ಸಾರ್ವಜನಿಕ ಗಣೇಶೋತ್ಸವದಲ್ಲಿ ಬೀದಿ ಪಾಲಾದ ಗಣೇಶ
ಜಯ ಗಣೇಶ..ಜಯ ಗಣೇಶ..ಜಯ ಗಣೇಶ ರಕ್ಷಿಸು ಎಂದು ಆಸ್ತಿಕರು ಪೂಜಿಸಿದರೆ, ಕೆಲವು ನಾಸ್ತಿಕರು ಗಣೇಶ ಮೂಲತಃ ಕ್ರೂರಿ, ಅನಾರ್ಯ ಮತ್ತು ಕಾಡಿನಲ್ಲಿ ವಾಸವಾಗಿದ್ದ ಎಂದೂ ಜರಿದವರುಂಟು.
ಇದು ಗಣೇಶನನ್ನು ನಂಬಿ ಪೂಜಿಸುವ ಆಸ್ತಿಕರ ಕಥೆ, ವರ್ಷ ವರ್ಷ ಈ ರೀತಿಯ ಸುದ್ದಿಗಳು ನಡೆಯುತ್ತಲೇ ಇರುತ್ತದೆ. ಮುಖ್ಯವಾಗಿ ಇಂಥ ಘಟನೆಗಳು ನಡೆಯುವುದು ಸಾರ್ವಜನಿಕ ಗಣೇಶೋತ್ಸವದ ಸಮಯದಲ್ಲಿ.
ವಿದ್ಯುತ್ ದೀಪಗಳಿಂದ ಭವ್ಯವಾದ ಮೆರವಣೆಗೆಯಲ್ಲಿ ಸಾಗುವ ಗಣೇಶ ಕೊನೆಗೆ ಅನಾಥವಾಗಿ ವಿಸರ್ಜನೆಯಾಗದೇ ಬೀದಿ ಪಾಲಾಗಿ ಬಿಡುತ್ತಿರುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ.
ಅಂದು ಗಣೇಶೋತ್ಸವ ಹುಟ್ಟು ಹಾಕಿದ ಬಾಲಗಂಗಾಧರ ತಿಲಕ್ ಅವರ ಉದ್ದೇಶಕ್ಕೂ ಮತ್ತು ಇಂದಿನ ಸಾರ್ವಜನಿಕ ಗಣೇಶೋತ್ಸವಕ್ಕೂ ಅಜಗಜಾಂತರ ವ್ಯತ್ಯಾಸ.
ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಸಮುದಾಯ ತಲೆ ತಗ್ಗಿಸುವ ಈ ರೀತಿಯ ಘಟನೆಗಳು ನಡೆಯತ್ತಿರುವುದಕ್ಕೆ ಕೊಡಬಹುದಾದ ಪ್ರಮುಖ ಕಾರಣವೆಂದರೆ ಇಂದಿನ ಹೆಚ್ಚಿನ ಯುವ ಸಮುದಾಯದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಭಾವ, ಭಕ್ತಿ, ಪರವಶೆಯ ಟಚ್ ಇಲ್ಲದೇ, ಮೋಜಿಗಾಗಿ, ಕುಡಿದು, ಕುಣಿದು ಕುಪ್ಪಳಿಸಲು, ಚಂದಾ ವಸೂಲು ಮಾಡುವ ವಾರ್ಷಿಕ ಕಾರ್ಯಕ್ರಮಗಳಾಗಿರುವುದು ಎನ್ನುವುದು ದುರಂತ.
ಇಂಥವರಿಗೆ ಲೇಟ್ ಆದರೂ ಲೇಟೆಸ್ಟ್ ಆಗಿ ಗಣೇಶ ಬುದ್ದಿ ಕೊಡಲಿ ಎಂದು ವಿಘ್ನ ನಿವಾರಕನನ್ನು ಪ್ರಾರ್ಥಿಸುತ್ತಾ, ಈ ಬಾರಿಯ ಸಾರ್ವಜನಿಕ ಗಣೇತ್ಸೋವದಲ್ಲಿ ಸಮುದಾಯ ತಲೆತಗ್ಗಿಸುವ ಮತ್ತು ಗಮನಿಸಬೇಕಾದ ಕೆಲವೊಂದು ಘಟನೆಗಳು ಸ್ಲೈಡಿನಲ್ಲಿ...
ಕೊಪ್ಪಳ
ನಗರದ ದೇವರಾಜ ಕಾಲೋನಿಯಲ್ಲಿ ರಾತ್ರಿ ಹನ್ನೊಂದು ಗಂಟೆಗೆ ಮುಗಿಯ ಬೇಕಾದ ವಿಸರ್ಜನಾ ಮೆರವಣಿಗೆ ಬೆಳಗಿನ ಜಾವ ನಾಲ್ಕು ಗಂಟೆಯಾದರೂ ಮುಗಿಯಲಿಲ್ಲ. ಬೇಗನೆ ವಿಸರ್ಜನೆ ಮಾಡುವಂತೆ ಪೊಲೀಸರ ಆದೇಶಕ್ಕೆ ಯುವಕರು ಕ್ಯಾರೇ ಎಂದಿಲ್ಲ. ಆಗ ಲಘು ಲಾಠಿ ಪ್ರಹಾರ ನಡೆದಿದ್ದರಿಂದ ಯುವಕರು ಗಣೇಶನ ಮೂರ್ತಿಯನ್ನು ಅಲ್ಲೇ ಬಿಟ್ಟು ಪರಾರಿಯಾದರು. ನಂತರ ಪೊಲೀಸರೇ ಮುಂದೆ ನಿಂತು ವಿಸರ್ಜನೆ ಮಾಡ ಬೇಕಾಯಿತು.
