ಕೇದಾರನಾಥ ದೇವಾಲಯದ ಜೀರ್ಣೋದ್ದಾರ: ಪ್ರಧಾನಿಗೆ ದೇವೇಗೌಡರ ಶಹಬ್ಬಾಸ್ ಗಿರಿ
ಬೆಂಗಳೂರು, ನ 6: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು, ಮೋದಿಗೆ ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ, ಶೃಂಗೇರಿ ಮಠದ ಜೊತೆಗೆ ತಮಗಿರುವ ಅವಿನಾವಭಾವ ಸಂಬಂಧದ ಬಗ್ಗೆಯೂ ಪತ್ರದಲ್ಲಿ ವಿವರಣೆಯನ್ನು ನೀಡಿದ್ದಾರೆ.
ಪ್ರಧಾನಿ ಮೋದಿಯವರು ನವೆಂಬರ್ ಐದರಂದು ಚಾರ್ ಧಾಮ್ ಕ್ಷೇತ್ರಗಳಲ್ಲಿ ಒಂದಾದ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಆದಿಗುರು ಶಂಕರಾಚಾರ್ಯ ಅವರ ವಿಗ್ರಹವನ್ನೂ ಅನಾವರಣಗೊಳಿಸಿದ್ದರು.
2013ರಲ್ಲಿ ಉತ್ತರಾಖಂಡದಲ್ಲಿ ಭಾರೀ ಪ್ರವಾಹ ಉಂಟಾದ ಸಂದರ್ಭದಲ್ಲಿ ಕೇದಾರನಾಥದಲ್ಲಿನ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆಯೂ ನಾಶವಾಗಿತ್ತು. ಈ ಹಿನ್ನೆಲೆಯಲ್ಲಿ, ಹಲವು ಯೋಜನೆಗಳನ್ನು ರಾಜ್ಯ ಸರಕಾರದ ಸಹಕಾರದೊಂದಿಗೆ ಕೇಂದ್ರ ಸರಕಾರ ರೂಪಿಸಿತ್ತು. ಅದರಂತೇ, ಶಂಕರಾಚಾರ್ಯರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು.
ಮೋದಿ ಭೇಟಿಯ ವೇಳೆ ಶೂ ಧರಿಸಿದ್ದರು ಎಂದು ಸಾಮಾಜಿಕ ತಾಣದಲ್ಲಿ ಸುದ್ದಿಯಾಗಿತ್ತು. ಕೇದಾರನಾಥ ಕ್ಷೇತ್ರದಲ್ಲಿ ತುಂಬಾ ಚಳಿ ಇರುವುದರಿಂದ, ವುಲನ್ ಸಾಕ್ಸ್ ಧರಿಸುವುದು ಸಾಮಾನ್ಯ ಎಂದು ಇದಕ್ಕೆ ಸಮರ್ಥನೆಯೂ ಕೇಳಿ ಬರುತ್ತಿದೆ. ಮೋದಿಗೆ ಗೌಡ್ರು ಬರೆದ ಪತ್ರದಲ್ಲಿ ಏನಿದೆ?

ರಾಜ್ಯದ ಶೃಂಗೇರಿ ಶಾರದಾ ಪೀಠಕ್ಕೆ ಭಕ್ತಿಭಾವದಿಂದ ನಡೆದುಕೊಳ್ಳುವ ಬಗ್ಗೆ
ಕೇದಾರನಾಥ ದೇಗುಲದಲ್ಲಿ ಶ್ರೀ.ಶಂಕರಾಚಾರ್ಯರ ಪ್ರತಿಮೆ ನಿರ್ಮಾಣ ಮಾಡಿ, ಉದ್ಘಾಟಿಸಿದ್ದಕ್ಕೆ ಮೋದಿವರಿಗೆ ಮೆಚ್ಚುಗೆ ಸೂಚಿಸಿದ ಗೌಡ್ರು, ಒಮ್ಮೆ ಕೇದಾರನಾಥಗೆ ದರ್ಶನ ನೀಡಬೇಕು ಎನ್ನುವ ಆಶಯವನ್ನೂ ಗೌಡ್ರು ಪತ್ರದಲ್ಲಿ ಬರೆದಿದ್ದಾರೆ. ಇದರ ಜೊತೆಗೆ, ಕೇದಾರನಾಥ ದೇವಾಲಯದ ಜೀರ್ಣೋದ್ದಾರ ನಡೆಸಿದ್ದಕ್ಕೂ ಗೌಡ್ರು ಶಹಬ್ಬಾಸ್ ಗಿರಿ ನೀಡಿದ್ದಾರೆ. ಇದರ ಜೊತೆಗೆ, ರಾಜ್ಯದ ಶೃಂಗೇರಿ ಶಾರದಾ ಪೀಠದ ಜೊತೆಗೆ ಭಕ್ತಿಭಾವದಿಂದ ನಡೆದುಕೊಳ್ಳುವ ಬಗ್ಗೆಯೂ ಗೌಡ್ರು ಪತ್ರದಲ್ಲಿ ಬರೆದಿದ್ದಾರೆ.

