'ನಾವು ರಾಜೀನಾಮೆ ಕೊಡದಿದ್ದರೆ ರಾಜ್ಯದಲ್ಲಿ 50 ಸಾವಿರ ಜನರು ಸಾಯುತ್ತಿದ್ದರು'
ಬೆಂಗಳೂರು, ಜೂ. 03: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿ ಒಂದು ವರ್ಷ ವಾಗುತ್ತಿದೆ. ಅಷ್ಟರೊಳಗೆ ಬಿಜೆಪಿ ಸರ್ಕಾರದಲ್ಲಿಯೂ ಬಂಡಾಯ ಸ್ಪೋಟವಾಗಿದೆ. ಇದೇ ಸಂದರ್ಭದಲ್ಲಿ ಬಂಡಾಯ ಮತ್ತಷ್ಟು ಹೆಚ್ಚಾಗಲು ಕಾರಣವಾಗುವಂತೆ ರಾಜ್ಯಸಭಾ ಹಾಗೂ ವಿಧಾನ ಪರಿಷತ್ ಚುನಾವಣೆಗಳು ಬಂದಿವೆ.
Recommended Video
ಇದರೊಂದಿಗೆ ನಾವು ರಾಜೀನಾಮೆ ಕೊಡದೇ ಇದ್ದಿದ್ದರೆ ರಾಜ್ಯದಲ್ಲಿ 50 ಸಾವಿರ ಜನರು ಸಾವನ್ನಪ್ಪುತ್ತಿದ್ದರು ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಬೆಂಗಳೂರಿನಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ರಾಜ್ಯದ ಜನತೆ ನಮಗೆ ಅಭಿನಂದನೆ ಹೇಳಬೇಕು ಎಂದಿದ್ದಾರೆ. ತಮ್ಮ ಹೇಳಿಕೆಗೆ ವಿಚಿತ್ರ ಕಾರಣವನ್ನೂ ಅವರು ಕೊಟ್ಟಿದ್ದಾರೆ. ಜೊತೆಗೆ ಸೋತವರೇ ಉಪ ಮುಖ್ಯಮಂತ್ರಿ ಆಗಿರುವಾಗ, ನಾನು ಎಂಎಲ್ಸಿ ಆಗಲ್ಲವಾ ಎಂದು ಪ್ರಶ್ನೆ ಮಾಡುವ ಮೂಲಕ ಬಿಜೆಪಿ ಬಂಡಾಯ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ಕೊಟ್ಟಿದ್ದಾರೆ.

ಕೊರೊನಾ ಯೋಧರು
ಹೌದು, ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ನಾವು 17 ಜನರೂ ಕೊರೊನಾ ಯೋಧರು. ನಾಡಿನ ಜನತೆ ನಮಗೆ ಅಭಿನಂದನೆ ಸಲ್ಲಿಸಬೇಕು ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿದ್ದಾರೆ. ಅದಕ್ಕೆ ಅವರು ಕಾರಣವನ್ನೂ ಕೊಟ್ಟಿದ್ದಾರೆ. ಅದೆನೆಂದರೆ ದೈವ ಭಕ್ತಿಯನ್ನು ಹೊಂದಿರುವ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿರುವುದರಿಂದ ಕೊರೊನಾ ವೈರಸ್ ನಿಯಂತ್ರಣದಲ್ಲಿದೆ.
ಸಮ್ಮಿಶ್ರ ಸರ್ಕಾರ ಇದ್ದಿದ್ದರೆ ರಾಜ್ಯ ಅಲ್ಲೋಲ ಕಲ್ಲೋಲ ಆಗುತ್ತಿತ್ತು. ಯಾಕೆಂದರೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದಿದ್ದರೆ ಲಾಕ್ಡೌನ್ ಆಗುತ್ತಲೇ ಇರಲಿಲ್ಲ. ದೈವಭಕ್ತಿಯ ಸಿಎಂ ಅಧಿಕಾರದಲ್ಲಿ ಇದ್ದುದರಿಂದ ರಾಜ್ಯ ಬಚಾವಾಗಿದೆ ಎಂದು ವಿಶ್ವನಾಥ್ ಹೇಳಿದ್ದಾರೆ. ಹೀಗಾಗಿಯೆ ರಾಜ್ಯದ ಜನತೆ ನಮಗೆ ಅಭಿನಂದನೆ ಹೇಳಬೇಕು ಎಂದಿದ್ದಾರೆ.

50 ಸಾವಿರ ಜನರ ಸಾವು?
ನಾವು ರಾಜೀನಾಮೆ ಕೊಡದೇ ಇದ್ದದ್ದರೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತದಲ್ಲಿ ಇರುತ್ತಿತ್ತು. ಆಗ ಕರೋನ ಜತೆ ಮೊನ್ನೆ ಮಾತನಾಡಿದೆ ಬ್ರದರ್ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿದ್ದರು. ವೈರಸ್ ತಡೆಯಲು ಚಪ್ಪಾಳೆ ಹೊಡೆಯುತ್ತಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಇಬ್ಬರು ಉಡಾಫೆಯಾಗಿ ಮಾತನಾಡಿಕೊಂಡು ರಾಜ್ಯದ ಜನರನ್ನ ಬಲಿ ಪಡೆಯುತ್ತಿದ್ದರು.
ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಉಡಾಫೆಯಾಗಿ ಮಾತನಾಡಿ ರಾಜ್ಯದಲ್ಲಿ ಲಾಕ್ಡೌನ್ನ್ನು ಸರಿಯಾಗಿ ಜಾರಿಗೆ ತರುತ್ತಿರಲಿಲ್ಲ. ಹಾಗೆ ಆಗಿದ್ದರೆ ರಾಜ್ಯದಲ್ಲಿ ಕೊರೊನಾ ವೈರಸ್ನಿಂದ ಇಷ್ಟೊತ್ತಿಗೆ 50 ಸಾವಿರ ಜನರು ಸಾವನ್ನಪ್ಪಿರುತ್ತಿದ್ದರು. ಅಂತಹ ಸರ್ಕಾರ ಹೋಗಲು ಕಾರಣರಾದ ನಮ್ಮನ್ನು ಜನ ಅಭಿನಂದಿಸಬೇಕು ಎಂದಿದ್ದಾರೆ.