ಹಲಸೂರು
ಗಣೇಶ ಹಬ್ಬದ ಮೂರನೇ ದಿನ ಹಲಸೂರು ಕೆರೆಯಲ್ಲಿ ವಿಪರೀತ ಜನಜಂಗುಳಿ. ಭಾರೀ ಸದ್ದಿನೊಂದಿಗೆ ವಿಸರ್ಜನೆಗೆ ಬಂದ ತಂಡವನ್ನು ಸರದಿಯಲ್ಲಿ ಬರುವಂತೆ ಅಧಿಕಾರಿಗಳು ಸೂಚಿಸಿದರು. ಸ್ವಲ್ಪ ಹೊತ್ತು ಕಾದ ಯುವಕರ ತಂಡ ಗಣೇಶನ ವಿಗ್ರಹವನ್ನು ಅಲ್ಲೇ ಬಿಟ್ಟು ಹೋದರು. ತಡರಾತ್ರಿ ಎಷ್ಟು ಹೊತ್ತಾದರೂ ಮೂರ್ತಿ ವಿಸರ್ಜನೆ ಆಗದ್ದನ್ನು ಕಂಡ ಬಿಬಿಎಂಪಿ ಅಧಿಕಾರಿಗಳು ಬೇರೆ ದಾರಿ ಇಲ್ಲದೇ ತಾವೇ ವಿಸರ್ಜನೆ ಮಾಡಿದರು.
ಹಾರೋಹಳ್ಳಿ
ಹಾರೋಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಎರಡು ಯುವಕರ ಸಂಘದ ನಡುವಣ ಕಿತ್ತಾಟ ನಡೆದಿದೆ. ತಮ್ಮನ್ನು ಕಡೆಗಣಿಸಲಾಗಿದೆ ಎಂದು ಸ್ಥಳೀಯನೊಬ್ಬ ಊರವರ ಮುಂದೆಯೇ ಟ್ರ್ಯಾಕ್ಟರ್ ಮೇಲೆ ಇದ್ದ ಗಣೇಶನ ಮೂರ್ತಿಯನ್ನು ಕೆಳಗೆ ತಳ್ಳಿ ಭಗ್ನಗೊಳಿಸಿ ಪರಾರಿಯಾಗಿದ್ದಾನೆ. ಇವನನ್ನು ಬಂಧಿಸಲು ಒತ್ತಾಯಿಸಿ ಗ್ರಾಮಸ್ಥರು ಅಹೋರಾತ್ರಿ ಧರಣಿ ನಡೆಸಿದರು. ಈ ಘಟನೆ ನಡೆದಿದ್ದು ಕನಕಪುರ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ.
ಕನಕಪುರ
ಗಣೇಶ ವಿಸರ್ಜನೆಯ ವೇಳೆ ವಿದ್ಯುತ್ ತಂತಿ ತಗುಲಿ ಯುವಕ ಸಾವನ್ನಪ್ಪಿದ್ದಾನೆ. ಸ್ನೇಹಿತನ ಸಾವಿನಿಂದ ವಿಚಲಿತರಾದ ಯುವಕರು ಏನು ಮಾಡಬೇಕೆಂದು ತೋಚದೇ ಗಣೇಶನ ವಿಗ್ರಹವನ್ನು ಅಲ್ಲೇ ಇಟ್ಟು ಕೂತಿದ್ದರು. ತದನಂತರ ಗ್ರಾಮದ ಹಿರಿಯರ ಮುಂದಾಳುತ್ವದಲ್ಲಿ ಗಣೇಶನ ವಿಸರ್ಜನೆ ನಡೆಯಿತು.
ಬ್ಯಾಡಗಿ
ಬನ್ನಿಕಟ್ಟೆ ಗ್ರಾಮದಲ್ಲಿ ಸ್ಥಾಪಿಸಲಾಗಿದ್ದ ಗಣೇಶನ ವಿಗ್ರಹವನ್ನು ವೈಭವದಿಂದ ಸ್ಥಾಪಿಸಿ ಪೂಜಿಸಲಾಗುತ್ತಿತ್ತು. ಗಣೇಶನ ಹಬ್ಬದ ಎರಡನೇ ದಿನ ಗಣೇಶನ ಮೂರ್ತಿಯನ್ನೇ ಲಪಟಾಯಿಸಲಾಯಿತು. ಸಂತಾನ ಭಾಗ್ಯಕ್ಕಾಗಿ ಗಣೇಶನ ವಿಗ್ರಹವನ್ನು ಕದ್ದಿದ್ದಾರೆ ಎನ್ನುವುದು ಗ್ರಾಮಸ್ಥರ ದೂರು.
ಮಂಡ್ಯ
ಇಲ್ಲಿನ ಇಂದಿರಾ ಕಾಲೋನಿಯಲ್ಲೂ ನಾಲ್ಕು ಅಡಿ ಎತ್ತರದ ಗಣೇಶನ ಮತ್ತು ಗೌರಿಯ ಮೂರ್ತಿಯನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ.