ಗಣೇಶ ಹಬ್ಬಕ್ಕೆ ಟಿಕೆಟ್ ದರ ಹೆಚ್ಚಳ: ಸಚಿವರ ಎಚ್ಚರಿಕೆಗೆ ಕ್ಯಾರೆ ಎನ್ನದ ಖಾಸಗಿ ಬಸ್ ಮಾಲೀಕರು
ಬೆಂಗಳೂರು ಆಗಸ್ಟ್ 29: ಹಬ್ಬಗಳನ್ನೇ ಬಂಡವಾಳ ಮಾಡಿಕೊಳ್ಳುವ ಖಾಸಗಿ ಸಾರಿಗೆ ಬಸ್ ಮಾಲೀಕರು, ಸಂಸ್ಥೆಗಳು ರಾಜ್ಯ ಸರ್ಕಾರದ ಎಚ್ಚರಿಕೆ ನಡುವೆಯು ಸುಮಾರು ಶೇ.50ರಷ್ಟು ಟಿಕೇಟ್ ದರ ಹೆಚ್ಚಿಸಿವೆ. ಈ ದರ ಹಬ್ಬದ ಹಿಂದಿನ ದಿನ ಇನ್ನಷ್ಟು ಹೆಚ್ಚಾಗುವ ಆತಂಕ ಇದೆ.
ಹಬ್ಬಗಳ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಮಾಡುವವರು ತಮ್ಮ ಊರುಗಳಿಗೆ ತೆರಳುತ್ತಾರೆ. ಇದರಿಂದ ಬಸ್, ರೈಲು ನಿಲ್ದಾಣಗಳಲ್ಲಿ ಜನ ಜಾತ್ರೆಯೇ ಕಂಡು ಬರುತ್ತದೆ. ಈ ವೇಳೆ ವಾರಗಳ ಮೊದಲೇ ಟಿಕೆಟ್ ಬುಕ್ ಮಾಡಿರುವವ ಸಂಖ್ಯೆ ತೀರಾ ಕಡಿಮೆ. ಇದನ್ನೆ ಬಂಡವಾಳ ಮಾಡಿಕೊಳ್ಳುವ ಖಾಸಗಿ ಸಾರಿಗೆ ಸಂಸ್ಥೆಗಳು ಟಿಕೆಟ್ ದರಗಳನ್ನು ಮನ ಬಂದಂತೆ ಹೆಚ್ಚಿಸಿವೆ.
ಬೆಂಗಳೂರಿನಿಂದ ಬೆಳಗಾವಿಗೆ ಸೋಮವಾರದ ನಾನ್ ಎಸಿ ಸ್ಲೀಪರ್ ಟಿಕೆಟ್ ದರ ಸುಗಮ ಟೂರಿಸ್ಟ್ 1,000ರೂ, ಎಸ್ಆರ್ಎಸ್ ಟ್ರಾವೆಲ್ಸ್ 1,399 ರೂ ನಿಗದಿಪಡಿಸಿವೆ. ಇನ್ನೂ ವಿಆರ್ಎಲ್ ಟ್ರಾವೆಲ್ಸ್ 1,400ರೂ. ನಿಗದಿಪಡಿಸಿವೆ. ಇದೇ ಕೆಎಸ್ಆರ್ಟಿಸಿ 831ರೂ. ನಿಗದಿಪಡಿಸಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಕ್ಕೆ ತೆರಳುವ ಸರ್ಕಾರಿ ಬಸ್ ಟಿಕೆಟ್ ದರಕ್ಕಿಂತ ಅದೇ ಸ್ಥಳಗಳಿಗೆ ಖಾಸಗಿ ಬಸ್ಗಳ ಟಿಕೆಟ್ ದರ ದುಬಾರಿಯಾಗಿದೆ. ಸಾಮಾನ್ಯ ಬಸ್ಗಳ ದರಕ್ಕಿಂತಲೂ ಹಾಗೂ ಸುಮಾರು 350ರೂ. ನಿಂದ 5,00ರೂ.ವರೆಗೆ ಹೆಚ್ಚಿಸಲಾಗಿದೆ.
