ರೈತರೇ ಗಮನಿಸಿ; ಶುಂಠಿ ಬೆಳೆಯುವವರಿಗೆ ಖಡಕ್ ಎಚ್ಚರಿಕೆ
ಮಡಿಕೇರಿ, ಜನವರಿ 11: ಅರಣ್ಯ ಪ್ರದೇಶಗಳನ್ನು ನಾಶಪಡಿಸಿ ಶುಂಠಿಯನ್ನು ಬೆಳೆಲಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಕುರಿತು ಪ್ರಕರಣಗಳು ಸಹ ದಾಖಲಾಗಿವೆ. ಆದ್ದರಿಂದ ಶುಂಠಿ ಬೆಳೆಯುವ ರೈತರಿಗೆ ಖಡಕ್ ಎಚ್ಚರಿಕೆಯನ್ನು ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಶುಂಠಿ ಬೆಳೆಗಾಗಿ ಅರಣ್ಯ ಇಲಾಖೆಯ ಪೂರ್ವಾ ಅನುಮತಿ ಪಡೆಯದೆ ಮರಗಳನ್ನು ಕಡಿಯುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಕೃತ್ಯ ಎಸಗುತ್ತಿರುವವರ ಮೇಲೆ ಅರಣ್ಯ ಇಲಾಖೆ ಮೊಕದ್ದಮೆ ದಾಖಲಾಗುತ್ತಿರುತ್ತದೆ.

ಯಾವುದೇ ಉದ್ದೇಶಕ್ಕಾದರೂ ಸರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖಾ ಅನುಮತಿ ಕಡ್ಡಾಯವಾಗಿರುತ್ತದೆ. ಕಾನೂನಾತ್ಮಕವಾಗಿ ಅನುಮತಿ ಪಡೆಯದೇ ಮರಗಳನ್ನು ತೆರವುಗೊಳಿಸಿದ್ದಲ್ಲಿ ಕರ್ನಾಟಕ ಅರಣ್ಯ ಕಾಯಿದೆ 1963 ಹಾಗೂ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆ 1957 ರ ಉಲ್ಲಂಘನೆ ಆಗುತ್ತದೆ ಎಂದು ತಿಳಿಸಲಾಗಿದೆ.
ಜಾಗದ ಮಾಲೀಕರು ಮತ್ತು ಜಾಗವನ್ನು ಗುತ್ತಿಗೆ ಪಡೆದವರು ಹಾಗೂ ಕೃತ್ಯವನ್ನು ಎಸಗಿದವರ ಮೇಲೆ ಅರಣ್ಯ ಇಲಾಖೆ ಮೊಕದ್ದಮೆ ದಾಖಲು ಮಾಡುತ್ತದೆ ಹಾಗೂ ಆರೋಪಿತರು ನ್ಯಾಯಾಂಗ ಬಂಧನಕ್ಕೆ ಒಳಪಡಬೇಕಾಗಿರುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಕೃತ್ಯಕ್ಕೆ ಬಳಸಿದ ವಾಹನ ಮತ್ತು ಯಂತ್ರೋಪಕರಣಗಳನ್ನು ಇಲಾಖಾ ಪರವಾಗಿ ವಪಡಿಸಿಕೊಳ್ಳಲಾಗುತ್ತದೆ ಮತ್ತು ಆರೋಪಿತರು ಮರಗಳ ಮೌಲ್ಯ ಹಾಗೂ ಪರಿಸರ ನಾಶಮಾಡಿದ್ದಕ್ಕೆ ದಂಡ ತೆರಬೇಕಾಗಿರುತ್ತದೆ. ತಪ್ಪಿದ್ದಲ್ಲಿ ಆರೋಪಿತರ ಮೇಲೆ ದೋಷರೋಪಣಾ ಪಟ್ಟಿಯನ್ನು ತಯಾರಿಸಿ ಘನ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.
ಆದ್ದರಿಂದ ಸಾರ್ವಜನಿಕರು ಯಾವುದೇ ಉದ್ದೇಶಕ್ಕೆ ಮರ ತೆರವುಗೊಳಿಸಲು ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯಲು ತಿಳಿಸಿದೆ. ಪರಿಸರ ಸಂರಕ್ಷಣೆ ಮಾಡುವಲ್ಲಿ ಇಲಾಖೆಯೊಂದಿಗೆ ಕೈಜೋಡಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕರೆ ನೀಡಿದ್ದಾರೆ.
ಕೊಡಗಿನಲ್ಲಿ ಶುಂಠಿ ಬೆಳೆ ಹೆಚ್ಚಳ; ಕೊಡಗು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶುಂಠಿ ಬೆಳೆಯುವವರ ಸಂಖ್ಯೆ ಏರಿಕೆಯಾಗುತ್ತಿದೆ. ಕಾಡನ್ನು ಕಡಿದು ಅಲ್ಲಿ ಶುಂಠಿ ಬೆಳೆಯುತ್ತಾರೆ. ಆದ್ದರಿಂದ ಶುಂಠಿ ಬೆಳೆಗಾಗಿ ಅರಣ್ಯ ನಾಶ ಮಾಡುವ ರೈತರಿಗೆ ಅರಣ್ಯ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಭತ್ತದ ಗದ್ದೆ, ಕಾಫಿ ತೋಟಗಳಲ್ಲಿ ಶುಂಠಿ ಬೆಳೆಯಲಾಗುತ್ತಿತ್ತು. ಇತ್ತೀಚೆಗೆ ಅರಣ್ಯ ಕಡಿದು ಅಲ್ಲಿ ಶುಂಠಿ ಬೆಳೆಯುವುದು ಹಲವು ಜಿಲ್ಲೆಗಳಲ್ಲಿ ಹೊಸ ಬೆಳವಣಿಗೆಯಾಗಿದೆ. ಅರಣ್ಯ ಕಡಿಯುವುದರಿಂದ ಉಂಟಾಗುವ ಪರಿಣಾಮಗಳ ಹಿನ್ನಲೆಯಲ್ಲಿ ಈ ಕುರಿತು ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕೈಗೊಂಡಿದೆ.
ಶುಂಠಿ ಬೇಸಾಯದಲ್ಲಿ ರಾಸಾಯನಿಕಗಳನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಇದರಿಂದಾಗಿ ಮಣ್ಣು, ಜೀವ ವೈವಿದ್ಯತೆಗೆ ಧಕ್ಕೆ ಆಗುತ್ತದೆ. ಅಲ್ಲದೇ ಅರಣ್ಯ ಕಡಿದು ಶುಂಠಿ ಬೆಳೆದು, ಬಳಿಕ ಆ ಪ್ರದೇಶವನ್ನು ಅಕ್ರಮವಾಗಿ ಜಮೀನು ಆಗಿ ಪರಿವರ್ತಿಸುವ ಪ್ರಕರಣಗಳು ಸಹ ವರದಿಯಾಗಿವೆ.
ಒಮ್ಮೆ ಶುಂಠಿ ಬೆಳೆದ ಜಾಗದಲ್ಲಿ ಮುಂದಿನ 5 ವರ್ಷಗಳ ಕಾಲ ಯಾವುದೇ ಬೆಳೆ ಬೆಳೆದರೂ ಸಹ ಉಪಯೋಗವಾಗುವುದಿಲ್ಲ ಎಂದು ರೈತರೇ ಹೇಳುತ್ತಾರೆ. ಅಷ್ಟರ ಮಟ್ಟಿಗೆ ಶುಂಠಿ ಬೆಳೆ ಮಣ್ಣಿಗೆ ಹಾನಿ ಮಾಡುತ್ತದೆ. ಆದ್ದರಿಂದ ಶುಂಠಿ ಬೆಳೆಯುವ ಕ್ಷೇತ್ರ ವಿಸ್ತರಣೆಗಾಗಿ ಪ್ರತಿ ವರ್ಷ ಹೊಸ ಹೊಸ ಜಾಗವನ್ನು ಹುಡುಕಲಾಗುತ್ತದೆ. ಇದಕ್ಕಾಗಿ ಅರಣ್ಯ ನಾಶ ಮಾಡಲಾಗುತ್ತದೆ.
ಕೊಡಗು, ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಶುಂಠಿ ಬೇಸಾಯ ಹೆಚ್ಚಾಗುತ್ತಿದೆ. ಕೇರಳ ರಾಜ್ಯದಿಂದ ಬಂದವರು ಜಮೀನು ಗುತ್ತಿಗೆ ಪಡೆದು ಅಲ್ಲಿ ಶುಂಠಿ ಬೆಳೆಯುತ್ತಾರೆ. ಮಲೆನಾಡು ಭಾಗದಲ್ಲಿಯೂ ಭತ್ತದ ಬೇಸಾಯದಿಂದ ರೈತರು ವಿಮುಖರಾಗಿ ಶುಂಠಿಯತ್ತ ವಾಲುತ್ತಿದ್ದಾರೆ.












Click it and Unblock the Notifications