ಈಶ್ವರಪ್ಪ ರಾಜೀನಾಮೆ ಬೆನ್ನಲ್ಲೇ ಬೊಮ್ಮಾಯಿ ಸರಕಾರದ ಮತ್ತೆ 2 ವಿಕೆಟ್ ಪತನ?
ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ರಾಜೀನಾಮೆಯಿಂದ ಬಿಜೆಪಿ ಸದ್ಯಕ್ಕೆ ಉಸ್ಸಪ್ಪಾ ಎನ್ನುವಂತಿಲ್ಲ. ಕಮಿಷನ್ ಆರೋಪದಡಿಯಲಿ ಮತ್ತಿಬ್ಬರು ಸಚಿವರು ರಾಜೀನಾಮೆ ನೀಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆಯೇ?
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ನಲವತ್ತು ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ ಎನ್ನುವ ಆರೋಪ ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೂ ಹೋಗಿತ್ತು. ಪ್ರಧಾನಿಗಳ ಭೇಟಿಗೆ ಅವಕಾಶ ಸಿಕ್ಕರೆ ದೆಹಲಿಯಲ್ಲಿ ಅವರನ್ನು ಭೇಟಿಯಾಗುವ ಯೋಜನೆಯನ್ನೂ ಹಾಕಿಕೊಳ್ಳಲಾಗಿತ್ತು.
'ಬಿಬಿಎಂಪಿಯಲ್ಲಿ 50 ಪರ್ಸೆಂಟ್ ಕಮೀಷನ್, 6 ಗುತ್ತಿಗೆದಾರರು ಆತ್ಮಹತ್ಯೆ: ತನಿಖೆ ಮಾಡಿದರೆ ದಾಖಲೆ ನೀಡುತ್ತೇವೆ'
ಆದರೆ, ಪ್ರಧಾನಿ ಕಾರ್ಯಾಲಯದಿಂದ ಅಪಾಯಿಂಟ್ಮೆಂಟ್ ಸಿಗದ ಕಾರಣ, ಗುತ್ತಿಗೆದಾರರ ಸಂಘ ಮುಂದಕ್ಕೆ ಹೆಜ್ಜೆಯನ್ನು ಇಟ್ಟಿರಲಿಲ್ಲ. ಈಗ, ಸಂತೋಷ್ ಪಾಟೀಲ್ ಆತ್ಮಹತ್ಯೆಯ ನಂತರ ಕಮಿಷನ್ ಆರೋಪ ಮತ್ತೆ ಮುನ್ನಲೆಗೆ ಬಂದಿದೆ.
ಈಶ್ವರಪ್ಪನವರೇ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ (ವಾಟ್ಸಾಪ್) ಬರೆದಿಟ್ಟು ಸಂತೋಷ್, ಬೆಳಗಾವಿಯಿಂದ ಉಡುಪಿಗೆ ಬಂದು ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ, ಗುತ್ತಿಗೆದಾರರ ಸಂಘ, ಬೊಮ್ಮಾಯಿ ಸರಕಾರದ ಕಮಿಷನ್ ಆರೋಪವನ್ನು ಮತ್ತೆ ಮುಖ್ಯ ವಾಹಿನಿಗೆ ತಂದಿದೆ. ಅದರಲ್ಲೂ ಪ್ರಮುಖವಾಗಿ ಎರಡು ಸಮೃದ್ದ ಇಲಾಖೆಯ ಮೇಲೆ. ಯಾವುದು ಆ ಎರಡು ಸಚಿವಾಲಯ? ಮುಂದಕ್ಕೆ ಓದಿ..
