗದ ಅಧಿಕಾರಿಗಳಿಗೂ ಮರಾಠಿಯನ್ನು ಕಡ್ಡಾಯವಾಗಿ ಕಲಿಯುವಂತೆ ಮಾಡಲಾಗುತ್ತಿದೆ. ಅದಕ್ಕಾಗಿ ತರಬೇತಿಯನ್ನೂ ನೀಡಲಾಗುತ್ತದೆ. ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗೆ 2 ವರ್ಷಗಳ ವರೆಗೆ ಮರಾಠಿ ತರಬೇತಿ ನೀಡಿ, ಪರೀಕ್ಷೆ ನಡೆಸಲಾಗುತ್ತದೆ ಎಂದು ಪರಿಷತ್ತಿನಲ್ಲಿ ಹೇಳಿದರು.
ತರಬೇತಿಯ ನಂತರ ಅಧಿಕಾರಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಅನುತ್ತೀರ್ಣರಾದ ಅಧಿಕಾರಿಗಳನ್ನು ತವರು ರಾಜ್ಯಗಳಿಗೆ ವಾಪಸ್ ಕಳುಹಿಸಲಾಗುತ್ತದೆ. ಅದೇರೀತಿ ಕರ್ನಾಟಕದಲ್ಲಿಯೂ ಮಾಡಬಹುದು. ಹೀಗೆ ಮಾಡಿದರೆ ಕನ್ನಡ ಉಳಿಯುತ್ತದೆ. ಇಲ್ಲವಾದರೆ ಕನ್ನಡ ಕಡ್ಡಾಯ ಬರೀ ಘೋಷಣೆಯಲ್ಲಿ ಮಾತ್ರ ಇರುತ್ತದೆ ಎಂದು ಪರಿಷತ್ತಿನ ಗಮನಸೆಳೆದರು.












Click it and Unblock the Notifications