ಯಡಿಯೂರಪ್ಪ ಪ್ರಮಾಣ ವಚನ, ದಿನಪೂರ್ತಿಯ ರಾಜಕೀಯ ಚಟುವಟಿಕೆ
ಕರ್ನಾಟಕದ ರಾಜಕೀಯದ ರಂಗೇರಿದೆ. ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರಾದರೂ ಆಟ ಅಲ್ಲಿಗೆ ಮುಗಿದಿಲ್ಲ. 'ಪಿಕ್ಚರ್ ಅಬಿ ಬಾಕಿ ಹೇ'.
ಯಡಿಯೂರಪ್ಪ ಅವರು ಬಹುಮತ ಸಾಬೀತು ಪಡಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಬಹುಮತ ಇರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟ ಆ 15 ದಿನಗಳ ಗಡುವು ಮುಗಿಯಲು ಕಾದು ಕೂತಿವೆ. 'ಆಕ್ಷನ್ ತ್ರಿಲ್ಲರ್' ಸಿನಿಮಾದಂತಾಗಿದೆ ರಾಜ್ಯ ರಾಜಕಾರಣ. ಇಲ್ಲಿ ದಿನ-ದಿನ ಕ್ಷಣ ಕ್ಷಣಕ್ಕೂ ತಿರುವಿದೆ.
ಚುನಾವಣಾ ಫಲಿತಾಂಶ ಬಂದಾಗಿನಿಂದಲೂ ಇಡೀ ದೇಶದ ಕಣ್ಣು ಕರ್ನಾಟಕದ ಮೇಲೆ ನೆಟ್ಟಿದೆ. ದೇಶದಾದ್ಯಂತ ಟಿವಿ ವಾಹಿನಿ, ಪತ್ರಿಕೆಗಳಲ್ಲಿ ರಾಜ್ಯ ರಾಜಕಾರಣದ್ದೇ ಚರ್ಚೆ. ಪ್ರತಿ ದಿನವೂ ಇಲ್ಲಿ ರಾಜಕೀಯ ಪಲ್ಲಟವಾಗುತ್ತಲೇ ಇದೆ.
ಇಂದು (ಗುರುವಾರ) ಏನೇನು ರಾಜಕೀಯ ಬೆಳವಣಿಗೆಗಳಾದವು ಎಂಬುದನ್ನು ತಿಳಿಯಲು ಮುಂದಿನ ಸ್ಲೈಡ್ಗಳತ್ತ ಕಣ್ಣಾಡಿಸಿ...

ಸುಪ್ರೀಂ ಕೋರ್ಟ್ ಮೊರೆ ಹೋದ ಕಾಂಗ್ರೆಸ್
ಯಡಿಯೂರಪ್ಪಗೆ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿದ್ದನ್ನು ಪ್ರಶ್ನಿಸಿ ಬುಧವಾರ ರಾತ್ರಿಯೇ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೊರೆ ಹೋಯಿತು. ತಡ ರಾತ್ರ 4:45ಕ್ಕೆ ಅರ್ಜಿ ವಿಚಾರಣೆಗೆ ತೆಗೆದುಕೊಂಡು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ರಾಜ್ಯಪಾಲರ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದಿತು. ಆದರೆ ಅರ್ಜಿ ವಿಚಾರಣೆ ಇನ್ನೂ ನಡೆಯುತ್ತಿದ್ದು, ಶುಕ್ರವಾರ ಬೆಳಿಗ್ಗೆ ವಿಚಾರಣೆ ಇದೆ.

24ನೇ ಮುಖ್ಯಮಂತ್ರಿ ಆದ ಯಡಿಯೂರಪ್ಪ
ಚುನಾವಣಾ ಪ್ರಚಾರ ಸಂದರ್ಭದಲ್ಲೇ ಹೇಳಿದ್ದಂತೆ ಯಡಿಯೂರಪ್ಪ ಅವರು ಮೇ 17ರಂದೇ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅವರೊಬ್ಬರಿಗೇ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು.

ಕಾಂಗ್ರೆಸ್-ಜೆಡಿಎಸ್ ಪ್ರತಿಭಟನೆ
ರಾಜ್ಯಪಾಲರ ನಿರ್ಣಯ ಖಂಡಿಸಿ ಜೆಡಿಎಸ್-ಕಾಂಗ್ರೆಸ್ ಶಾಸಕರು ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಂತರ ಶಾಸಕರೆಲ್ಲರೂ ಈಗಲ್ಟನ್ ರೆಸಾರ್ಟ್ಗೆ ವಾಪಾಸ್ಸಾದರು. ದೇವೇಗೌಡರು ಪ್ರತಿಭಟನೆ ಮುಗಿಸಿ ತಿರುಪತಿಗೆ ಹೊರಟರು.

5 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಕೆಲವೇ ಗಂಟೆಗಳಲ್ಲಿ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲಯ್ ಸೇರಿದಂತೆ 5 ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರು. ಐಎಎಸ್ ಅಧಿಕಾರಿ ವಿಪಿ ಹುಕ್ಕೇರಿ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸಿಕೊಂಡರು.

ರಾಜ್ಯಪಾಲರ ಕ್ರಮದ ವಿರುದ್ಧ ಜೇಠ್ಮಲಾನಿ ಕೆಂಡಮಂಡಲ
ಸರಕಾರ ರಚನೆಗೆ ರಾಜ್ಯಪಾಲ ವಜೂಭಾಯಿ ವಾಲಾ ಬಿಜೆಪಿಯ ಬಿಎಸ್ ಯಡಿಯೂರಪ್ಪರನ್ನು ಆಹ್ವಾನಿಸಿರುವ ಕ್ರಮವನ್ನು ಪ್ರಶ್ನಿಸಿ ಖ್ಯಾತ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಎ.ಎಂ.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಮುಂದೆ ತುರ್ತಾಗಿ ತಮ್ಮ ಅರ್ಜಿಯನ್ನು ವಿಚಾರಣೆ ನಡೆಸಬೇಕು ಎಂದು ಕೋರಿಕೊಂಡಿದ್ದಾರೆ.

ಕೊನೆಗೂ ಕೈ ಹಿಡಿದ ಆನಂದ್ ಸಿಂಗ್
ಚುನಾವಣಾ ಫಲಿತಾಂಶ ಬಂದಾಗಿನಿಂದಲೂ ಕಾಣೆ ಆಗಿದ್ದ ಆನಂದ್ ಸಿಂಗ್ ಬೆಳಿಗ್ಗೆ ಹೊತ್ತಿಗೆ ಬಿಜೆಪಿಗೆ ಬೆಂಬಲ ನೀಡಿದ್ದಾರೆಂಬ ಸುದ್ದಿ ಹರಿದಾಡಿತ್ತು ಆದರೆ ದಿನದಾಂತ್ಯಕ್ಕೆ ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಬರೆದು ಕಾಂಗ್ರೆಸ್ಗೆ ಬೆಂಬಲ ಕೊಡುವುದಾಗಿ ಹೇಳಿದರು.

ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಬಿಎಸ್ವೈ
ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಜೆ ವೇಳೆಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆದರು. ಅಲ್ಲಿಯೇ ಸುದ್ದಿಗಾರರೊಂದಿಗೆ ಮಾತನಾಡಿ ಸಾಲಮನ್ನಾವನ್ನು 12 ದಿನಗಳ ನಂತರ ಅಧಿವೇಶನ ಕರೆದು ತೀರ್ಮಾನ ಮಾಡುತ್ತೇವೆ ಎಂದರು.

ಜೂನ್ 11ಕ್ಕೆ ಜಯನಗರ ಮತದಾನ
ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಜೂನ್ 11 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಜಯನಗರ ಶಾಸಕ ಬಿಜೆಪಿ ಅಭ್ಯರ್ಥಿ ಬಿಎನ್ ವಿಜಯಕುಮಾರ್ ಹೃದಯಾಘಾತದಿಂದ ನಿಧನರಾದ ಕಾರಣಕ್ಕೆ ಮುಂದೂಡಲಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಜೂನ್ 11 ರಂದು ನಡೆಯಲಿದೆ. ಜೂನ್ 16ರಂದು ಮತ ಎಣಿಕೆ ನಡೆಯಲಿದೆ.

ಕೊಚ್ಚಿಗೆ ತೆರಳಿದ ಶಾಸಕರು
ಈಗಲ್ಟನ್ ರೆಸಾರ್ಟ್ಗೆ ನಿಯೋಜಿಸಿದ್ದ ಪೊಲೀಸ್ ಭದ್ರತೆಯನ್ನು ಮಧ್ಯಾಹ್ನದ ವೇಳೆಗೆ ವಾಪಸ್ ತೆಗೆದುಕೊಳ್ಳಲಾಯಿತು. ಆ ನಂತರ ಭದ್ರತೆ ನೆಪ ಒಡ್ಡಿ ಶಾಸಕರು ಕೊಚ್ಚಿಗೆ ತೆರಳಲು ಯೋಜನೆ ರೂಪಿಸಿದರು. ಈ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, 'ಎಲ್ಲಿಗೆ ಹೋಗಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲ ಆದರೆ ಹೋಗುತ್ತೇವೆ' ಎಂದಿದ್ದಾರೆ.

ಬಿಹಾರದಲ್ಲೂ ಬಹುಮತದ ಸರ್ಕಾರಕ್ಕೆ ಅವಕಾಶಕ್ಕೆ ಮನವಿ
ಕಾಂಗ್ರೆಸ್ ಬಹುಮತವಿರುವ ಗೋವಾ, ಮೇಘಾಲಯ, ತ್ರಿಪುರ ರಾಜ್ಯಗಳನ್ನು ಸೇರಿದಂತೆ ಬಿಹಾರದಲ್ಲಿ ಕೂಡ ಅತಿ ದೊಡ್ಡ ಪಕ್ಷಗಳು ತಮಗೇ ಸರ್ಕಾರ ರಚಿಸಲು ಅನುಮತಿ ಕೊಡಬೇಕು ಎಂದು ರಾಜ್ಯಪಾಲರನ್ನು ಅನುಮತಿ ಕೇಳುವಾದಿ ಪ್ರಕಟಿಸಿತು. ಗೋವಾದ ಕಾಂಗ್ರೆಸ್ ಪಕ್ಷವು ನಾಳೆ (ಶುಕ್ರವಾರ) ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಅನುಮತಿ ಕೋರುವುದಾಗಿ ಹೇಳಿದೆ.












Click it and Unblock the Notifications