ಸಿಎಂ ಡಿನ್ನರ್ ಪಾರ್ಟಿ; ಕಾಂಗ್ರೆಸ್ ನಲ್ಲಿ 6 ಗ್ಯಾಂಗ್ ಯಾವಾಗ ಸ್ಪೋಟಗೊಳ್ಳುತ್ತೊ ಗೊತ್ತಿಲ್ಲ: ಆರ್ ಅಶೋಕ್
ಬೆಂಗಳೂರು, ಅಕ್ಟೋಬರ್ 06: ಸಿದ್ದರಾಮಯ್ಯ ಅವರು ನಿನ್ನೆ ಡಿನ್ನರ್ ಪಾರ್ಟಿ ಕೊಟ್ಟಿದ್ದಾರೆ. ಇದರಲ್ಲೇ ಗೊತ್ತಾಗುತ್ತೆ ಎಷ್ಟು ಭಿನ್ನಮತ ಎದ್ದಿದೆ ಅಂತ, ಕಾಂಗ್ರೆಸ್ ನಲ್ಲಿ 6 ಗ್ಯಾಂಗ್ ಇದೆ, ಈ ಗ್ಯಾಂಗ್ ಯಾವಾಗ ಸ್ಪೋಟಗೊಳ್ಳುತ್ತೊ ಗೊತ್ತಿಲ್ಲ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದರು.
ಈ ಕುರಿತು ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇದೊಂದು ಕಾಂಗ್ರೆಸ್ ನ ಗ್ಯಾಂಗ್ ವಾರ್, ಈಗೊಂದು ಗ್ಯಾಂಗ್ ಕರ್ದಿದ್ದಾರೆ, ಇನ್ನೊಂದು ತಿಂಗಳಲ್ಲಿ ಡಿನ್ನರ್ ಗಾಗಿ ಇನ್ನೊಂದು ಗ್ಯಾಂಗ್ ಕರಿತಾರೆ ನೋಡಿ. ನೆನ್ನೆ ಪಾರ್ಟಿಗೆ ಬಂದಿರುವವರು ಮತ್ತೊಂದು ಬೆಂಕಿ ಇಟ್ಟು ಹೋಗಿರ್ತಾರೆ ಎಂದು ಹೇಳಿದರು.

ಲಿಂಗಾಯತರ ಕಡಗಣನೆ ಕುರಿತು ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಲಿಂಗಾಯತ ಸಮಾಜದ ರಾಷ್ಟ್ರೀಯ ಅಧ್ಯಕ್ಷರು. ಅವರು ಹೇಳಿದ ಮೇಲೆ ಸರ್ಟಿಫಿಕೇಟ್ ಏಕೆ ಬೇಕು. ಇದೇ ಅಧಿಕಾರಿಗಳು ಹೋಗಿ ಕಂಪ್ಲೆಂಟ್ ಹೇಳಿರ್ತಾರೆ, ಒಂದು ಕೆಟ್ಟ ಸಂಪ್ರದಾಯವನ್ನು ಕಾಂಗ್ರೆಸ್ ನವರು ಮಾಡಿದ್ದಾರೆ. ಜಾತಿ ಆಧಾರದ ಮೇಲೆ ಪೋಸ್ಟ್ ಕೊಟ್ಟಿರೋದು ಕಾನೂನು ಪ್ರಕಾರ ತಪ್ಪು. ಜಾತಿ ಹೆಸರಲ್ಲಿ ಕೊಡಬಾರದು, ಇದು ತಪ್ಪು ಎಂದರು.
ಇದು ಕಾಂಗ್ರೆಸ್ ನ ಒಳ ಜಗಳ, ತಕ ತಕ ಅಂತ ಕುದಿತಿದೆ. ಅಭಿವೃದ್ಧಿ ಗೆ ದುಡ್ಡಿಲ್ಲ, ಸರ್ಕಾರ ಬಿದ್ರೆ ಸಾಕು ಅಂತ ಅವರೇ ಹೇಳ್ತಿದ್ದಾರೆ, ಇದೊಂದು ಭ್ರಷ್ಟಾಚಾರ, ವರ್ಗಾವಣೆ ಧಂದೆಯ ಅತಿರೇಕದ ಸರ್ಕಾರ ಎಂದು ಕಿಡಿಕಾರಿದ ಅವರು, 3-6 ಡಿಸಿಎಂ ಅನ್ನೋ ಗಲಾಟೆ ಅವರಲ್ಲೇ ಆಗುತ್ತಿದೆ ಎಂದರು.
