ಬಿಎಸ್ವೈ ಜೊತೆಗೆ ನಾಲ್ವರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ಬೆಂಗಳೂರು, ಮೇ 16: ನಾಳೆ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಪಾಲರ ಆಹ್ವಾನದಂತೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯಡಿಯೂರಪ್ಪ ಇನ್ನೂ ನಾಲ್ಕು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಹೌದು, ಈ ಮುಂಚೆ ಯಡಿಯೂರಪ್ಪ ಮಾತ್ರವೇ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ಹೇಳಲಾಗಿತ್ತಾದರೂ ಹೈಕಮಾಂಡ್ ಸೂಚನೆ ಮೇರೆಗೆ ಇನ್ನೂ ನಾಲ್ಕು ಪ್ರಮುಖ ಶಾಸಕರನ್ನು ಯಡಿಯೂರಪ್ಪ ಜೊತೆಗೆ ಸಚಿವರನ್ನಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬಿಜೆಪಿಯ ಪ್ರಮುಖ ಮುಖಂಡರಾದ ಶ್ರೀರಾಮುಲು, ಆರ್.ಅಶೋಕ್, ಜಕೆ.ಎಸ್.ಈಶ್ವರಪ್ಪ ಹಾಗೂ ಗೋವಿಂದ ಕಾರಜೋಳ ಅವರುಗಳು ನಾಳೆ ಯಡಿಯೂರಪ್ಪ ಅವರ ಜೊತೆಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯೆತೆ ದಟ್ಟವಾಗಿದೆ.
ಬಿಜೆಪಿ ಹೈಕಮಾಂಡ್ ಮುಂದಾಲೋಚನೆ ಮಾಡಿ ಈ ರೀತಿಯ ನಿರ್ಣಯ ಕೈಗೊಂಡಿದ್ದು, ಪ್ರಮಾಣ ವಚನ ಸ್ವೀಕರಿಸುತ್ತಿರುವ ಒಟ್ಟು ಐದೂ ಜನ ರಾಜ್ಯದ ಐದು ಪ್ರಮುಖ ಸಮುದಾಯಗಳನ್ನು ಪ್ರತಿನಿಧಿಸುವವರಾಗಿದ್ದಾರೆ.
ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪ, ಕುರುಬ ಸಮುದಾಯದ ಈಶ್ವರಪ್ಪ, ಪರಿಶಿಷ್ಟ ವರ್ಗದ ಶ್ರೀರಾಮುಲು, ಪರಿಶಿಷ್ಟ ಜಾತಿಯ ಗೋವಿಂದ ಕಾರಜೋಳ, ಒಕ್ಕಲಿಗ ಸಮುದಾಯದ ಆರ್.ಅಶೋಕ್ ಅವರನ್ನು ಆಯಾ ನಾಯಕರ ಸಮುದಾಯದವರನ್ನು ಓಲೈಸಲೆಂದೇ ನಾಳೆ ಸಚಿವ ಸ್ಥಾನ ನೀಡಲಾಗುತ್ತಿದೆ.
ಮೊದಲಲ್ಲೇ ಎಲ್ಲಾ ಸಮುದಾಯವನ್ನೂ ತುಷ್ಠೀಕರಿಸಿಬಿಟ್ಟಲ್ಲಿ ಮುಂದೆ ಬರಬಹುದಾದ ಸಮಸ್ಯೆಗಳನ್ನು ಎದುರಿಸಲು ಸುಲಭವಾಗಬಹುದು ಹಾಗೂ ಬಿಜೆಪಿ ವಿರುದ್ಧ ಬರಬಹುದಾದ ಟೀಕೆಗಳನ್ನು ಹತ್ತಿಕ್ಕಲು ಸಹ ಇದು ಸಹಾಯಕ ಎಂದು ಬಿಜೆಪಿ ಹೈಕಮಾಂಡ್ ಚಿಂತಿಸಿದಂತಿದೆ.












Click it and Unblock the Notifications