ಹಬ್ಬಕ್ಕೆ ಊರಿನ ಪ್ರಯಾಣ ದುಬಾರಿ
ಅದೇ ರೀತಿ ಬೆಂಗಳೂರಿನಿಂದ ಹಾವೇರಿಗೆ ನಾನ್ ಎಸಿ ಸ್ಲೀಪರ್ಗೆ ರೂಬಿ ಟೂರ್ಸ್ ಆಂಡ್ ಟ್ರಾವೆಲ್ಸ 9,00ರೂ, ಸುಗಮ ಟ್ರಾವೆಲ್ಸ 1,000 ರೂ. ಮತ್ತು ವಿಆರ್ಎಲ್ ಟ್ರಾವೆಲ್ಸ 1,200 ರೂ. ನಿಗದಿ ಮಾಡಲಾಗಿದೆ. ಇದೇ ಊರಿಗೆ ಸಾಮಾನ್ಯ ದಿನಗಳಲ್ಲಿ ನಾನ್ ಎಸಿ ಸ್ಲೀಪರ್ ಸುಮಾರು 500ರೂ.ನಿಂದ 600ರೂ.ವರೆಗೆ ಇರುತ್ತದೆ.
ಇನ್ನೂ ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕ ಭಾಗವಾಗಿ ರಾಯೂಚೂರಿಗೆ ಸುಗಮ ಟೂರಿಸ್ಟ್ 750 ರೂ., ವಿಆರ್ಎಲ್ ಟ್ರಾವೆಲ್ಸ್ 700 ರೂ., ಶ್ರೀ ಬಾಲಾಜಿ ಟ್ರಾವೆಲ್ಸ್ 650ರೂ. ನಿಗದಿಯಾಗಿದೆ. ಬೆಂಗಳೂರು-ಮಂಗಳೂರಿಗೆ ಕಾವೇರಿ ಟ್ರಾವೆಲ್ಸ್ 650ರೂ., ಸುಗಮ 850ರೂ., ಪ್ರಗತಿ ಟೂರಿಸ್ಟ್ ಕಾರ್ಪೋರೇಷನ್ 950ರೂ. ಇದೆ. ಬೆಂಗಳೂರು-ಬಳ್ಳಾರಿಗೆ ನ್ಯೂ ಪೂಜಾ ಟ್ರಾವೆಲ್ಸ 699ರೂ., ವಿಆರ್ಎಲ್ 750ರೂ., ಎಸ್ಆರ್ಎಸ್ 650ರೂ. ಇದೆ. ಇಷ್ಟು ಹೆಚ್ಚುವರಿ ಹಣ ನೀಡಿ ತೆರಳಬೇಕಾದ ಅನಿವಾರ್ಯತೆ ಇದೆ.
ನೆರೆ ರಾಜ್ಯ ಪಟ್ಟಣಗಳಿಗೆ ಟಿಕೆಟ್ ದರ ಹೇಗಿದೆ
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಬೆಂಗಳೂರಿನಿಂದ ನೆರೆ ರಾಜ್ಯ, ಇತರ ನಗರಗಳಿಗೂ ಟಿಕೆಟ್ ದರ ಭಾರಿ ಏರಿಕೆ ಆಗಿದೆ. ಬೆಂಗಳೂರು-ಚೆನ್ನೈ ನಾನ್ ಎಸಿ ರಾಯಲ್ ಟ್ರಾವೆಲ್ಸ 650 ರೂ., ಇಂಟರ್ಸಿಟಿ ಸ್ಮಾರ್ಟ್ಬಸ್ 760 ರೂ. ಇದ್ದು, ಚೆನ್ನೈಗೆ ತೆರಳುವವರು ಸರಿಸುಮಾರು 700ರೂ.ನಿಂದ 1,300ವರೆಗೆ ಹಣ ನೀಡಿ ಬಸ್ನಲ್ಲಿ ಸಂಚರಿಸಬೇಕಿದೆ.