ಅಕ್ರಮ ಆಸ್ತಿ ಗಳಿಕೆ ಆರೋಪ: ಸಚಿವ ವಿ.ಸೋಮಣ್ಣಗೆ ಕೋರ್ಟ್ ಹಾಜರಿಗೆ ವಿನಾಯ್ತಿ
ಕಮಿಷನ್ ದಂಧೆಯಲ್ಲಿ ಈಶ್ವರಪ್ಪನವರು ಒಬ್ಬರೇ ಇದ್ದಿದ್ದಲ್ಲ
"ಕಮಿಷನ್ ದಂಧೆಯಲ್ಲಿ ಈಶ್ವರಪ್ಪನವರು ಒಬ್ಬರೇ ಇದ್ದಿದ್ದಲ್ಲ, ಇನ್ನೂ ಹಲವಾರು ಸಚಿವರು ಇದರಲ್ಲಿ ಶಾಮೀಲಾಗಿದ್ದಾರೆ. ಕಮಿಷನ್ ದಂಧೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಸಚಿವರ ಮತ್ತು ಶಾಸಕರ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ಈ ವಿಚಾರವನ್ನು ಇಲ್ಲಿಗೇ ನಿಲ್ಲಿಸುವುದಿಲ್ಲ, ಎಲ್ಲಾ ಇಲಾಖೆಯಲ್ಲೂ ಕಮಿಷನ್ ತಾಂಡವಾಡುತ್ತಿದೆ"ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ರಾಜ್ಯ ಸರಕಾರದ ವಿರುದ್ದ ಗುರುತರ ಆರೋಪ ಮಾಡಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
"ನೀರಾವರಿ ಮತ್ತು ಆರೋಗ್ಯ ಇಲಾಖೆಯಲ್ಲಿ ಸಿಕ್ಕಾಪಟ್ಟೆ ಭ್ರಷ್ಟಾಚಾರ ನಡೆಯುತ್ತಿದೆ. ನೀರಾವರಿ ಇಲಾಖೆಯಲ್ಲಂತೂ ಟೆಂಡರ್ ಅನ್ನೇ ಜಾಸ್ತಿ ಮಾಡುತ್ತಾರೆ. ಎಲ್ 1 ಕಾಂಟ್ರ್ಯಾಕ್ಟ್ ಅನ್ನು ಯಾರಿಗೂ ಕೊಡಲಾಗುತ್ತಿಲ್ಲ. ಅವರಿಗೆ ಬೇಕಾದ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಟೆಂಡರ್ ನಲ್ಲಿ ಬದಲಾವಣೆಯನ್ನು ಮಾಡಲಾಗುತ್ತದೆ. ಸಚಿವರ ಲೆಟರ್ ಹೆಡ್ ನಿಂದ ಇಂತವರಿಗೆ ಕೆಲಸ ಕೊಡಬೇಕು ಎನ್ನುವ ಶಿಫಾರಸನ್ನು ಮಾಡಲಾಗುತ್ತಿದೆ"ಎಂದು ಕೆಂಪಣ್ಣ ಆರೋಪಿಸಿದ್ದರು.
ಟೆಂಡರ್ ಅನ್ನು ತೆಗೆದುಕೊಂಡಾಗ ಎಷ್ಟು ಖರ್ಚಾಗುತ್ತದೆ ಎನ್ನುವ ಲೆಕ್ಕ
"ಟೆಂಡರ್ ಅನ್ನು ತೆಗೆದುಕೊಂಡಾಗ ಎಷ್ಟು ಖರ್ಚಾಗುತ್ತದೆ ಎನ್ನುವ ಲೆಕ್ಕವನ್ನು ಸಂಬಂಧಪಟ್ಟ ಇಲಾಖೆಗೆ ಕೊಡುತ್ತೇವೆ. ನಾವು ಯಾರನ್ನೂ ಬ್ಲ್ಯಾಕ್ ಮೇಲ್ ಮಾಡುತ್ತಿಲ್ಲ, ಏನು ಸಮಸ್ಯೆ ಎದುರಾಗಬಹುದು ಎನ್ನುವ ಅಂದಾಜು ನಮಗೂ ಇದೆ, ಅದನ್ನು ಎದುರಿಸಲು ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದೇವೆ. ನಲವತ್ತು ಪರ್ಸೆಂಟ್ ದಂಧೆಯಲ್ಲಿ ಐವರು ಸಚಿವರು ಇದ್ದಾರೆ. ಹದಿನೈದು ದಿನಗಳ ಕಾಲಾವಕಾಶವನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದೇವೆ, ಅವರು ಸಭೆ ಕರೆಯದಿದ್ದರೂ, ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ"ಎಂದು ಕೆಂಪಣ್ಣ ಎಚ್ಚರಿಕೆಯನ್ನು ನೀಡಿದ್ದಾರೆ.
ಬೊಮ್ಮಾಯಿ ಸರಕಾರದ ಮತ್ತೆ 2 ವಿಕೆಟ್ ಪತನ?
ಬೊಮ್ಮಾಯಿ ಸರಕಾರದಲ್ಲಿ ಆರೋಗ್ಯ ಸಚಿವರು ಡಾ.ಸುಧಾಕರ್, ಸಣ್ಣ ಮತ್ತು ಬೃಹತ್ ನೀರಾವರಿ ಇಲಾಖೆಯ ಸಚಿವರು ಗೋವಿಂದ ಕಾರಜೋಳ. ಕೆಂಪಣ್ಣ ಅವರ ಮಾತಿಗೆ ತೀವ್ರ ಸಿಟ್ಟಾಗಿದ್ದ ಡಾ.ಸುಧಾಕರ್, "ಕೆಂಪಣ್ಣ ಅವರು ಒಂದು ಪಕ್ಷದ ಏಜೆಂಟ್ ನಂತೆ ವರ್ತಿಸುತ್ತಿದ್ದಾರೆ, ಸಚಿವರನ್ನು ಏಕ ವಚನದಿಂದ ಸಂಭೋದಿಸುತ್ತಾರೆ. ಇವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಲಾಗುತ್ತಿದೆ"ಎಂದು ಸಚಿವರು ಎಚ್ಚರಿಕೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
Recommended Video