ಸೋಮಶೇಖರ್ ಕಾಂಗ್ರೆಸ್ ಗೆ ಹೋಗುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇದೆಲ್ಲಾ 4-5 ತಿಂಗಳಿಂದ ನಡಿತಿದೆ, ಅವರು ನಮ್ಮ ಮನೆಗು ಬಂದಿದ್ರು, ಮುಖ್ಯಮಂತ್ರಿ ಭೇಟಿ ಅದು ಅವರ ವೈಯಕ್ತಿಕ, ಸದ್ಯಕ್ಕೆ ಅವರು ಪಾರ್ಟಿ ಬಿಟ್ಟು ಹೋಗುವ ಪ್ರಮೇಯ ಇಲ್ಲ. ಸೋಮಶೇಖರ್ ನ ಬಿಜೆಪಿಗೆ ಕರೆದುಕೊಂಡು ಬಂದಿದ್ದು ನಾನೇ, ಅವರ ಕ್ಷೇತ್ರದಲ್ಲಿ ಜನತಾದಳದ ಬಗ್ಗೆ ಕೋಪ ಇರಬಹುದು ಅದಕ್ಕೆ ಮಾತಾಡಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆಗೆ ಮೈತ್ರಿ ವಿಚಾರವಾಗಿ ಮಾತನಾಡಿ, ಮೈತ್ರಿಯನ್ನು ನಾವು ಸ್ವಾಗತ ಮಾಡುತ್ತೇವೆ, ಲೋಕಸಭೆಯಲ್ಲಿ 28 ಸ್ಥಾನ ಗೆಲ್ಲುತ್ತೇವೆ, ಕಾಂಗ್ರೆಸ್ ನ ತಾಲೀಬಾನ್ ಆಡಳಿತಕ್ಕೆ ಜನ ರೋಸಿ ಹೋಗಿದ್ದಾರೆ ಇವತ್ತೇ MLA ಚುನಾವಣೆ ನಡೆದ್ರೆ ಕಾಂಗ್ರೆಸ್ ಧೂಳಿಪಟ ಆಗುತ್ತೆ ಎಂದು ಹೇಳಿದರು.
ಸರ್ಕಾರ ಬೀಳುತ್ತೆ ಅನ್ನೋ ಕುಮಾರಸ್ವಾಮಿ, ಯೋಗೇಶ್ವರ್ ಭವಿಷ್ಯ ವಿಚಾರವಾಗಿ ಮಾತನಾಡಿ, ಇಡೀ ಕರ್ನಾಟಕದ ಜನರ ಭಾವನೆ ಸರ್ಕಾರ ಬೀಳಬೇಕು ಅನ್ನೋದು. ಕಾಂಗ್ರೆಸ್ ಅವರು ಕಾಲಿಟ್ರೆ ಬರಗಾಲ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ಮೇಲೆ ಬರಗಾಲ. ಅವರದೇ ಆಂತರಿಕ ಬೇಗುದಿ ಜಾಸ್ತಿಯಾಗಿದೆ, ಕುಮಾರಸ್ವಾಮಿ, ಯೋಗೇಶ್ವರ್ ಹೇಳಿರೋದು ಸತ್ಯಕ್ಕೆ ಹತ್ತಿರವಾಗಿದೆ. ಈ ಸರ್ಕಾರ ಜಾಸ್ತಿ ದಿನ ಉಳಿಯಲ್ಲ ಅಂತ ನನಗೂ ಅನಿಸುತ್ತಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಡಿ ಕೆ ಶಿವಕುಮಾರ್ ಆಪರೇಷನ್ ಹಸ್ತ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕಾಂಗ್ರೆಸ್ ಸರ್ಕಾರ ಬಿಳಿಸಿದಾಗ 15 ಜನ ಸಿಟಿಂಗ್ MLA ಗಳನ್ನ ಕರೆದುಕೊಂಡು ಬಂದಿದ್ದೆ. ಬೆಂಗಳೂರಿನಿಂದ ಯಾರು ಸಿಟಿಂಗ್ MLA ಗಳು ಹೋಗಿಲ್ಲ, ಕಾರ್ಪೊರೇಟರ್ ಗಳು ಹೋಗಿದ್ದಾರೆ. ಅವರೆಲ್ಲಾ ದೊಡ್ಡವರು, ನಾವು ಸಣ್ಣವರು ಸಣ್ಣವರ ತರ ಇರಬೇಕು ಎಂದು ಡಿ ಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟರು.












Click it and Unblock the Notifications