ಜೆಡಿಎಸ್ನಲ್ಲೆ ಬೆಳೆದು ಈ ಪಕ್ಷವನ್ನು ಮುಗಿಸಬೇಕು ಎಂದು ಕರೆ ಕೊಡುವ ಸಿದ್ದರಾಮಯ್ಯ: ದೇವೇಗೌಡ ಕಿಡಿ
ಹಾಸನ, ಏಪ್ರಿಲ್ 01: ಜೆಡಿಎಸ್ ನಲ್ಲೆ ಬೆಳೆದು ಮತ್ತೆ ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಕರೆ ಕೊಡುವ ಸಿ.ಎಂ ಸಿದ್ದರಾಮಯ್ಯ ಅವರ ದುರಹಂಕಾರಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೆ ತಕ್ಕ ಉತ್ತರ ಕೊಡಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕರೆ ಕೊಟ್ಟಿದ್ದಾರೆ.
ಹಾಸನ ತಾಲೂಕಿನ ಸಾಲಗಾಮೆಯಲ್ಲಿ ಭಾನುವಾರದಂದು ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲೇ ಬೆಳೆದು ಈಗ ಅಧಿಕಾರದ ಅಹಂ ನಿಂದಾ ಬಾಯಿಗೆ ಬಂದಂತೆ ಮಾತನಾಡುವ ಜೊತೆಗೆ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಲು ಹಾಸನಕ್ಕೆ ಮೂರು ಬಾರಿ ಬಂದು ಪ್ರಜ್ವಲ್ ಸೋಲಿಸಲು ಮುಂದಾಗಿರುವ ಕಾಂಗ್ರೆಸ್ ನಾಯಕರಿಗೆ ಈ ಬಾರಿ ಮುಖಭಂಗ ಮಾಡುವ ಕೆಲಸವನ್ನು ನನ್ನ ಜಿಲ್ಲೆಯ ಜನರು ಮಾಡಬೇಕಿದೆ ಎಂದು ಕರೆ ನೀಡಿದರು.

ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಸಲುವಾಗಿ ಕೇಂದ್ರ ಹಣ ನೀಡುತ್ತಿಲ್ಲ ಎಂದು ಕೋರ್ಟ್ನಲ್ಲಿ ರಾಜ್ಯ ಸರ್ಕಾರ ಧಾವೆ ಹೂಡಿದೆ, ಪ್ರಬಲವಾದ ಪ್ರಧಾನಿ ದೇಶಕ್ಕೆ ಇರಬಾರದು ಎಂಬ ಹೇಳಿಕೆ ನೀಡಿದ್ದಾರೆ. ಪ್ರಬಲವಾದ ಪ್ರಧಾನಮಂತ್ರಿ ಇದ್ದರೆ ಇವರು ಕೇಳಿದಂತೆ ಹಣ ನೀಡುವುದಿಲ್ಲ ಎಂದು ಈ ರೀತಿ ಹೇಳಿದ್ದಾರೆ. ಈ ಬಗ್ಗೆ ಜನ ಯೋಚಿಸುವ ಅಗತ್ಯವಿದೆ ಎಂದರು.
ದೇಶದ ಆಡಳಿತ ವ್ಯವಸ್ಥೆಯಲ್ಲಿ ಫೈನಾನ್ಸ್ ಕಮಿಷನ್ ಪ್ರತಿ ರಾಜ್ಯದ ಆರ್ಥಿಕ ಸ್ಥಿತಿ ಗತಿಗಳ ಬಗ್ಗೆ ಪ್ರತಿ ಐದು ವರ್ಷಗಳ ಬಗ್ಗೆ ಪರಿಶೀಲನೆ ನಡೆಸಿ ಆರ್ಥಿಕ ಸಮಸ್ಯೆ ಹೊಂದಿರುವ ಹಣವನ್ನು ಒದಗಿರುವ ಕೆಲಸವನ್ನು ಮಾಡುತ್ತದೆ. ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಬಳಿ ಹಣ ಇಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಧಾವೆ ಹೂಡುವುದು ಎಸ್ಟು ಸರಿ ಎಂದು ಪ್ರಶ್ನಿಸಿದರು. ಜೆಡಿಎಸ್ ಎಲ್ಲಿದೆ ಎಂದು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ದಾರೆ. ಅವರಿಗೆ ಜೆಡಿಎಸ್ ಎಲ್ಲಿದೆ ಎಂಬುದನ್ನು ತೋರಿಸುತ್ತೇನೆ, ಈ ಭಾಗದ ಎಲ್ಲರೂ ಈ ಬಾರಿ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಗೆ ಮತ ನೀಡುವ ಮೂಲಕ ಅಧಿಕ ಮತಗಳ ಹಂತರದಿಂದ ಗೆಲ್ಲಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಪಕ್ಷ ಮುಗಿಸಲು ಕಾಂಗ್ರೆಸ್ ನಾಯಕರು ಕರೆ ಕೊಟ್ಟಿದ್ದು, ಆದರೆ ನಾನು ಇನ್ನು ಬದುಕಿದ್ದೇನೆ ಜೆಡಿಎಸ್ ಮುಗಿಸುವುದು ಅಷ್ಟು ಸುಲಭದ ಮಾತಲ್ಲ. ಇನ್ನು ಮೊಸಳೆ ಹೊಸಳ್ಳಿ ತಾಲೂಕು ಕೇಂದ್ರ ಆಗುವುದರಲ್ಲಿ ಯಾವ ಸಂಶಯವಿಲ್ಲ ಎಂದರು. ಸಿ.ಎಂ ಸಿದ್ದರಾಮಯ್ಯ ಅವರು ಭಾಷಣವೊಂದರಲ್ಲಿ ಜೆಡಿಎಸ್ ಎಲ್ಲಿದೆ ಎಂದು ಅಧಿಕಾರದ ಅಹಂ ಮಾತನಾಡಿದ್ದಾರೆ. ಅವರ ಅಹಂಕಾರಕ್ಕೆ ಈ ಬಾರಿಯ ಚುನಾವಣೆಯಲ್ಲೆ ತಕ್ಕ ಉತ್ತರ ಜನತೆ ನೀಡಲಿದ್ದಾರೆ ಎಂದರು.
