ಕಾಂಗ್ರೆಸ್ ಸರ್ಕಾರ; ಅಗತ್ಯ ಹುದ್ದೆಗಳ ಇಂದಿನ ದರ ಪಟ್ಟಿ ಕೊಟ್ಟ ಬಿಜೆಪಿ
ಬೆಂಗಳೂರು, ಜುಲೈ 06; ಕರ್ನಾಟಕದಲ್ಲಿ ತರಕಾರಿ, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿದೆ. ಟೊಮೆಟೋ ದರ 120ರ ಗಡಿ ದಾಟಿ ಹೋಗಿದೆ. ಪ್ರತಿಪಕ್ಷ ಬಿಜೆಪಿಯ ಪ್ರಕಾರ ಅಗತ್ಯ ಹುದ್ದೆಗಳ ದರಗಳು ಸಹ ಏರಿಕೆಯಾಗಿದ್ದು, ವರ್ಗಾವಣೆಯು ಜೋರಾಗಿದೆ.
ಗುರುವಾರ ಕರ್ನಾಟಕ ಬಿಜೆಪಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಧಿಕಾರಿಗಳ ವರ್ಗಾವಣೆ ವಿರುದ್ಧ ಟ್ವೀಟ್ ಮಾಡಿದೆ. ಇದಕ್ಕೆ ಮಾರುಕಟ್ಟೆಯ ಹಣ್ಣು ಮತ್ತು ತರಕಾರಿಗಳ ದರಗಳನ್ನು ಬಳಕೆ ಮಾಡುವ ಮೂಲಕ ಗಮನ ಸೆಳೆದಿದೆ.

ಎಲ್ಲಾ ವರ್ಗಾವಣೆಗಳಿಗೂ ಷರತ್ತುಗಳು ಅನ್ವಯ. ಷರತ್ತು 'ಕೇಂದ್ರದ ಸುರ್ಜೇವಾಲಾ ಕಮಿಷನ್ ಪ್ರತ್ಯೇಕ. ಪ್ರಕಟಣೆ : #ATMsarkaraದ ಪರವಾಗಿ #ShadowCM ಯತೀಂದ್ರ ಎಂದು ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಎಳೆದು ತಂದಿದೆ.
ಬಿಜೆಪಿಯ ಟ್ವೀಟ್; ಕರ್ನಾಟಕ ಬಿಜೆಪಿ ತನ್ನ ಟ್ವೀಟ್ನಲ್ಲಿ 'ರಾಜ್ಯದಲ್ಲಿ ಅಗತ್ಯ ವಸ್ತುಗಳು ಹಾಗೂ ಅಗತ್ಯ ಹುದ್ದೆಗಳ ಇಂದಿನ ದರ' ಎಂದು ಹೇಳಿದೆ.
ತರಕಾರಿ:
ಟೊಮೆಟೊ - ₹120-130
ಬೀನ್ಸ್ - ₹120
ಕ್ಯಾರೆಟ್ - ₹110
ಹಸಿಮೆಣಸಿನಕಾಯಿ - ₹170
ವರ್ಗಾವಣೆ ತರಹೇವಾರಿ
ಮುಖ್ಯ ಎಂಜಿನಿಯರ್: ₹5 ಕೋಟಿ
ಜಿಲ್ಲಾ ಆರೋಗ್ಯಾಧಿಕಾರಿ: ₹2 ಕೋಟಿ
ಲೆಕ್ಕಾಧಿಕಾರಿ: ₹ 2.25 ಕೋಟಿ
ತಹಶೀಲ್ದಾರ್: ₹1.25 ಕೋಟಿ
ಪೊಲೀಸ್ ಸಬ್ ಇನ್ಸ್ಪೆಕ್ಟರ್
ಬೆಂಗಳೂರು ನಗರ - ₹1.5 ಕೋಟಿ
ಜಿಲ್ಲಾ ಕೇಂದ್ರ - ₹80 ಲಕ್ಷ
ತಾಲ್ಲೂಕು ಕೇಂದ್ರ: ₹40 ಲಕ್ಷ
ಹೀಗೆ ವಿವಿಧ ಅಧಿಕಾರಿಗಳ ವರ್ಗಾವಣೆಗೆ ಬೇರೆ-ಬೇರೆ ದರವನ್ನು ನಿಗದಿ ಮಾಡಿರುವ ಸರ್ಕಾರ ವರ್ಗಾವಣೆ ದಂಧೆ ನಡೆಸುತ್ತಿದೆ ಎಂದು ಕರ್ನಾಟಕ ಬಿಜೆಪಿ ಟ್ವೀಟ್ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದೆ.
