ಕೊರೊನಾ ಪ್ರಕರಣವಿಲ್ಲದ ಜಿಲ್ಲೆಗಳಲ್ಲೂ ತಪಾಸಣೆಗೆ ಸರ್ಕಾರದ ಸೂಚನೆ
ಬೆಂಗಳೂರು,, ಏಪ್ರಿಲ್ 18: ಕೊರೊನಾ ಪ್ರಕರಣಗಳು ಇಲ್ಲದ ಜಿಲ್ಲೆಗಳಲ್ಲೂ ತಪಾಸಣೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಇದುವರೆಗೂ ಕೊರೊನಾ ಸೋಂಕು ಪತ್ತೆಯಾಗದ ಹತ್ತು ಜಿಲ್ಲೆಗಳಲ್ಲಿ ನಾಳೆಯವರೆಗೂ ಪ್ರತಿದಿನ ಒಂದು ನೂರು ರೋಗಿಗಳ ಮಾದರಿಗಳನ್ನು ಅಧಿಕೃತ ಕೊವಿಡ್-19ರ ತಪಾಸಣಾ ಪ್ರಯೋಗಾಲಯಗಳಿಗೆ ಕಳುಹಿಸಿಕೊಡುವಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂಬಂಧ ಸೋಂಕು ಪತ್ತೆಯಾಗದ ರಾಮನಗರ, ಕೋಲಾರ, ಹಾಸನ, ಶಿವಮೊಗ್ಗ, ಚಾಮರಾಜನಗರ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಪತ್ರ ಬರೆದಿದ್ದಾರೆ.
ಕೆಲವು ತಜ್ಞರು ಕೊರೋನಾ ಲಕ್ಷಣಗಳು ಗೋಚರಿಸದಿದ್ದರೂ ಸೋಂಕು ಇರುವ ಸಾಧ್ಯತೆ ಇರುತ್ತದೆ ಎಂದು ಅಭಿಪ್ರಾಯ ಪಟ್ಟಿದೆ. ಈ ಹಿನ್ನೆಲೆಯಲ್ಲಿ, ತೀವ್ರ ಜ್ವರ, ಉಸಿರಾಟದ ತೊಂದರೆಯಂತಹ ಅನಾರೋಗ್ಯ ಲಕ್ಷಣವಿರುವ (ಎಸ್ ಎಆರ್ ಐ) ರೋಗಿಗಳ ಮಾದರಿಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲು ಪತ್ರದಲ್ಲಿ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮುಖ್ಯಕಾರ್ಯದರ್ಶಿಗಳ ಪತ್ರ ಸೋಂಕು ಪತ್ತೆಯಾಗದೇ ಇರುವುದಕ್ಕೆ ಹಾಸನ, ಶಿವಮೊಗ್ಗ, ಚಾಮರಾಜನಗರ, ಹಾವೇರಿ, ಕೋಲಾರ, ಚಿಕ್ಕಮಗಳೂರು, ಯಾದಗಿರಿ, ರಾಯಚೂರು, ರಾಮನಗರ ಹಾಗೂ ಕೊಪ್ಪಳ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ಪತ್ರ ಬರೆದಿದ್ದಾರೆ. ತಮ್ಮ ಜಿಲ್ಲೆಗಳಲ್ಲಿ ಈವರೆಗೂ ಯಾವುದೇ ಕೋವಿಡ್ 19 ಪ್ರಕರಣ ಪತ್ತೆಯಾಗದೇ ಇರುವುದು ಸಮಾಧಾನಕರ ಸಂಗತಿಯಾಗಿದೆ.
ಎರಡನೇ ಹಂತದ ಲಾಕ್ಡೌನ್ ಜಾರಿಗೆ ಬಂದರೂ ರಾಜ್ಯದ 10 ಜಿಲ್ಲೆಗಳಲ್ಲಿ ಈವರೆಗೆ ಕೊರೊನಾ ಸೋಂಕು ದೃಢಪಟ್ಟಿಲ್ಲ. ಹೀಗಾಗಿ ಆ ಹತ್ತೂ ಜಿಲ್ಲೆಗಳನ್ನು ಹಸಿರು ವಲಯದ ಪಟ್ಟಿಗೆ ಸೇರಿಸಲಾಗಿತ್ತು.