ಕಾಂಗ್ರೆಸ್ ಎಲ್ಲಿದೆ ಎಂಬ ಪ್ರಶ್ನೆಯನ್ನು ನಾವು ಕೇಳ ಬೇಕಾಗುತ್ತದೆ. ಕರ್ನಾಟಕ ಸೇರಿ ಇನ್ನುಳಿದ ಎರಡು ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಜೆಡಿಎಸ್ ಮುಗಿಸುವ ಮಾತನ್ನ ಆಡುತ್ತಿದ್ದಾರೆ. ಇಡೀ ಬೆಂಗಳೂರಿನ ಆದಾಯವನ್ನು ಕೇವಲ ಒಬ್ಬ ಕಾಂಗ್ರೆಸ್ ನಾಯಕ ವಸೂಲಿ ಮಾಡುತ್ತಿದ್ದು, ರಾಜ್ಯದ ಜನರ ತೆರಿಗೆ ಹಣ ಹೋರ ರಾಜ್ಯದ ಪಾಲಾಗುತ್ತಿದೆ ಎಂದರು. ಹಾಸನ ಜಿಲ್ಲೆಯಲ್ಲಿ ಏನು ಕೆಲಸ ಬಾಕಿ ಉಳಿದಿದೆ ಎಂಬುದು ಅವರಿಗೆ ಗೊತ್ತಿಲ್ಲ. ಅಷ್ಟು ಕೆಲಸವನ್ನು ಹೆಚ್.ಡಿ. ರೇವಣ್ಣ ಅವರು ಮಾಡಿದ್ದಾರೆ. ಯಾರಾದರೂ ಶ್ರವಣಬೆಳಗೊಳದಿಂದ ಮೊಸಳೆ ಹೊಸಳ್ಳಿ ಮಾರ್ಗವಾಗಿ ರೈಲ್ವೆ ಸಂಪರ್ಕ ಕಲ್ಪಿಸುವಂತೆ ಸಲಹೆ ನೀಡಿದರೆ ನಾಳೆ ರೈಲ್ವೆ ಸಚಿವರನ್ನು ಈ ಗಿರಕಿ ಬಿಡುವುದೇ ಇಲ್ಲ ಎಂದು ಹೆಚ್.ಡಿ. ರೇವಣ್ಣ ಅವರನ್ನು ಹಾಡಿ ಹೊಗಳಿದರು.
ಜಿಲ್ಲೆಯಲ್ಲಿ ಏನಾದರೂ ಕೆಲಸ ಮಾಡಬೇಕು ಎಂದು ರೇವಣ್ಣ ಅವರ ಮನಸ್ಸಿಗೆ ಬಂದರೆ ಮುಗೀತು. ಅದನ್ನ ಅವರು ಮಾಡಿಯೇ ತೀರುವುದು ಅವರ ಸ್ವಭಾವವೇ ಹಾಗೆ ಅನಿಸಿದ್ದನ್ನು ಮಾಡಿ ಮುಗಿಸುವ ವರೆಗೂ ಬಿಡುವುದಿಲ್ಲ. ಆದುದರಿಂದ ಈಗಾಗಲೇ ಮೊಸಳೆ ಹೊಸಳ್ಳಿ ಹೋಬಳಿ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇದು ತಾಲೂಕು ಕೇಂದ್ರ ಆಗುವಲ್ಲಿ ಯಾವುದೇ ಸಂಶಯ ಇಲ್ಲ ಎಂದು ಭವಿಷ್ಯ ನುಡಿದರು.












Click it and Unblock the Notifications