ಎಂಎಲ್ಸಿ ಆಗಲ್ವಾ?
ಸೋತವರೆ ಡಿಸಿಎಂ ಆಗಿಲ್ಲವಾ? ನಾನು ಎಂಎಲ್ಸಿ ಆಗಲ್ಲವಾ? ಎಂದು ಎಚ್. ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ. ವಿಶ್ವನಾಥ್ ಅವರನ್ನು ಎಂಎಲ್ಸಿ ಮಾಡಲ್ಲ ಅನ್ನೋದು ಸುಳ್ಳು. ಹುಣಸೂರಿನಲ್ಲಿ ನಾನು ಸ್ಪರ್ಧಿಸಿ ಸೋತಿರುವುದಕ್ಕೂ, ಎಂಎಲ್ಸಿ ಆಗೋದಕ್ಕೂ ಏನು ಸಂಬಂಧ? ಈ ಸರ್ಕಾರ ಬರುವುದಕ್ಕೆ ಕಾರಣರಾಗಿರುವ ಎಲ್ಲರಿಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭರವಸೆ ಕೊಟ್ಟಿದ್ದಾರೆ.
ಇಡೀ ಪ್ರಪಂಚದಲ್ಲಿ ನಾಲಿಗೆ ಮಾತಿನ ಮೇಲೆ ನಿಲ್ಲುವ, ಕೊಟ್ಟ ಮಾತು ನೆರವೇರಿಸುವ ಏಕೈಕ ನಾಯಕ ಯಡಿಯೂರಪ್ಪ. ನಮಗೆ ಕೊಟ್ಟಿದ್ದ ಭರವಸೆಯನ್ನು ಅವರು ಈಡೇರಿಸುತ್ತಾರೆ, ಅದರಲ್ಲಿ ಸಂಶಯವೇ ಬೇಡ ಎಂದು ಹೇಳುವ ಮೂಲಕ ವಿಶ್ವನಾಥ್ ಅವರು, ಬಿಜೆಪಿಯಿಂದ ಪರಿಷತ್ ಪ್ರವೇಶಕ್ಕೆ ಒತ್ತಡ ಹಾಕಿದ್ದಾರೆ.

ತಿಂದು ತೇಗಿದ್ದು ಸಾಕು
ಇಷ್ಟು ದಿನ ತಿಂದು ತೇಗಿದ್ದು ಸಾಕು, ಈ ವರ್ಷ ಶುಲ್ಕ ಇಲ್ಲದೇ ಶಿಕ್ಷಣ ಕೊಡಿ. ಇಲ್ಲದಿದ್ದರೆ ಶುಲ್ಕ ವಿನಾಯಿತಿ ಕೊಡಿ ಎಂದು ಎಚ್. ವಿಶ್ವನಾಥ್ ಆಗ್ರಹಿಸಿದ್ದಾರೆ. ಖಾಸಗಿ ಶಾಲೆಗಳ ಉದ್ಧಟತನವನ್ನು ಸಹಿಸೋದಕ್ಕಾಗಲ್ಲ. ಅವರು ಇಷ್ಟು ಮಾಡಿದ್ದು ಸಾಕು. ಕೊರೊನಾ ಸಮಯದಲ್ಲಿ ಯಾರೆಲ್ಲಾ ಏನೇನೋ ತ್ಯಾಗ ಮಾಡಿದ್ದಾರೆ, ಇವರು ಒಂದು ವರ್ಷ ಫೀಸ್ ತೆಗೆದುಕೊಳ್ಳುವುದು ಬೇಡಾ ಬಿಡಿ.
ಸದ್ಯ ಶಾಲೆಗಳನ್ನು ಆರಂಭಿಸಲು ಅವಸರ ಬೇಡ. ರಾಜ್ಯದಲ್ಲಿ 37 ಜಯಂತಿಗಳಿಗೆ ಸರ್ಕಾರಿ ರಜಾ ಇದೆ. ಆ ರಜಾಗಳನ್ನು ರದ್ದು ಮಾಡಿ. ಖಾಸಗಿ ಶಾಲೆಗಳು ಶೇಕಡಾ 30 ರಿಂದ 50 ರಷ್ಟು ಶುಲ್ಕ ಕಡಿಮೆ ಮಾಡಲಿ. ಖಾಸಗಿ ಶಾಲೆಗಳು ಸರ್ಕಾರ ಅನುಮತಿ ಕೊಟ್ಟ ಮೇಲೆ ತಾನೇ ನಡೆಯೋದು? ಎಂದು ಮಾಜಿ ಶಿಕ್ಷಣ ಸಚಿವ ಎಚ್. ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications