ಪೊರಕೆ ಹಿಡಿದು ಮೈದಾನ ಸ್ವಚ್ಛಗೊಳಿಸಿದ ಕೊಪ್ಪಳ ಗವಿಮಠದ ಶ್ರೀಗಳು
ಜಾತ್ರೆ ಹಿನ್ನೆಲೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಅಸ್ವಚ್ಛವಾಗಿದ್ದ ಜಾತ್ರೆ ಮೈದಾನ ಸ್ವಚ್ಛಗೊಳಿಸಿದ ಗವಿಸಿದ್ದೇಶ್ವರ ಶ್ರೀ.
ಕೊಪ್ಪಳ, ಜನವರಿ 20: ಸ್ವಚ್ಛತೆಗೆ ಆದ್ಯತೆ ನೀಡುವ ಇಲ್ಲಿನ ಗವಿ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಶುಕ್ರವಾರ ತಾವೇ ಖುದ್ದಾಗಿ ಪೊರಕೆ ಹಿಡಿದು ಜಾತ್ರೆ ಮೈದಾನವನ್ನು ಸ್ವಚ್ಛಗೊಳಿಸಿದ್ದಾರೆ.
ಬುಧವಾರವೇ ಈ ಸ್ವಚ್ಛತೆಯ ಅಭಿಯಾನ ನಡೆಸಿದ ಸ್ವಾಮೀಜಿಯ ಫೋಟೋಗಳನ್ನು ಭಕ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಶುಕ್ರವಾರದ ಹೊತ್ತಿಗೆ ಅವು ವೈರಲ್ ಆಗಿವೆ.
ಮಠದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಜಾತ್ರೆಯು ಕಳೆಗಟ್ಟಲಿದೆ. ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ಜಾತ್ರೆಯ ಹಿನ್ನೆಲೆಯಲ್ಲಿ ಜಾತ್ರೆ ಮೈದಾನದಲ್ಲಿ ಹಲವಾರು ಸಾಂಸ್ಕೃತಿಕ ಉತ್ಸವಗಳು ಜರುಗುತ್ತಿವೆ. ಜಾತ್ರೆ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಅಂಗಡಿಗಳಿಗೂ ಸ್ಥಳಾವಕಾಶ ಕಲ್ಪಿಸಲಾಗಿತ್ತು. ಆದರೆ, ಶುಕ್ರವಾರ ಬೆಳಗ್ಗೆ ವೇಳೆಗೆ ಇಡೀ ಮೈದಾನ ಕೊಳಕಿನಿಂದ ತುಂಬಿ ಹೋಗಿತ್ತು.
ಇದನ್ನು ಗಮನಿಸಿದ ಸ್ವಾಮೀಜಿ ತಾವೇ ಮೈದಾನಕ್ಕಿಳಿದು ಸ್ವಚ್ಛಗೊಳಿಸಲು ಮುಂದಾದರು. ಹಲವಾರು ಭಕ್ತರು ತಕ್ಷಣವೇ ಆಗಮಿಸಿ ಸ್ವಾಮಿಜಿಯ ಕೆಲಸವನ್ನು ತಾವು ವಹಿಸಿಕೊಳ್ಳಲು ಮುಂದಾದರೂ ವಿನಮ್ರವಾಗಿ ಅವರ ಮನವಿಗಳನ್ನು ತಿರಸ್ಕರಿಸಿದ ಸ್ವಾಮೀಜಿ, ತಾವೇ ಖುದ್ದಾಗಿ ಕಸು ಗುಡಿಸಿ ಹತ್ತಿರದಲ್ಲಿದ್ದ ಕಸದ ಟ್ರ್ಯಾಕ್ಟರ್ ಗೆ ತುಂಬಲು ಆರಂಭಿಸಿದರು.
ಇದರಿಂದಾಗಿ ನಾಚಿದ ಅಂಗಡಿಗಾರರು ತಾವೂ ಸ್ವಾಮೀಜಿಗೆ ಕೈ ಜೋಡಿಸಿದರು. ತರಾತುರಿಯಿಂದ ಗಲ್ಲಾ ಪೆಟ್ಟಿಗೆ ಬಿಟ್ಟಿಳಿದು ಬಂದು, ತಾವೂ ಕೈಜೋಡಿಸಿದರು. ಜಾತ್ರೆಗೆ ಬಂದಿದ್ದ ಭಕ್ತಾದಿಗಳೂ ಕಸ ಎತ್ತಿದರು. ಸ್ವಾಮೀಜಿಯ ಜೊತೆಗೆ ಬಂದಿದ್ದ ಒಬ್ಬಿಬ್ಬರು ಗಣ್ಯರು, ಸ್ವಾಮೀಜಿಯೇ ಪೊರಕೆ ಹಿಡಿದಿದ್ದು ಕಂಡು ತಾವೂ ಕಸ ಎತ್ತಲು ಶುರು ಮಾಡಿದರು.
ಕೆಲವೇ ನಿಮಿಷಗಳಲ್ಲಿ ಬೃಹತ್ ಜಾತ್ರೆ ಮೈದಾನದ ಪ್ರತಿಯೊಂದು ಮೂಲೆಯೂ ಸ್ವಚ್ಛವಾಯಿತು. ಆಡದೇ ಮಾಡುವವನು ರೂಢಿಯೊಳಗುತ್ತಮನು ಎಂಬುದನ್ನು ಶ್ರೀಗಳು ಸಾಧಿಸಿ ತೋರಿಸಿದರು.
(ಚಿತ್ರ ಕೃಪೆ: ಪ್ರಕಾಶ ಕಂದಕೂರ)