ಯತೀಂದ್ರ ಸಿದ್ದರಾಮಯ್ಯ ಟಾರ್ಗೆಟ್; ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡುತ್ತಿದೆ. ಬುಧವಾರ ಟ್ವೀಟ್ ಮಾಡಿದ್ದ ಬಿಜೆಪಿ, 'ರಾಜ್ಯದ #ATMSarkara ದಲ್ಲಿ ವರುಣಾದ ನಿರುದ್ಯೋಗಿ #ShadowCM ಯತೀಂದ್ರ ಸಿದ್ದರಾಮಯ್ಯರ ಹಸ್ತಕ್ಷೇಪ ಮಿತಿ ಮೀರಿದೆ' ಎಂದು ಆರೋಪ ಮಾಡಿತ್ತು.
'ಒಂದೇ ಹುದ್ದೆಗೆ ಹಲವು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಶಿಫಾರಸ್ಸು ಪತ್ರ ನೀಡುವುದು, ಕಾರ್ಯವಾದ ಬಳಿಕ ವ್ಯವಹಾರ ಕುದುರದಿದ್ದಲ್ಲಿ, ಆದೇಶವನ್ನು ಹಿಂಪಡೆಯುವುದು! ಹೀಗೆ ಹಲವಾರು ಅಕ್ರಮಗಳನ್ನು ಮುಖ್ಯಮಂತ್ರಿ ಕಚೇರಿ ಮೂಲಕ ರಾಜಾರೋಷವಾಗಿ ನಡೆಸುತ್ತಾ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ' ಎಂದು ದೂರಿತ್ತು.
'ಇಷ್ಟು ಸಾಲದ್ದಕ್ಕೆ, ತನಗೊಂದು ಸಾಂವಿಧಾನಿಕ ಹುದ್ದೆ ಕಬಳಿಸಿಕೊಂಡು, ತನ್ನ ಅಕ್ರಮ ದಂಧೆಗಳಿಗೆ ಸಕ್ರಮದ ಲೇಬಲ್ ಅಂಟಿಸುವ ಬಗ್ಗೆ ಗಾಢವಾಗಿ ಸ್ಕೆಚ್ ಹಾಕಿದ್ದಾರೆ!' ಎಂದು ಪ್ರತಿಪಕ್ಷ ಗಂಭೀರ ಆರೋಪ ಮಾಡಿತ್ತು.
ಮತ್ತೊಂದು ಟ್ವೀಟ್ನಲ್ಲಿ, 'ನಾಮಕಾವಸ್ಥೆ ಸಿಎಂ ಸಿದ್ದರಾಮಯ್ಯರ ಪುತ್ರ ಯತೀಂದ್ರರನ್ನ #ShadowCM ಮಾಡಿ, ಅಧಿಕಾರವನ್ನು ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರಿಗೆ ಕೊಟ್ಟಿದ್ದಾರೆ. ಪರಿಣಾಮ, ರಾಜ್ಯದಲ್ಲಿ ಸಚಿವರು, ಶಾಸಕರ ಸಂಬಂಧಿಕರ ದರ್ಬಾರ್ ಜೋರಾಗಿದೆ' ಎಂದು ಬಿಜೆಪಿ ಹೇಳಿತ್ತು.
'ಮಂಡ್ಯ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ವರ್ಗಾವಣೆ ದಂಧೆಯಲ್ಲಿ ಯಶಸ್ವಿಯಾಗಿ ಅಣ್ಣನ ಮಗನನ್ನ DHO ಆಗಿ ನೇಮಕ ಮಾಡಿದ್ದಾರೆ. ಇದರಲ್ಲಿ ಯತೀಂದ್ರರ ಪಾಲೆಷ್ಟು, ಸುರ್ಜೆವಾಲಾರ ಪಾಲೆಷ್ಟು ಕಾಂಗ್ರೆಸ್?' ಎಂದು ಪ್ರಶ್ನೆ ಮಾಡಿದೆ.
ಮತ್ತೊಂದು ಟ್ವೀಟ್ ಮಾಡಿ, 'ಗ್ಯಾರಂಟಿಯೆಂಬ ಮೋಸದಿಂದ ಅಧಿಕಾರ ಹಿಡಿದ #ATMSarkara ಎಲ್ಲರಿಗೂ ಫ್ರೀ ಎಂದು ಎಲ್ಲರನ್ನೂ ತಂದು ಬೀದಿಯಲ್ಲಿ ನಿಲ್ಲಿಸಿದೆ. ಜನರಿಗೆ ಅಕ್ಕಿಯೂ ಇಲ್ಲ, ಅಕ್ಕಿ ವಿತರಿಸುವ ನ್ಯಾಯ ಬೆಲೆ ಅಂಗಡಿಯ ವಿತರಕರಿಗೆ ನ್ಯಾಯವಿಲ್ಲ ಎಂಬ ಶೋಚನೀಯ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿರುವುದು ದುರಂತ' ಎಂದು ದೂರಿತ್ತು.












Click it and Unblock the Notifications