ಕರ್ನಾಟಕದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್: ಸಿಎಂ ಬೊಮ್ಮಾಯಿ
ಶಿವಮೊಗ್ಗ, ನವೆಂಬರ್ 15: ಸಿದ್ದರಾಮಯ್ಯ ಅವರಿಗೆ 5 ವರ್ಷ ರಾಜ್ಯದ ಜನತೆ ಮುಖ್ಯಮಂತ್ರಿಯಾಗಿ ಅವಕಾಶ ಕೊಟ್ಟಾಗಲೂ ನೀವು ಏನೂ ಮಾಡಿಲ್ಲ ಈಗ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದೀರಿ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಸೊರಬದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಜನ ಸಂಕಲ್ಪ ಯಾತ್ರೆಯನ್ನ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಾನು ಮುಖ್ಯಮಂತ್ರಿ ಆಗಬೇಕು ಅಂದ್ರೆ ಕಾಂಗ್ರೆಸ್ಗೆ ಓಟ್ ಹಾಕಿ ಅಂತಾರೆ. ಆದರೆ ಡಿಕೆ ಶಿವಕುಮಾರ್ ಅವರಿಂದ ಮುಂದಿನ ಮುಖ್ಯಮಂತ್ರಿ ನೀವೇ ಎಂದು ಹೇಳಿಸಿ. ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದೀರಿ. 5 ವರ್ಷ ಜನತೆ ಮುಖ್ಯಮಂತ್ರಿಯಾಗಿ ಅವಕಾಶ ಕೊಟ್ಟಾಗಲೂ ನೀವು ಏನೂ ಮಾಡಿಲ್ಲ. 5 ವರ್ಷದಲ್ಲಿ ರಾಜ್ಯವನ್ನು ಅಧೋಗತಿಗೆ ತಂದು ಜಾತಿಜಾತಿಗಳ ಮಧ್ಯೆ ವಿಷ ಬೀಜವನ್ನು ಬಿತ್ತಿ ಧರ್ಮ ಒಡೆಯುವ ಕೆಲಸ ಮಾಡಿದಿರಿ. ಹಿಂದುಳಿದ ವರ್ಗವನ್ನೇ ಚೂರು ಚೂರು ಮಾಡಿದಿರಿ. ಕರ್ನಾಟಕದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಕೆಲಸಗಳಿಗೆ ಟೀಕೆ ಮಾಡುವುದೇ ಕಾಂಗ್ರೆಸ್ ಕೆಲಸವಾಗಿದೆ. ಸಿದ್ದರಾಮಯ್ಯ ಅವರ 5 ವರ್ಷದ ಆಡಳಿತದಲ್ಲಿ ರಾಜ್ಯವನ್ನು ಅಧೋಗತಿಗೆ ತಂದಿದ್ದಕ್ಕೆ ಮತದಾರ ನಿಮ್ಮನ್ನು ಮೂಲೆಯಲ್ಲಿ ಕೂರಿಸಿದ. ಈಗ ನಾವು ಮಾಡುವ ಕೆಲಸಗಳಿಗೆಲ್ಲಾ ಟೀಕೆ ಮಾಡುವುದೇ ನಿಮ್ಮ ಕೆಲಸವಾಗಿದೆ ಎಂದರು.

ಸುಮಾರು 8 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ಕೊಟ್ಟು ವಿವೇಕ ಎಂದು ಹೆಸರಿಟ್ಟರೆ ಅದಕ್ಕೂ ಟೀಕೆ ಮಾಡುತ್ತಾರೆ. ಈ ಮೂಲಕ ಸ್ವಾಮಿ ವಿವೇಕಾನಂದರಿಗೆ ಅವಮಾನ ಮಾಡಿದ್ದಾರೆ. ಇಂತಹವರ ಕೈಲಿ ಮತ್ತೆ ಅಧಿಕಾರ ಕೊಟ್ಟರೆ ಪ್ರಗತಿಪರವಾಗಿರುವ ರಾಜ್ಯ ಮತ್ತೆ ಅಧೋಗತಿಗೆ ಹೋಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬರಲಿದೆ
ಬಿ.ಎಸ್ ಯಡಿಯೂರಪ್ಪ ಅವರು ರಾಜ್ಯಕ್ಕೆ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಭರವಸೆಯ ಬೆಳಕನ್ನು ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಕೊಡುತ್ತಿದ್ದೇವೆ. ಶಿವಮೊಗ್ಗ ಜಿಲ್ಲೆಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬರಲಿದೆ. ಜೋಗ ಜಲಪಾತವನ್ನು ಅಂತರಾಷ್ಟ್ರೀಯ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ. ಈ ಮೂಲಕ ಯುವಕರಿಗೆ ಕೆಲಸ ಸಿಗುತ್ತದೆ. ಆರ್ಥಿಕ ಅಭಿವೃದ್ಧಿ ಆಗುತ್ತದೆ ಎಂದರು.
ರಾಣಿಬೆನ್ನೂರು ವರೆಗೆ ರೈಲನ್ನು ತೆಗೆದುಕೊಂಡು ಹೋಗಲು ಈಗಾಗಲೇ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿದೆ. ನಾವು ಅಧಿಕಾರದ ರಾಜಕಾರಣ ಮಾಡದೇ ಜನಪರ ರಾಜಕಾರಣ ಮಾಡುತ್ತಿದ್ದೇವೆ. ಸೊರಬ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಯಡಿಯೂರಪ್ಪ ಅವರ ಚಿಂತನೆಗೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಈ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರುಗಳಾದ ಆಗರ ಜ್ಞಾನೇಂದ್ರ, ನಾರಾಯಣ ಗೌಡ, ಬೈರತಿ ಬಸವರಾಜು, ಸಂಸದ ಬಿ ವೈ ರಾಘವೇಂದ್ರ, ಶಾಸಕ ಕುಮಾರ್ ಬಂಗಾರಪ್ಪ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.












Click it and Unblock the Notifications