ಜೀರ್ಣೊದ್ದಾರ ಕೆಲಸಕ್ಕೆ ನೀವು ತೋರಿದ ಕಾಳಜಿಗಾಗಿ ನಿಮಗೆ ಅಭಿನಂದನೆ
"ಶಂಕರಾಚಾರ್ಯರ ಪ್ರತಿಮೆ ಅದ್ಭುತವಾಗಿದೆ, ಕೇದಾರಾನಾಥ ಕ್ಷೇತ್ರದ ಜೀರ್ಣೊದ್ದಾರ ಕೆಲಸಕ್ಕೆ ನೀವು ತೋರಿದ ಕಾಳಜಿಗಾಗಿ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಮತ್ತು ನನ್ನ ಕುಟುಂಬ ಶೃಂಗೇರಿ ಮಠದ ಬಹುದೊಡ್ಡ ಭಕ್ತರಾಗಿದ್ದೇವೆ. ಇದು ದೇಶದ ನಾಲ್ಕು ಶಕ್ತಿಪೀಠಗಳಲ್ಲಿ ಒಂದು, ಪ್ರಮುಖವಾಗಿ ಆಚಾರ್ಯರ ಪ್ರತಿಮೆ ಬಹು ಸುಂದರವಾಗಿ ಮೂಡಿ ಬಂದಿದೆ. ಇದನ್ನು ನಮ್ಮ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ತಯಾರಿಸಿರುವುದು"ಎಂದು ಗೌಡ್ರು, ಮೋದಿಗೆ ಪತ್ರದಲ್ಲಿ ಬರೆದಿದ್ದಾರೆ.

ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ ಎಚ್.ಡಿ.ದೇವೇಗೌಡ
"ಈ ಹಿಂದೆಯೂ ಶೃಂಗೇರಿ ಪೀಠ ಹಲವು ಸಾಮ್ರಾಜ್ಯಗಳ ಧಾರ್ಮಿಕ ಕೇಂದ್ರವಾಗಿತ್ತು. ಅದರಲ್ಲಿ ಪ್ರಮುಖವಾಗಿ, ಒಡೆಯರ್, ಪೇಶ್ವೆ, ಕೆಳದಿ ಮನೆತನ, ತಿರುವಂಕೂರು ಮನೆತನ, ಮೈಸೂರು ಅರಸರು, ಟಿಪ್ಪು ಸುಲ್ತಾನ, ಹೈದರಾಬಾದ್ ನವಾಬ್ ಕುಟುಂಬ ಲಾಭಾಂಶ ಪಡೆದುಕೊಂಡಿದೆ. ನೂತನವಾಗಿ ನಿರ್ಮಾಣವಾಗಿರುವ ಶಂಕರಾಚಾರ್ಯರ ಪ್ರತಿಮೆಯನ್ನು ನೋಡಲು ಉತ್ಸುಕನಾಗಿದ್ದೇನೆ"ಎಂದು ಗೌಡ್ರು ಪತ್ರದಲ್ಲಿ ಬರೆದಿದ್ದಾರೆ.

ಕೇದಾರನಾಥದ ಅಭಿವೃದ್ದಿ ಕಾರ್ಯಗಳನ್ನು ಪರಿಶೀಲನೆ ಮಾಡುತ್ತಿದ್ದೇನೆ
"ನಾನು ನಿರಂತರವಾಗಿ ಕೇದಾರನಾಥದ ಅಭಿವೃದ್ದಿ ಕಾರ್ಯಗಳನ್ನು ಪರಿಶೀಲನೆ ಮಾಡುತ್ತಿದ್ದೇನೆ. ನಾನು ಡ್ರೋನ್ ಫೂಟೇಜ್ ಮೂಲಕ ನಾವು ದೆಹಲಿಯಲ್ಲಿ ಕುಳಿತು ಕೇದಾರನಾಥದ ಅಭಿವೃದ್ದಿ ಕಾರ್ಯವನ್ನು ಅವಲೋಕನ ಮಾಡುತ್ತಿದ್ದೆವು. ಇಲ್ಲಿ ಈ ಕಾರ್ಯಕ್ಕಾಗಿ ಸಲಹೆ, ಸಹಕಾರ ನೀಡಿದ ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ," ಎಂದು ಪ್ರಧಾನಿ ನರೇಂದ್ರ ಮೋದಿಯವರು ಭೇಟಿಯ ಸಂದರ್ಭದಲ್ಲಿ ಹೇಳಿದ್ದರು.












Click it and Unblock the Notifications