ಗೌರಿ ಹತ್ಯೆ : ಗಾಂಭೀರ್ಯ ಕಳೆದುಕೊಂಡ ರಾಹುಲ್ ವ್ಯಾಖ್ಯಾನ
ಬೆಂಗಳೂರು, ಸೆಪ್ಟೆಂಬರ್ 07 : "ಯಾರೇ ಆಗಲಿ ಬಿಜೆಪಿಯ ಅಥವಾ ಆರೆಸ್ಸೆಸ್ಸಿನ ಸಿದ್ಧಾಂತಕ್ಕೆ ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸಿದರೆ, ಅಂಥವರನ್ನು ಹಲ್ಲೆ ಮಾಡಲಾಗುತ್ತದೆ, ಅಂಥವರನ್ನು ಕೊಲ್ಲಲಾಗುತ್ತಿದೆ ಕೂಡ" ಎಂದು ಗೌರಿ ಲಂಕೇಶ್ ಹತ್ಯೆಯ ನಂತರ ರಾಹುಲ್ ಗಾಂಧಿ ಹೇಳಿದ್ದು ಗಾಳಿಯಲ್ಲಿ ಗುಂಡು ಹಾರಿಸಿದಂತಾಗಿದೆ.
ಅವರು ಹಾಗೆ ಹೇಳಿದ ನಂತರ, ಅವರ ಹೇಳಿಕೆ ತೀವ್ರ ಟೀಕೆಗೊಳಗಾಗಿತ್ತು, ಕೆಲವರು ಅಪಹಾಸ್ಯ ಕೂಡ ಮಾಡಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿಯವರು, ಅನಗತ್ಯವಾಗಿ ನರೇಂದ್ರ ಮೋದಿಯವರನ್ನು ಎಳೆತಂದಿದ್ದಕ್ಕೆ ರಾಹುಲ್ ಗಾಂಧಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಆದರೆ, ಇದೀಗ ನಡೆಯುತ್ತಿರುವ ಬೆಳವಣಿಗೆಗಳನ್ನೇ ತೆಗೆದುಕೊಂಡರೆ, ರಾಹುಲ್ ಗಾಂಧಿಯವರ ವ್ಯಾಖ್ಯಾನ ಉಲ್ಟಾಪುಲ್ಟಾ ಆಗುತ್ತಿದೆ ಮತ್ತು ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾರದಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಗೌರಿ ಲಂಕೇಶ್ ಕುಟುಂಬದವರೇ ಎಳೆಎಳೆಯಾಗಿ ಕಳೆದ ಕೆಲದಿನಗಳಿಂದ ಏನೇನು ನಡೆದಿತ್ತು, ಗೌರಿಯವರಿಗೆ ಯಾರ್ಯಾರಿಂದ ಬೆದರಿಕೆ ಕರೆಗಳು, ಪತ್ರಗಳು ಬರುತ್ತಿದ್ದವು, ಯಾರ್ಯಾರು ಅವರನ್ನು ಹಿಂಬಾಲಿಸುತ್ತಿದ್ದು ಇತ್ಯಾದಿ ವಿವರಗಳನ್ನು ಮಾಧ್ಯಮದವರ ಮುಂದೆ ಹೇಳುತ್ತಿದ್ದಾರೆ.
ಇನ್ನೂ ತನಿಖೆಯೇ ಆರಂಭವಾಗದಿದ್ದ ಸಂದರ್ಭದಲ್ಲಿ ಆವೇಶಕ್ಕೊಳಗಾಗಿದ್ದ ರಾಹುಲ್ ಗಾಂಧಿಯವರು, ಇದು ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಕೈವಾಡವೇ ಎಂಬಂತೆ ಮಾತನಾಡಿದ್ದು ಟೀಕೆಗೆ ಮತ್ತು ನಗೆಪಾಟಲಿಗೆ ಈಡಾಗಿತ್ತು. ತನಿಖೆ ನಡೆದ ನಂತರ ಈ ಕೊಲೆಯ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಮುತ್ಸದ್ದಿಯಂತೆಯೂ ಮಾತಾಡಿರಲಿಲ್ಲ.
ತಮ್ಮ ಪಕ್ಷದ ಉಪಾಧ್ಯಕ್ಷ ಆಡಿರುವ ಮಾತನ್ನು ಇಂಧನ ಸಚಿವ ಡಿಕೆ ಶಿವಕುಮಾರ್ ಅವರೇ ಬೆಂಬಲಿಸಲು ಹೋಗಿಲ್ಲ. ಮಾಧ್ಯಮವೊಂದರ ಜೊತೆ ಮಾತನಾಡುತ್ತ, ನಮ್ಮ ನಾಯಕರು ಏನು ಹೇಳಿದ್ದರೋ ಏನೋ. ನಾನು ಯಾವುದೋ ಕೆಲಸದಲ್ಲಿ ತೊಡಗಿಕೊಂಡಿದ್ದೆ. ನಮ್ಮ ಅಧಿಕಾರಿಗಳು ಈ ಪ್ರಕರಣವನ್ನು ಭೇದಿಸಲಿದ್ದಾರೆ, ತಮ್ಮ ಸಾಮರ್ಥ್ಯವನ್ನು ತೋರಿಸಲಿದ್ದಾರೆ ಎಂದು ಮುಗುಮ್ಮಾಗಿ ಹೇಳಿದ್ದಾರೆ.
ಇದರ ಹಿಂದೆಯೇ, ಗುರುವಾರ ಪತ್ರಿಕಾಗೋಷ್ಠಿ ನಡೆಸಿರುವ ಇಂದ್ರಜಿತ್ ಲಂಕೇಶ್ ಮತ್ತು ಅವರ ಅಕ್ಕ ಕವಿತಾ ಲಂಕೇಶ್ ಅವರು, ತಮಗೆ ರಾಜ್ಯ ಸರಕಾರ ನಡೆಸುತ್ತಿರುವ ತನಿಖೆಯ ಮೇಲೆ ನಂಬಿಕೆಯಿಲ್ಲ. ಎಸ್ಐಟಿ ನಡೆಸುತ್ತಿರುವ ತನಿಖೆ ವಿಫಲವಾದರೆ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಈ ಗೋಷ್ಠಿಯಲ್ಲಿ ಇಂದ್ರಜಿತ್ ಲಂಕೇಶ್ ಅವರು ಗೌರಿಯವರಿಗೆ ನಕ್ಸಲೀಯರಿಂದ ಜೀವ ಬೆದರಿಕೆ ಇತ್ತೆಂದು ಹೇಳಿರುವುದು ಪ್ರಕರಣಕ್ಕೆ ತಿರುವು ಬಂದಂತಾಗಿದೆ.












Click it and Unblock the Notifications