ಸಿದ್ದರಾಮಯ್ಯ ಭಾಷಣದ ಮಧ್ಯೆ ಬೆಲ್ ಬಾರಿಸಿ ಎಚ್ಚರಿಸಿದ ದಿನೇಶ್ ಗುಂಡೂರಾವ್
Recommended Video
ಬೆಂಗಳೂರು, ಜ 16: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಹಾಸ್ಯ ಪ್ರಸಂಗವೊಂದು ನಡೆಯಿತು. ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಾಗಾರವೊಂದರಲ್ಲಿ ವಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ, ಈ ಘಟನೆ ನಡೆದಿದೆ.
ಸಿಎಎ ವಿರೋಧಿ ಕಾರ್ಯಾಗಾರವನ್ನು ಕೆಪಿಸಿಸಿ ಆಯೋಜಿಸಿತ್ತು. ಕಾಂಗ್ರೆಸ್ಸಿನ ಹಿರಿಯ ಮುಖಂಡರು ಮಾತನಾಡುತ್ತಿದ್ದರು. ಎಲ್ಲರಿಗೂ ಹತ್ತು ನಿಮಿಷ ಭಾಷಣ ಮಾಡಲು ಅವಕಾಶ ನೀಡಲಾಗಿತ್ತು.
ಸರತಿಯಂತೆ, ಸಿದ್ದರಾಮಯ್ಯ ಭಾಷಣ ಮಾಡಲಾರಂಭಿಸಿದರು. ಆದರೆ, ನಿಗದಿ ಪಡಿಸಿದ ಸಮಯದಲ್ಲಿ ಸಿದ್ದರಾಮಯ್ಯ ಭಾಷಣ ಮುಗಿಸದೇ ಮಾತನಾಡುತ್ತಲೇ ಇದ್ದರು. ಆ ವೇಳೆ, ದಿನೇಶ್ ಗುಂಡೂರಾವ್ ಬೆಲ್ ಹೊಡೆದು "ಹತ್ತು ನಿಮಿಷ ಆಯ್ತು ಸಾರ್" ಎನ್ನುವ ಮೂಲಕ ಸಿದ್ದರಾಮಯ್ಯಗೆ ಎಚ್ಚರಿಸಿದರು.

ಬೆಲ್ ಶಬ್ದ ಕೇಳಿ ಒಂದು ಕ್ಷಣ ಕಕ್ಕಾಬಿಕ್ಕಿಯಾದ ಸಿದ್ದರಾಮಯ್ಯ, "ದಿನೇಶ್ ಗುಂಡೂರಾವ್ ಸಮಾನತೆ ಕಾಪಾಡಿದ್ದಾರೆ. ಎಲ್ಲರಿಗೂ ಮಾತನಾಡಲು ಸಮಯ ನಿಗದಿ ಮಾಡಲು ನಾನೇ ಹೇಳಿದ್ದು" ಎಂದಾಗ, ಸಭೆ ನಗೆಗಡಲಲ್ಲಿ ತೇಲಿತು. ಆದರೆ, ಭಾಷಣ ನಿಲ್ಲಿಸದೇ ಸಿದ್ದರಾಮಯ್ಯ ಮತ್ತೆ ಭಾಷಣ ಮುಂದುವರಿಸಿದರು.
ಸಿದ್ದರಾಮಯ್ಯನವರ ಪಕ್ಕ, ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ವಿ.ಎಸ್.ಉಗ್ರಪ್ಪ ಮುಂತಾದವರು ಕೂತಿದ್ದರು.
"ಕಾಯ್ದೆ ಮೂಲಕ ಮುಸ್ಲಿಮರನ್ನು ಹೊರಕ್ಕೆ ಕಳಹಿಸಲು ಬಿಜೆಪಿಯವರು ತುದಿಗಾಲಲ್ಲಿ ನಿಂತಿದ್ದಾರೆ. ಬಿಜೆಪಿ ಪರ ಇದ್ದರೆ ಹಿಂದೂಗಳು, ದೇಶಪ್ರೇಮಿಗಳು, ಮೋದಿ ವಿರುದ್ಧ ವಾಗ್ದಾಳಿ ಮಾಡಿದರೆ ನೀವು ದೇಶದ್ರೋಹಿಗಳು ಎಂಬುದು ಅವರ ನಿಲುವಾಗಿದೆ" ಎಂದು ದಿನೇಶ್ ಗುಂಡೂರಾವ್, ಬಿಜೆಪಿಯನ್ನು ಟೀಕಿಸಿದ್ದಾರೆ.












Click it and Unblock the Notifications