ಬೆಂಗಳೂರಿನಿಂದ ಕೇರಳಕ್ಕೆ ಎಸ್ಆರ್ಎಸ್ ಟ್ರಾವೆಲ್ಸ 749ರೂ., ಕುಬೇರ್ ಟ್ರಾವೆಲ್ಸ 1,000ರೂ. ರಾಯಲ್ ಟ್ರಾವೆಲ್ಸ 750ರೂ., ಕೆಆರ್ಎಸ್ ಟ್ರಾವೆಲ್ಸ್ 950ರೂ. ಹಣವನ್ನು ಖಾಸಗಿ ಬಸ್ಗಳು ನಿಗದಿ ಪಡಿಸಿವೆ. ಬೆಂಗಳೂರು-ತಮಿಳುನಾಡು ಗ್ರೀನ್ ಲೈನ್ ಟ್ರಾವೆಲ್ಸ ಆಂಡ್ ಹಾಲಿಡೇಸ್ 1,110ರೂ., ಕೆಆರ್ಎಸ್ 800ರೂ., ಎಸ್ಆರ್ಎಸ್ 749ರೂ., ರಾಯಲ್ ಟ್ರಾವೆಲ್ಸ್ 750ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.
ದರ ಏರಿಕೆ ವಿರುದ್ಧ ಸರ್ಕಾರದ ಕ್ರಮ ಏನು?
ಇತ್ತ ಸಾರಿಗೆ ಸಚಿವ ಶ್ರೀರಾಮುಲು ಅವರು ಹಬ್ಬದ ನೆಪ ಹೇಳಿಕೊಂಡು ಜನರಿಂದ ಹೆಚ್ಚು ಹಣ ಪೀಕಿದರೆ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರಯಾಣಿಕರಿಗೆ ಸೂಕ್ತ, ಸುರಕ್ಷಿತ ಸಾರಿಗೆ ವ್ಯವಸ್ಥೆ ನೀಡುವುದು ನಿಮ್ಮ ಕರ್ತವ್ಯವಾಗಬೇಕು. ಆಯಾ ರೂಟ್ಗಳಿಗೆ ಸರ್ಕಾರ ನಿಗದಿಪಡಿಸಿದ ಹಣವಷ್ಟೇ ಪಡೆಯಬೇಕು. ಹಬ್ಬದ ಸಂದರ್ಭವನ್ನು ದುರಪಯೋಗ ಮಾಡಿಕೊಳ್ಳಬಾರದು ಎಂದು ಅವರು ಎಚ್ಚರಿಸಿದ್ದಾರೆ.
ಕಾನೂನಿನಡಿ ಕ್ರಮದ ಎಚ್ಚರಿಕೆ
ಈಗಾಗಲೇ ಕಳೆದ ಎರಡು ದಿನದಿಂದ ಖಾಸಗಿ ಬಸ್ನವರು ಪ್ರಯಾಣಿಕರಿಗೆ ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳಿಗೆ ಪರಿಶೀಲಿಸುವಂತೆ ತಿಳಿಸಿದ್ದೇನೆ. ಪ್ರಯಾಣಿಕರಿಗೆ ಟಿಕಟ್ ದರ ವಸೂಲಿ ವಿಚಾರದಲ್ಲಿ ತೊಂದರೆ ಮಾಡಿದರೆ, ನಿಗದಿತಕ್ಕಿಂತ ಹೆಚ್ಚು ಹಣ ಪಡೆದರೆ ಅಂತಹ ಬಸ್ ಮಾಲೀಕರ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶ್ರೀರಾಮುಲು ಹೇಳಿದ್ದಾರೆ.